ಮೈಸೂರು: ಉತ್ಪನ್ನವಾಗುತ್ತಿರುವ ವಿವಿಧ ವಸ್ತು ಗಳಿಗಾಗಿ ಜಗತ್ತಿನ ಎಲ್ಲ ಬಾಗಿಲುಗಳು ತೆರೆದು ಕೊಂಡಿವೆ. ಆದರೆ ಸಂಸ್ಕೃತಿಯ ವಿನಿಮಯಕ್ಕಾಗಿ ವಿಶ್ವದ ಕದಗಳು ಇದುವರೆಗೂ ತೆರೆದುಕೊಳ್ಳದೇ ಇರುವುದು ಬೇಸರದ ಸಂಗತಿ ಎಂದು ಜಾನಪದ ವಿದ್ವಾಂಸ ಡಾ.ಹಿ.ಶಿ.ರಾಮಚಂದ್ರೇಗೌಡ ವಿಷಾದ ವ್ಯಕ್ತಪಡಿಸಿದರು.
ಹಾಸನ ಜಿಲ್ಲಾ ಬಳಗ ವತಿಯಿಂದ ಎಂಜಿನಿಯರ್ಸ್ ಗಳ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಾಣಿಜ್ಯ ಕೇಂದ್ರಿತವಾಗಿ ಬೆಳೆಯುತ್ತಿರುವ ವಿಶ್ವದ್ಲ್ಲಲಿ ಸಂಸ್ಕೃತಿಗಳ ವಿನಿಮಯ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ನಿರಂತರ ಕೆಲಸಗಳು ನಡೆಯಬೇಕು. ಸಂಸ್ಕೃತಿಯ ಗುರುತಿನಿಂದ ಜನರೆಲ್ಲ ಒಗ್ಗೂಡಬೇಕು. ಸಂಸ್ಕೃತಿಯ ಮುಖಾಂತರ ಒಂದೆಡೆ ಒಗ್ಗೂಡಿ ಇತರರಿಗೆ ತೋರಿಸುವುದು ತಪ್ಪಲ್ಲ. ಸಂಸ್ಕೃತಿಯ ನೆಲೆಗಟ್ಟಿನ ಮೇಲೆ ಒಂದಾಗುವುದು ಉತ್ತಮ ಕೆಲಸ ಎಂದರು.
ಸಾಂಸ್ಕೃತಿಕ, ವೈಜಾನಿಕ, ನೈಸರ್ಗಿಕ ಸಾಧನೆಗಳಿಂದ ಸಂಸ್ಕೃತಿಯ ಮೌಲ್ಯ ವೃದ್ಧಿಯಾಗುತ್ತದೆ. ಅಮೆರಿಕ ದಂತಹ ದೇಶಗಳು ವೈವಿಧ್ಯಮಯ ವೈಜ್ಞಾನಿಕ ಮಾದರಿಗಳನ್ನು ನಿರ್ಮಿಸುತ್ತಿವೆ. ಆದರೆ, ಅವರಲ್ಲಿ ವಿಜ್ಞಾನದಲ್ಲಿರುವಷ್ಟು ಶ್ರೀಮಂತಿಕೆ ಸಂಸ್ಕೃತಿಯಲ್ಲಿಲ್ಲ ಎಂದು ಹೇಳಿದರು.
ಬಳಗದ ವತಿಯಿಂದ ಪುಟ್ಟರಾಜೇಗೌಡ (ಬೆಮೆಲ್ ಉದ್ಯೋಗಿ), ಬಿ.ಆರ್.ನಿಂಗರಾಜು (ಸೈನಿಕ), ಮರಸು ಹಿರೇಗೌಡ ರೇವಪ್ಪ (ಪೊಲೀಸ್ ವೈರ್ಲೆಸ್ ವಿಭಾಗ ಅಧಿಕಾರಿ) ಅವರನ್ನು ಸನ್ಮಾನಿಸಲಾಯಿತು. ಪಿಯುಸಿ ಯಲ್ಲಿ ಅತಿಹೆಚ್ಚು ಅಂಕಪಡೆದ ನಮೃತ, ಸೀಮಾ, ಎನ್.ಅರ್ಜುನ ಹಾಗೂ ಎಸ್ಎಸ್ಎಲ್ಸಿಯಲ್ಲಿ ಉತ್ತಮ ಸಾಧನೆ ಮಾಡಿದ ಶೀತಲ್, ಎನ್.ರಚನಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಬಳಗದ ಅಧ್ಯಕ್ಷೆ ಪಿ.ಶಾರದಮ್ಮ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಎನ್.ಅಣ್ಣೇಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಕೆ.ಬಸವರಾಜು, ಯದುನಾಥ, ಕೃಷ್ಣೇಗೌಡ, ಟಿ.ಎಸ್.ರಾಮಚಂದ್ರ, ಪುಟ್ಟಸ್ವಾಮಿಗೌಡ, ಎಸಿಪಿ ಸೋಮೇಶ್, ರಂಗೇಗೌಡ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.