ಮೈಸೂರು: ಸರಸ್ವತಿಪುರಂನ ಕಾಮಾಕ್ಷಿ ಆಸ್ಪತ್ರೆ ಸಮೀಪದ ನಿಸರ್ಗ ಟ್ರಸ್ಟ್ ಆವರಣದಲ್ಲಿ ‘ಸಾವಯವ ರೈತರ ಸಂತೆ’ ಭಾನುವಾರ ನಡೆಯಿತು.
ಪ್ರತಿ ತಿಂಗಳ ಎರಡನೇ ಶನಿವಾರ ಹಾಗೂ ಭಾನುವಾರದಂದು ಸಂತೆ ನಡೆಯುತ್ತದೆ. ಇದರಲ್ಲಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ 10ಕ್ಕೂ ಹೆಚ್ಚು ಸಾವಯವ ಕೃಷಿಕರು ಪಾಲ್ಗೊಳ್ಳುತ್ತಾರೆ.
ಈ ಶನಿವಾರ ಚುನಾವಣೆ ಇದ್ದುದರಿಂದ ಸಂತೆಯನ್ನು ನಡೆಸಿರಲಿಲ್ಲ. ಈ ಸಂತೆಯಲ್ಲಿ ನಾಲ್ವರು ಕೃಷಿಕರು
ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿದರು.
ಸಾವಯವ ವಿಧಾನದಲ್ಲಿ ಬೆಳೆದ ಟೊಮೆಟೊ, ಬದನೆ, ಕ್ಯಾರೆಟ್, ಬೀನ್ಸ್, ಹಲಸಿನ ಹಣ್ಣು, ನೀರು ಸೇಬು, ಬಾಳೆಹಣ್ಣು, ವಿವಿಧ ಸೊಪ್ಪುಗಳು, ಬೇಳೆಕಾಳು, ಅಕ್ಕಿ, ಬೆಲ್ಲ, ಎಣ್ಣೆ ಹಾಗೂ ಸಿರಿಧಾನ್ಯಗಳಿಂದ ತಯಾರಿಸಿದ ತಿಂಡಿ–ತಿನಿಸುಗಳನ್ನು ಮಾರಾಟ ಮಾಡಲಾಯಿತು.
‘ಸಾವಯವ ಕೃಷಿಯನ್ನು ಉತ್ತೇಜಿಸುವುದು, ಸಾವಯವ ಉತ್ಪನ್ನಗಳನ್ನು ರೈತರಿಂದ ಗ್ರಾಹಕರಿಗೆ ನೇರವಾಗಿ ತಲುಪಿಸುವ ಉದ್ದೇಶದಿಂದ ಸಂತೆ ಮಾಡುತ್ತಿದ್ದೇವೆ. ಬೆಳೆದ ಉತ್ಪನ್ನಗಳನ್ನು ತಂದು ಗ್ರಾಹಕರಿಗೆ ನೇರವಾಗಿ ರೈತರು ಮಾರಾಟ ಮಾಡುತ್ತಾರೆ. ನಾವು ರೈತರಿಂದ ಯಾವುದೇ ರೀತಿಯ ಕಮಿಷನ್ ಪಡೆಯುವುದಿಲ್ಲ’ ಎಂದು ನಿಸರ್ಗ ಟ್ರಸ್ಟಿನ ಟ್ರಸ್ಟಿ ಅಪ್ಪಾಜಿಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
ಸಾವಯವ ಉತ್ಪನ್ನಗಳಿಗೆ ಗ್ರಾಹಕರಿಂದ ಉತ್ತಮ ಬೇಡಿಕೆ ಇದೆ. ಆರೋಗ್ಯ ದೃಷ್ಟಿಯಿಂದಲೂ ಈ ಉತ್ಪನ್ನಗಳು ಪ್ರಯೋಜನಕಾರಿ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.