ADVERTISEMENT

ಸಿದ್ದು ಪರ ಸಾಹಿತಿಗಳ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 6:48 IST
Last Updated 23 ಏಪ್ರಿಲ್ 2013, 6:48 IST

ತಿ.ನರಸೀಪುರ: ವಿರೋಧ ಪಕ್ಷದ ನಾಯಕ, ವರುಣಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಪರವಾಗಿ ತಾಲ್ಲೂಕಿನ ತುಂಬಲ ಗ್ರಾಮದಲ್ಲಿ ಮುಖಂಡ ಎಲ್.ರೇವಣಸಿದ್ದಯ್ಯ ನೇತತ್ವದಲ್ಲಿ ಸೋಮವಾರ ಪ್ರಗತಿಪರ ಸಾಹಿತಿಗಳು ಪಾದಯಾತ್ರೆ ನಡೆಸಿದರು.

ಈ ವೇಳೆ ಮಾತನಾಡಿದ ಮುಖಂಡರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸ್ಥಿರ ಸರ್ಕಾರ ನೀಡಲಿದೆ. ಈ ಭಾಗದ ಜನಪ್ರತಿನಿಧಿಯಾಗಿರುವ ಸಿದ್ದರಾಮಯ್ಯ ಅವರಿಗೆ ರಾಜ್ಯದ ಚುಕ್ಕಾಣಿ ಹಿಡಿಯುವ ಅವಕಾಶವಿದೆ. ಸಮರ್ಥ ನಾಯಕತ್ವ, ಉತ್ತಮ ಆಡಳಿತ ನೀಡಲು ಸಿದ್ದರಾಮಯ್ಯ ಅವರನ್ನು ಗೆಲ್ಲಿಸಲೇಬೇಕಿದೆ ಎಂದರು.

ಬಿಜೆಪಿ ಸರ್ಕಾರವಿದ್ದಾಗ ಭ್ರಷ್ಟಚಾರವನ್ನು ಹೊರಗೆ ಮತ್ತು ಒಳಗೆ ನೋಡಿರುವ ಜನತೆ ಅಸಹ್ಯಪಡುತ್ತಿದ್ದಾರೆ. ಕೆಜೆಪಿ ಈ ಕ್ಷೇತ್ರದಲ್ಲಿ ಮಾಡುತ್ತಿರುವ ದುಂದುವೆಚ್ಚದ ಬಗ್ಗೆಯೂ ಸಾರ್ವಜನಿಕರಿಗೆ ಅರಿವಿದೆ. ಅನಾಚರದ ಮತ್ತೊಂದು ಕವಲು ಕೆಜೆಪಿಯಾದ್ದರಿಂದ ಭ್ರಷ್ಟಚಾರದ ಹಣವನ್ನು ಚುನಾವಣೆಗೆ ಬಳಸಲಾಗುತ್ತಿದೆ ಎಂದು ದೂರಿದರು.

ಯಾವುದೇ ಪಕ್ಷ ಒಂದು ಜಾತಿಗೆ ಸೀಮಿತವಲ್ಲ, ಜಾತಿಯೊಂದು ರಾಜಕೀಯ ಪಕ್ಷವನ್ನು ಆಕ್ರಮಿಸಿಕೊಂಡಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರ‌್ಯಾರೂ ಯಾವ್ಯಾವ ರಾಜಕೀಯ ಪಕ್ಷವನ್ನಾಗಲಿ, ರಾಜಕೀಯವಾಗಿ ಉತ್ತಮ ನಾಯಕತ್ವವನ್ನು ಮನಸ್ಸಿಗೆ ಇಷ್ಟವಾದರೆ ಬೆಂಬಲಿಸುವಷ್ಟು ಸ್ವತಂತ್ರವಿದೆ.

ಚುನಾವಣೆಯಲ್ಲಿ ಬಹುಮುಖ ಪಕ್ಷಗಳ ಸ್ಪರ್ಧೆ ನಡೆಯೋದು ಸಾಮಾನ್ಯ. ಅದಕ್ಕಾಗಿ ಸಮುದಾಯದ ನಡುವೆ ಬಿರುಕು ಮೂಡಿಸುವ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂಬ ಆರೋಪದಲ್ಲಿ ಸತ್ಯವಿಲ್ಲ ಎಂದು ಮುಖಂಡ ರೇವಣಸಿದ್ದಯ್ಯ  ಅಭಿಪ್ರಾಯಪಟ್ಟರು.  

ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಬಸವೇಗೌಡ, ಸಾಹಿತಿಗಳಾದ ಪ್ರೊ.ಮರುಳಸಿದ್ದಪ್ಪ, .ಮಾನಸ, ಪ್ರೊ.ಸಿದ್ದರಾಮಯ್ಯ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಅಂದಾನಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಮಹದೇವ, ಎಂ.ಸುಧಾ ಮಹದೇವಯ್ಯ, ಮಾಜಿ ಉಪಮೇಯರ್ ಓಂಕಾರ್‌ಪ್ರಸಾದ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಪ್ಯ ಆರ್.ಭಾಗ್ಯ, ವರುಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಮುದ್ದೇಗೌಡ(ರಮೇಶ್), ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸಿ.ವೆಂಕಟೇಶ್, ಬಿ.ಮರಯ್ಯ, ಜಮಲಾರ, ರಂಗಸಮುದ್ರ ಬಿ.ಶಿವಸ್ವಾಮಿ, ಟಿ.ಎಸ್. ಪ್ರಶಾಂತ್‌ಬಾಬು, ವರುಣ ಮಹೇಶ್ಷ್ ಹೆಳವರಹುಂಡಿ ಸೋಮು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚುಂಚೇಗೌಡ, ಮುಖಂಡರಾದ ಪಿ.ಸ್ವಾಮಿನಾಥ್‌ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.