ADVERTISEMENT

ಕೋವಿಡ್‌ ಭೀತಿಯಿಂದ ಕಟ್ಟುನಿಟ್ಟಿನ ಕ್ರಮ: ಈ ಗ್ರಾಮಕ್ಕೆ ಹೋದರೆ ₹25,000 ದಂಡ

ಹಂಪಾಪುರ ಹೋಬಳಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 3:31 IST
Last Updated 28 ಜುಲೈ 2020, 3:31 IST
ಹಂಪಾಪುರ ಸಮೀಪದ ಕೋಳಗಾಲ ಹೊಸಬಡಾವಣೆ ಹೊರವಲಯದಲ್ಲಿ ಗ್ರಾಮಕ್ಕೆ ಹೊರಗಿನವರಿಗೆ ನಿರ್ಬಂಧ ವಿಧಿಸಿ ಹಾಕಿರುವ ಬೋರ್ಡ್‌
ಹಂಪಾಪುರ ಸಮೀಪದ ಕೋಳಗಾಲ ಹೊಸಬಡಾವಣೆ ಹೊರವಲಯದಲ್ಲಿ ಗ್ರಾಮಕ್ಕೆ ಹೊರಗಿನವರಿಗೆ ನಿರ್ಬಂಧ ವಿಧಿಸಿ ಹಾಕಿರುವ ಬೋರ್ಡ್‌   

ಹಂಪಾಪುರ: ಕೊರೊನಾ ಸೋಂಕಿತರ ಸಂಖ್ಯೆ ಗ್ರಾಮೀಣ ಭಾಗಗಳಲ್ಲೂ ಹೆಚ್ಚುತ್ತಿರುವುದರಿಂದಹೋಬಳಿಯ ಕೆಲ ಗ್ರಾಮಗಳಲ್ಲಿ ಮುಖಂಡರು ಹೊರಗಿನವರನ್ನು ನಿಯಂತ್ರಿಸಲು ಉಪಾಯ ಕಂಡುಕೊಂಡಿದ್ದಾರೆ.

ಬೆಂಗಳೂರು ಸೇರಿದಂತೆ ದೊಡ್ಡದೊಡ್ಡ ನಗರಗಳಿಗೆ ಉದ್ಯೋಗಕ್ಕಾಗಿ ಹೋಗಿರುವ ಹಳ್ಳಿಗರು ಮರಳಿ ಊರುಗಳಿಗೆ ಬರಬೇಕೆಂದರೆ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್‌ ವರದಿಯೊಂದಿಗೆ ಬರಬೇಕು. ಆಗ ಮಾತ್ರ ಗ್ರಾಮಕ್ಕೆ ಪ್ರವೇಶ ಮಾಡಿಕೊಳ್ಳುತ್ತಿದ್ದಾರೆ. ಹಾಗೇ ಬರುವವರಿಗೆ ಕೆಲ ಹಳ್ಳಿಗಳಲ್ಲಿ ನಿರ್ಬಂಧ ವಿಧಿಸಲಾಗಿದೆ.

ಹಂಪಾಪುರ ಸಮೀಪದ ಕೋಳಗಾಲ ಹೊಸಬಡಾವಣೆಯಲ್ಲಿ ಮುಖಂಡರೆಲ್ಲಾ ತೀರ್ಮಾನ ಕೈಗೊಂಡು ಹೊರವಲಯದಲ್ಲಿ ನಾಮಫಲಕವನ್ನು ಅಳವಡಿಸಿದ್ದಾರೆ.

ADVERTISEMENT

ನಾಮಫಲಕದಲ್ಲಿ ‘ಸಂಘ, ಸಂಸ್ಥೆ, ಬ್ಯಾಂಕ್‌ನವರು, ತರಕಾರಿ, ಬಟ್ಟೆ ವ್ಯಾಪಾರಿಗಳು, ಮಾಂಸ, ಮೀನು ಮಾರಾಟಗಾರರು ಯಾವುದೇ ಕಾರಣಕ್ಕೂ ಪ್ರವೇಶಿಸುವಂತಿಲ್ಲ, ಬೇರೆ ಗ್ರಾಮದ ಜನರು, ದಲ್ಲಾಳಿಗಳು ಸಹ ಬರುವಂತಿಲ್ಲ. ನಿಯಮ ಮೀರಿದರೆ ₹25,000 ದಂಡ ವಿಧಿಸಲಾಗುವುದು’ ಎಂಬ ಬರಹಒಳಗೊಂಡಿದೆ.

‘ಗ್ರಾಮಸ್ಥರ ಆರೋಗ್ಯದ ದೃಷ್ಟಿಯಿಂದ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂಬ ನಿಯಮ ಹಾಕಿಕೊಂಡಿದ್ದೇವೆ. ಜನರ ಆರೋಗ್ಯಕ್ಕಿಂತ ಯಾವುದೂ ಮುಖ್ಯವಲ್ಲ. ಕೋವಿಡ್‌ ನಿಯಂತ್ರಣಕ್ಕೆ ಬರುವವರೆಗೂ ಈ ನಿಯಮ ಪಾಲಿಸಬೇಕು’ ಎಂದು ಕೋಳಗಾಲ ಹೊಸಬಡಾವಣೆಯ ನಿವಾಸಿ ಮಹದೇವ ತಿಳಿಸಿದರು.

ಎಚ್‌.ಡಿ.ಕೋಟೆ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಈ ರೀತಿಯ ಸ್ವಯಂ ನಿರ್ಬಂಧ ವಿಧಿಸಿಕೊಳ್ಳಲಾಗಿದ್ದು, ತರಕಾರಿ, ಬಟ್ಟೆ ವ್ಯಾಪಾರಿಗಳು ಗ್ರಾಮಗಳಿಗೆ ಹೋಗಲಾರದೆ ಪರದಾಡುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.