ADVERTISEMENT

‘ಪ‍ರ್ವ’ಕ್ಕಾಗಿ ₹50 ಲಕ್ಷ ಕೊಡಿಸುವೆ: ಶಾಸಕ

ರಂಗಾಯಣದಲ್ಲಿ ಗಮನ ಸೆಳೆದ ‘ರಾಗ ಸರಾಗ’ ಹಾಗೂ ಕೋಲಾಟ

​ಪ್ರಜಾವಾಣಿ ವಾರ್ತೆ
Published 1 ಜನವರಿ 2021, 2:38 IST
Last Updated 1 ಜನವರಿ 2021, 2:38 IST
ಮೈಸೂರಿನ ರಂಗಾಯಣದಲ್ಲಿ ಗುರುವಾರ ನಡೆದ ‘ರಾಗ ಸರಾಗ’ ಕಾರ್ಯಕ್ರಮ ದಲ್ಲಿ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು
ಮೈಸೂರಿನ ರಂಗಾಯಣದಲ್ಲಿ ಗುರುವಾರ ನಡೆದ ‘ರಾಗ ಸರಾಗ’ ಕಾರ್ಯಕ್ರಮ ದಲ್ಲಿ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು   

ಮೈಸೂರು: ಸಾಹಿತಿ ಎಲ್.ಎಲ್.ಭೈರಪ್ಪ ಅವರ ‘ಪರ್ವ’ ಕಾದಂಬರಿಯನ್ನು ರಂಗರೂಪಕ್ಕೆ ತರಲು ₹50 ಲಕ್ಷದಷ್ಟು ಹಣವನ್ನು ಸರ್ಕಾರದಿಂದ ರಂಗಾಯಣಕ್ಕೆ ಕೊಡಿಸುವುದಾಗಿ ಶಾಸಕ ಎಲ್.ನಾಗೇಂದ್ರ ಭರವಸೆ ನೀಡಿದರು.

ರಂಗಾಯಣದ ಭೂಮಿಗೀತದಲ್ಲಿ ಗುರುವಾರ ಅವರು ‘ಕೋವಿಡ್ ಕತ್ತಲೆಯಲ್ಲೂ ರಂಗಬೆಳಕು’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

‘ಪರ್ವ’ ಕಾದಂಬರಿಯ ರಂಗ ಪ್ರಯೋಗ ಮಹತ್ವದ ಕಾರ್ಯ. ಇದಕ್ಕೆ ಹೆಚ್ಚಿನ ಹಣ ಬೇಕಿರುವುದು ನಿಜ. ಕಾರ್ಯಪ್ಪ ಅವರೊಂದಿಗೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಅಗತ್ಯ ಇರುವ ಹಣವನ್ನು ಕೊಡಿಸಲು ಬದ್ಧನಾಗಿದ್ದೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ’ ಎಂದು ಹೇಳಿದರು.

ADVERTISEMENT

ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಮಾತನಾಡಿ, ‘ಕೊರೊನಾ ಸಂದರ್ಭದಲ್ಲಿಯೂ ರಂಗಾಯಣ ಸುಮ್ಮನಿರಲಿಲ್ಲ. ಜೂನ್ 5ರಿಂದ ಮುನ್ನಚ್ಚರಿಕೆ ಕ್ರಮಗಳೊಂದಿಗೆ ಯಶಸ್ವಿಯಾಗಿ ರಂಗ ಚಟುವಟಿಕೆಗಳನ್ನು ಆರಂಭಿಸಲಾಯಿತು. ಇವುಗಳೆಲ್ಲದರ ದಾಖಲೆಯೆ ‘ಕೋವಿಡ್ ಕತ್ತಲೆಯಲ್ಲೂ ರಂಗ ಬೆಳಕು’ ಪುಸ್ತಕ ಎಂದರು.

ನಿರ್ದೇಶಕ ಶಶಿಧರ ಅಡಪ, ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಇದ್ದರು.

ಸೂಜಿಗಲ್ಲಿನಂತೆ ಸೆಳೆದ ‘ರಾಗ-ಸರಾಗ’: ರಂಗಾಯಣದಲ್ಲಿ ನಡೆದ ‘ರಾಗ–ಸರಾಗ’ ಕಾರ್ಯಕ್ರಮ ನೋಡುಗರನ್ನು ಬಹುವಾಗಿ ಸೆಳೆಯಿತು.

ಬಿ.ವಿ.ಕಾರಂತ ಅವರು ಅವಾದ್ಯ ಕಛೇರಿಯನ್ನು 31 ವರ್ಷದ ಹಿಂದೆ ನಡೆಸಿದ್ದರು. ಕಲ್ಲು, ಜಾಗಟೆ, ಮಡಕೆ, ಚಿಟಿಕೆ, ಬಿದಿರಿನ ಬೊಂಬು, ತೆಂಗಿನಕಾಯಿ ಚಿಪ್ಪು ಮೊದಲಾದ ವಸ್ತುಗಳನ್ನು ನುಡಿಸುವ ಮೂಲಕ ಹೊಸದೊಂದು ಪ್ರಯೋಗ ಮಾಡಿದ್ದರು. ಈಗ ಮತ್ತೆ ಅದೇ ಸಂಗೀತ
ಕಛೇರಿ ಕೇಳಿ ಬಂದಿತು. ಇದಕ್ಕೂ ಮುನ್ನ ನಡೆದ ಕೋಲಾಟ ಸೂಜಿಗಲ್ಲಿನಂತೆ ಸೆಳೆಯಿತು. ಕಲಾವಿದ ಧನಂಜಯ್ಯ ಮತ್ತು ಸಂಗಡಿಗರು ಹಾಡಿದ ಮಂಕುತಿಮ್ಮನ ಕಗ್ಗವೂ ಬಹುವಾಗೆ ಸೆಳೆಯುವಲ್ಲಿ ಸಫಲವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.