ಹುಣಸೂರು: ತಾಲ್ಲೂಕಿನ ನೇರಳಕುಪ್ಪೆಯಲ್ಲಿ ರೈತನೊಬ್ಬ ಬೆಳೆದಿದ್ದ 17 ಕೆ.ಜಿ.ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡು ಆತನನ್ನು ಬಂಧಿಸಿದ್ದಾರೆ.
ನೇರಳಕುಪ್ಪೆ ಗ್ರಾಮದ ಅಮಾವಾಸೆ ಬಂಧಿತ ಆರೋಪಿ.
ಆತ ಗಾಂಜಾ ಬೆಳೆದಿರುವ ಖಚಿತ ಮಾಹಿತಿ ಮೇರೆಗೆ ಸೋಮವಾರ ಹುಣಸೂರು ಗ್ರಾಮಾಂತರ ಠಾಣೆ ಸಿಪಿಐ ಪೂವಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ವೇಳೆ ಆರೋಪಿ ಪರಾರಿಯಾಗಿದ್ದ. ಬಳಿಕ, ಆತ ಜಮೀನಿನಲ್ಲಿ ಬೆಳೆದಿದ್ದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಮಂಗಳವಾರ ಬೆಳಿಗ್ಗೆ ಪಂಚವಳ್ಳಿ ಮಾರ್ಗದಲ್ಲಿ ಹೋಗುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಡಿವೈಎಸ್ಪಿ ಸುಂದರ್ರಾಜ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿ ಅಮಾವಾಸೆ ತನ್ನ ಜಮೀನಿನಲ್ಲಿ 30X40 ಅಳತೆಯಷ್ಟು ಪ್ರದೇಶದ ಸುತ್ತಲೂ ವಿವಿಧ ಗಿಡಗಳನ್ನು ಬೇಲಿಯಂತೆ ಬೆಳೆಸಿ ಅದರ ನಡುವೆ ಗಾಂಜಾ ಬೆಳೆದಿದ್ದನು ಎಂದು ಸಿಪಿಐ ಪೂವಯ್ಯ ಮಾಹಿತಿ ನೀಡಿದರು.
ಕಾರ್ಯಾಚರಣೆಯಲ್ಲಿ ಕಾನ್ಸ್ಟೆಬಲ್ ಬೀರೇಗೌಡ, ಗಣೇಶ್, ಶಿವರಾಜ್, ಸುರೇಶ್ ಮತ್ತು ಶ್ರೀಕಂಠ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.