
ಮೈಸೂರು: ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಇಲ್ಲಿನ ಕುಪ್ಪಣ್ಣ ಉದ್ಯಾನದಲ್ಲಿ ಮೂರು ದಿನಗಳವರೆಗೆ ಆಯೋಜಿಸಿದ್ದ ಮಾವು ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮಾವು ಬೆಳೆಯುವ ರೈತರು ಹಾಗೂ ಸವಿಯುವ ಗ್ರಾಹಕರ ನಡುವೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಮೇಳ ನಡೆಸಲಾಯಿತು. ಮೈಸೂರು, ಮಂಡ್ಯ, ಕನಕಪುರ, ರಾಮನಗರದ ಒಟ್ಟು 28 ರೈತರು ಪಾಲ್ಗೊಂಡಿದ್ದರು. 28 ಮಳಿಗೆಗಳ ವ್ಯವಸ್ಥೆ ಮಾಡಲಾಗಿತ್ತು. ಹಣ್ಣಿನ ಘಮ ಗ್ರಾಹಕರನ್ನು ಸೆಳೆದಿದೆ.
‘ಬಾದಾಮಿ 22 ಟನ್, ಮಲ್ಲಿಕಾ 8, ಮಲ್ಗೋವಾ 6.5, ದಶೇರಿ 3.5, ಸಕ್ಕರೆಗುತ್ತಿ 1.5, ರಸಪುರಿ 13, ತೋತಾಪುರಿ 2.5, ಸಿಂದೂರ 3, ಕೇಸರ್ 1.5, ಹಿಮಾಮ್ ಪಸಂದ್ 1, ರುಮಾನಿ 0.3 ಹಾಗೂ ಆಲ್ಫಾನ್ಸೊ 5.5 ಟನ್ ಮಾರಾಟವಾಯಿತು. ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ಗ್ರಾಹಕರು ಸವಿದರು. ಹಲವರು ಕುಟುಂಬ ಸಮೇತ ಮೇಳದಲ್ಲಿ ಪಾಲ್ಗೊಂಡಿದ್ದರು. 30 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಒಟ್ಟು 88 ಟನ್ ಹಣ್ಣು ಮಾರಾಟವಾಯಿತು’ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರುದ್ರೇಶ್ ಕೆ. ‘ಪ್ರಜಾವಾಣಿ’ಗೆ ತಿಳಿಸಿದರು.
‘ಹಲವು ತಳಿಗಳ ಹಣ್ಣುಗಳನ್ನು ಒಂದೇ ಸೂರಿನಲ್ಲಿ ನೋಡುವ ಹಾಗೂ ಖರೀದಿಸುವ ಅವಕಾಶವನ್ನು ಗ್ರಾಹಕರಿಗೆ ಒದಗಿಸಲಾಗಿತ್ತು. ಉತ್ತಮವಾಗಿ ವ್ಯಾಪಾರವಾದ್ದರಿಂದ ರೈತರೂ ಖುಷಿ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.