
ಮೈಸೂರು: ‘ಪ್ರತಿ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಿಂದ ಸೈಬರ್ ಲ್ಯಾಬ್ ಮಾಡಲಾಗುತ್ತಿದೆ. ಆನ್ಲೈನ್ ವಂಚನೆ ಪ್ರಕರಣ ಬೇಧಿಸುವ ಬಗ್ಗೆ ತರಬೇತಿ ನೀಡಲು ಸೂಚಿಸಲಾಗಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಭೆ ನಡೆಸಿ ಬಳಿಕ, ನಜರ್ಬಾದ್ ಠಾಣೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಮೈಸೂರಿನಲ್ಲಿ ಈ ವರ್ಷ ₹ 30 ಕೋಟಿ ಆನ್ಲೈನ್ ವಂಚನೆಯಾಗಿದೆ. ಈ ರೀತಿಯ ಪ್ರಕರಣ ಹೆಚ್ಚುತ್ತಿದ್ದು, ಪೊಲೀಸರಿಗೆ ತರಬೇತಿ ನೀಡಲಾಗುವುದು’ ಎಂದರು.
‘ವಿದ್ಯಾವಂತರು ಡಿಜಿಟಲ್ ಬಂಧನಕ್ಕೆ ಒಳಗಾಗುತ್ತಿರುವುದು ಆತಂಕಕಾರಿ. ಸರ್ಕಾರಿ ನಿವೃತ್ತ ಅಧಿಕಾರಿಗಳನ್ನು ಗುರಿಯಾಗಿಸಿ ವಂಚಕರು ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ನಿವೃತ್ತ ಐಟಿ ಉದ್ಯೋಗಿಯೊಬ್ಬರು ₹ 32 ಕೋಟಿ ಹಣ ಕಳೆದುಕೊಂಡಿದ್ದಾರೆ. ಹೀಗಾಗಿ, ಸೈಬರ್ ಅಫರಾದವನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ’ ಎಂದು ಹೇಳಿದರು.
‘ಪೊಲೀಸರ ನೇಮಕಾತಿಗಳನ್ನು ಸರ್ಕಾರ ತುರ್ತಾಗಿ ಮಾಡುತ್ತಿದೆ. ಪಿಎಸ್ಐ ಹಗರಣ ಆದ ಕಾರಣ ಪೊಲೀಸ್ ನೇಮಕಾತಿಯಲ್ಲಿ ವಿಳಂಬವಾಯಿತು. ಈ ವರ್ಷ ಪೊಲೀಸ್ ನೇಮಕಾತಿಯನ್ನ ಹೆಚ್ಚು ಮಾಡುತ್ತಿದ್ದೇವೆ. ಮೈಸೂರು ನಗರದಲ್ಲಿ ಹೆಚ್ಚುವರಿ ಠಾಣೆ ಮಾಡುವ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ಉದಯಗಿರಿ ಪೊಲೀಸ್ ಠಾಣೆಯನ್ನು ಈಗಾಗಲೇ ವಿಭಾಗ ಮಾಡಿದ್ದೇವೆ. ಇನ್ನೆಷ್ಟು ಹೆಚ್ಚುವರಿ ಠಾಣೆಗಳು ಬೇಕೆಂಬ ಬಗ್ಗೆ ಸಭೆ ನಡೆಸುತ್ತೇವೆ’ ಎಂದು ತಿಳಿಸಿದರು.
‘ಮೈಸೂರಿನಲ್ಲಿ ಸುಸಜ್ಜಿತವಾದ ಕರ್ನಾಟಕ ಪೊಲೀಸ್ ವಸ್ತುಸಂಗ್ರಹಾಲಯ (ಮ್ಯೂಸಿಯಂ) ನಿರ್ಮಿಸಲಾಗುವುದು. ರಾಜ್ಯ ಪೊಲೀಸ್ ಇಲಾಖೆಯು ಆರಂಭದಿಂದ ಇಲ್ಲಿಯವರೆಗೆ ಬೆಳೆದುಬಂದ ರೀತಿ ಹಾದಿಯನ್ನು ಅದರಲ್ಲಿ ಕಟ್ಟಿಕೊಡಲಾಗುವುದು’ ಎಂದರು.
ಕೆಎಸ್ಆರ್ಪಿ ಆಶ್ವಾರೋಹಿ ದಳ ಕಂಪನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿ ಮತ್ತು ಸಿಬ್ಬಂದಿಯಿಂದ ಮಾಹಿತಿ ಪಡೆದರು. ಆರಕ್ಷಕ ಅಶ್ವದಳದ ವಸ್ತುಸಂಗ್ರಹಾಲಯವನ್ನು ವೀಕ್ಷಿಸಿದರು.
ದಕ್ಷಿಣ ವಲಯ ಡಿಐಜಿ ಡಾ.ಎಂ.ಬಿ. ಬೋರಲಿಂಗಯ್ಯ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಎಸ್ಪಿ ಎನ್. ವಿಷ್ಣುವರ್ಧನ್, ಡಿಸಿಪಿಗಳಾದ ಆರ್.ಎನ್. ಬಿಂದುಮಣಿ, ಕೆ.ಎಸ್. ಸುಂದರ್ ರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.