ಪಿರಿಯಾಪಟ್ಟಣ: ತಾಲ್ಲೂಕಿನ ಅಲನಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ಯುವ ಬಳಗದ ಗುರುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಜೋಡೆತ್ತಿನ ಗಾಡಿ ಓಟದ ಸ್ಪರ್ಧೆ ಗ್ರಾಮೀಣ ಜನರಲ್ಲಿ ಹೊಸ ಉತ್ಸಾಹ ಮೂಡಿಸಿತು.
ಸೂರ್ಯ ಮೇಲೆಳುತ್ತಿದ್ದಂತೆ ಗ್ರಾಮದ ಬಯಲಿನಲ್ಲಿ ಜನ ಸೇರಲಾರಂಭಿಸಿದರು. ಬಿಸಿಲು ಹೆಚ್ಚಾಗುತ್ತಿದ್ದಂತೆ ಪ್ರೇಕ್ಷಕರ ಸಂಖ್ಯೆ ಏರತೊಡಗಿತು. 50 ಹೆಚ್ಚು ಜೋಡಿಗಳ ಮಾಲೀಕರು ತಮ್ಮ ಎತ್ತುಗಳ ಸಾಮರ್ಥ್ಯ ಪರೀಕ್ಷೆ ಸಜ್ಜಾದರು.
ಸಂಜೆಯಾದರೂ ಸ್ಪರ್ಧೆಯ ರಂಗು ಮುಗಿದಿರಲಿಲ್ಲ. ರಾತ್ರಿ ಹೊನಲು – ಬೆಳಕಿನಲ್ಲೂ ಮುಂದುವರೆ ಯಲಿದೆ ಎಂದು ಆಯೋಜಕರು ತಿಳಿಸಿದರು.
ಸ್ಪರ್ಧೆಯಲ್ಲಿ ಮಂಡ್ಯ, ಮೈಸೂರು, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳ ಎತ್ತಿನ ಜೋಡಿಗಳು ಪಾಲ್ಗೊಂಡಿದ್ದು, ಸ್ಪರ್ಧೆ ಜನಾಕರ್ಷಿಸಿತು.
ಸ್ಪರ್ಧೆಗೆ ಚಾಲನೆ ನೀಡಿದ ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಟಿ. ರಂಗಸ್ವಾಮಿ,ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುವುದು ಅಗತ್ಯ. ಇದರಿಂದ ಜಾನುವಾರುಗಳ ಮೇಲೆ ಪ್ರೀತಿ ಹಾಗೂ ಪರಸ್ಪರ ಬಾಂಧವ್ಯ ವೃದ್ಧಿಯಾಗುತ್ತದೆ’ ಎಂದರು.
‘ಕಬಡ್ಡಿ, ಕೊಕ್ಕೊ ಸೇರಿದಂತೆ ಇನ್ನಿತರ ಗ್ರಾಮೀಣ ಕ್ರೀಡೆ ಆಯೋಜಿಸಿ ದರೆ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ’ ಎಂದರು.
ಉದ್ಘಾಟನಾ ಸಮಾರಂಭದಲ್ಲಿ ಹುಣಸವಾಡಿ ಗ್ರಾ.ಪಂ. ಅಧ್ಯಕ್ಷ ಸುಶೀಲಮ್ಮ ಗಣೇಶ್, ಉಪಾಧ್ಯಕ್ಷ ಎ.ಜೆ. ಸ್ವಾಮಿ, ಗ್ರಾ.ಪಂ. ಸದಸ್ಯರಾದ ನಾಗರಾಜು, ಸ್ವಾಮಿನಾಯಕ, ಮುಖಂಡರಾದ ರವಿ, ಕುಮಾರ್, ಕಾರ್ಯಕ್ರಮದ ಆಯೋಜಕರಾದ ಸ್ವಾಮಿ, ಮಂಜು, ಚೇತನ್, ಪ್ರಸನ್ನ, ಮಂಜು, ನವೀನ್ ಮುಖಂಡರಾದ ಗುರುವಪ್ಪ, ಗಗನ್, ಶ್ರೀನಿವಾಸ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.