ADVERTISEMENT

ಹೇಮಾದ್ರಾಂಬಾ ಜಾತ್ರೆಯ ವಿಶೇಷ ಮೆರವಣಿಗೆ

ಅವಭೃತ ಸ್ನಾನ, ಅನ್ನನೈವೇದ್ಯಕ್ಕೆ ಅದ್ದೂರಿ ಮೆರವಣಿಗೆ: ಜನರನ್ನು ರಂಜಿಸಿದ ಜೋಡೆತ್ತಿನ ಬಂಡಿ ಉತ್ಸವ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2021, 5:09 IST
Last Updated 28 ಫೆಬ್ರುವರಿ 2021, 5:09 IST
ಬನ್ನೂರಿನಲ್ಲಿ ಶ್ರೀ ಹೇಮಾದ್ರಾಂಬಾ ದೇವಿಯನ್ನು ಶನಿವಾರ ದೇವಿ ತೋಪಿಗೆ ಅವಭೃತ ಸ್ನಾನ ಮತ್ತು ಅನ್ನನೈವೇದ್ಯಕ್ಕೆ ಹೊತ್ತುಕೊಂಡು ಭಕ್ತ ಸಮೂಹ ಸಾಗಿತು
ಬನ್ನೂರಿನಲ್ಲಿ ಶ್ರೀ ಹೇಮಾದ್ರಾಂಬಾ ದೇವಿಯನ್ನು ಶನಿವಾರ ದೇವಿ ತೋಪಿಗೆ ಅವಭೃತ ಸ್ನಾನ ಮತ್ತು ಅನ್ನನೈವೇದ್ಯಕ್ಕೆ ಹೊತ್ತುಕೊಂಡು ಭಕ್ತ ಸಮೂಹ ಸಾಗಿತು   

ಬನ್ನೂರು: ಇಲ್ಲಿಯ ಪುರಾಣ ಪ್ರಸಿದ್ಧ ಶ್ರೀ ಹೇಮಾದ್ರಾಂಬಾ ಜಾತ್ರೆಯ ವಿಶೇಷ ಪೂಜಾ ಕಾರ್ಯ ಶನಿವಾರ ಭಕ್ತರ ಸಂಭ್ರಮದ ನಡುವೆ ವಿಜೃಂಭಣೆಯಿಂದ ಜರುಗಿತು.

ಹೇಮಾದ್ರಾಂಬಾ ಕಿ ಜೈ.... ಚೌಕಾ ಚೌಕಾ... ಬರ್ತಾಳಮ್ಮ ಬರ್ತಾಳೆ ಹೇಮಾದ್ರಾಂಬಾ ಬರ್ತಾಳೆ... ಎಂದು ಕೂಗುವ ಮೂಲಕ, ಟವಲ್‌ಗ‌ಳನ್ನು ಮೇಲೆಸೆದು ಭಕ್ತರು ಆನಂದಿಸಿದರು.

ಪ್ರಾತಃ ಕಾಲದಲ್ಲಿ ದೇವಿಗೆ ಅಭಿಷೇಕ, ಕುಂಕುಮಾರ್ಚನೆಯ ನಂತರ ದೇವಿಯನ್ನು ಹೂವಿನ ಅಲಂಕಾರದಿಂದ ಸಿಂಗರಿಸಿ, ಮಹಾಮಂಗಳಾರತಿ ಮಾಡಲಾಯಿತು. ಸಾವಿರಾರು ಭಕ್ತರು ಸಾಲಗಿ ಬಂದು ದರ್ಶನ ಪಡೆದರು.

ADVERTISEMENT

ನಂತರ ಹೆಬ್ಬಾರೆ ಆಗಮನದಿಂದ ಪೀಠದಲ್ಲಿ ಅಲಂಕೃತವಾಗಿದ್ದ ದೇವರನ್ನು, ದೇವಾಲಯದಿಂದ ದೇವಿ ತೋಪಿಗೆ ಅವಭೃತ ಸ್ನಾನ ಮತ್ತು ಅನ್ನನೈವೇದ್ಯಕ್ಕೆ ಹೊತ್ತುಕೊಂಡು ಅದ್ಧೂರಿ ಮೆರವಣಿಗೆಯಲ್ಲಿ ಸಾಗಲಾಯಿತು. ಪಟ್ಟಣದ ದೊಡ್ಡ ಅಂಗಡಿ ಬೀದಿಯಿಂದ ಹೊರಟು ಆರ್‌ ಗೇಟ್‌ ಮುಖಾಂತರ ರತ್ನಮಹಲ್‌ ಚಿತ್ರಮಂದಿರದವರೆಗೆ ಸಾಗಿ ಬೋರೆದೇವರ ದೇವಾಲಯದಿಂದ ಚಾಮುಂಡಿ ದೇವಾಲಯದ ರಸ್ತೆಯ ಮಾರ್ಗವಾಗಿ ಕಾವೇರಿ ನದಿ ತೀರದ ದೇವಿ ತೋಪಿಗೆ ಸಾಗಿತು. ರಸ್ತೆಯುದ್ದಕ್ಕೂ ಸೇರಿದ್ದ ಜನರು ಜಯಘೋಷ ಕೂಗುತ್ತಾ ಹಬ್ಬನ್ನು ಆನಂದಿಸಿದರು.

ನಂತರ ಮಾಕನಹಳ್ಳಿಯ ದೇವಿತೋಪಿನಲ್ಲಿ ಅವಭೃತ ಸ್ನಾನ ನಡೆದು, ಹರಿಜನ ಬಾಂಧವರಿಂದ ಅನ್ನನೈವೇದ್ಯ ನೀಡಲಾಯಿತು. ಸಾವಿರಾರು ಮಂದಿ ವಿವಿಧ ಜಿಲ್ಲೆ, ತಾಲ್ಲೂಕು, ಗ್ರಾಮದಿಂದ ಆಗಮಿಸಿ ದೇವರ ದರ್ಶನ ಪಡೆದರು. ಎಲ್ಲರಿಗೂ ಅನ್ನಪ್ರಸಾದ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.