ತಿ.ನರಸೀಪುರ: ತಿ.ನರಸೀಪುರ ತಾಲ್ಲೂಕಿನ ಇಂಡುವಾಳು ಗ್ರಾಮದ ಬಳಿ ಬುಧವಾರ ನಸುಕಿನಲ್ಲಿ ಲಾರಿ ಮತ್ತು 2 ಬೈಕ್ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
ಎಚ್.ಡಿ.ಕೋಟೆ ತಾಲ್ಲೂಕಿನ ಕಂಚಮಹಳ್ಳಿ ಗ್ರಾಮದ ಮಧುಕುಮಾರ್ (20), ಸಿದ್ದೇಗೌಡನಹುಂಡಿ ಗ್ರಾಮದ ಮಧುಸೂದನ್ (24), ಕಂದೇಗಾಲ ಗ್ರಾಮದ ರಾಘವೇಂದ್ರ (25), ಒಡಿಸ್ಸಾ ರಾಜ್ಯದ ಅಹಮ್ಮದ್ ಖಾನ್ (38) ಮೃತಪಟ್ಟವರು.
ಇವರೆಲ್ಲರೂ ಮೈಸೂರಿನ ವಿವಿಧ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದರು. ಪರಸ್ಪರ ಸ್ನೇಹಿತರಾಗಿದ್ದರು. ತಾಲ್ಲೂಕಿನ ಹುಣಸೂರು ಗ್ರಾಮದ ಗೆಳೆಯರಾದ ಚೇತನ್ ಹಾಗೂ ವೀರಭದ್ರ ಎಂಬುವವರ ಮನೆಯಲ್ಲಿ ನಡೆಯುತ್ತಿದ್ದ ಚಾಮುಂಡೇಶ್ವರಿ ಹಬ್ಬಕ್ಕೆಂದು ತೆರಳಿದ್ದು. ಹಬ್ಬದೂಟ ಮುಗಿಸಿ ವಾಪಸ್ ಮೈಸೂರಿಗೆ2 ಬೈಕ್ಗಳಲ್ಲಿ ತೆರಳುತ್ತಿದ್ದರು.
ಬುಧವಾರ ನಸುಕಿನ 2 ಗಂಟೆ ಸುಮಾರಿನಲ್ಲಿ ಮೈಸೂರಿನಿಂದ ತಿ.ನರಸೀಪುರ ಕಡೆಗೆ ಬರುತ್ತಿದ್ದ ಲಾರಿ ಇಂಡುವಾಳು ಸಮೀಪದ ತಿರುವಿನಲ್ಲಿ ಇವರ ಬೈಕುಗಳಿಗೆ ಡಿಕ್ಕಿ ಹೊಡೆದಿದೆ.
ಇವರ ಹಿಂದೆ ಸುಜ್ಜಲೂರಿನ ಸ್ವಾಮಿ ಹಾಗೂ ಚಂದ್ರಶೇಖರ್ ಬರುತ್ತಿದ್ದು, ಅಪಘಾತ ಸಂಭವಿಸಿದ ತಕ್ಷಣ ಆಸ್ಪತ್ರೆಗೆ ಸೇರಿಸಲು ಯತ್ನಿಸಿದರು. ಆದರೆ, ಅಷ್ಟರಲ್ಲಿ ರಾಘವೇಂದ್ರ, ಅಹಮ್ಮದ್ ಖಾನ್ ಹಾಗೂ ಮಧುಕುಮಾರ್ ಸ್ಥಳದಲ್ಲೇ ಮೃತಪಟ್ಟರು. ಮಧುಸೂದನ್ ಮೈಸೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.
ಎಲ್ಲ ವಾಹನಗಳು ಅತಿ ವೇಗದಲ್ಲಿ ಇದ್ದ ಕಾರಣ ಮೃತಪಟ್ಟವರಲ್ಲಿ ಇಬ್ಬರು ಹೆಲ್ಮೆಟ್ ಧರಿಸಿದ್ದರೂ ಮೃತಪಟ್ಟಿದ್ದಾರೆ. ಹೆಲ್ಮೆಟ್ ಸಹ ನುಚ್ಚುನೂರಾಗಿದೆ. ಲಾರಿಯು ಅಡ್ಡಾದಿಡ್ಡಿಯಾಗಿ ಚಲಿಸಿ ಬೈಕ್ಗಳಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಲಾರಿ ಚಾಲಕ ಭಾರತಿ (24) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.