ADVERTISEMENT

ಲಸಿಕೆ ತ್ವರಿತಗತಿಯಲ್ಲಿ ತಲುಪಿಸಲು ಕ್ರಮ

ಕೋವಿಡ್‌ ನಂತರದ ಪುನಶ್ಚೇತನ ಕೇಂದ್ರಕ್ಕೆ ಸುಧಾಕರ್‌ ಚಾಲನೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 2:05 IST
Last Updated 6 ಅಕ್ಟೋಬರ್ 2020, 2:05 IST
ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಆರಂಭಿಸಿರುವ ಕೋವಿಡ್‌ ನಂತರದ ಪುನಶ್ಚೇತನ ಕೇಂದ್ರಕ್ಕೆ ಸಚಿವ ಸುಧಾಕರ್‌ ಭೇಟಿ ನೀಡಿದರು. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಇದ್ದಾರೆ
ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಆರಂಭಿಸಿರುವ ಕೋವಿಡ್‌ ನಂತರದ ಪುನಶ್ಚೇತನ ಕೇಂದ್ರಕ್ಕೆ ಸಚಿವ ಸುಧಾಕರ್‌ ಭೇಟಿ ನೀಡಿದರು. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಇದ್ದಾರೆ   

ಮೈಸೂರು: ಮುಂದಿನ ವರ್ಷ ಜುಲೈ ವೇಳೆಗೆ ಭಾರತಕ್ಕೆ 50 ಕೋಟಿ ಡೋಸ್ ಕೋವಿಡ್ ಲಸಿಕೆ ಲಭ್ಯವಾಗಬಹುದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ತಿಳಿಸಿದ್ದಾರೆ. ರಾಜ್ಯದಲ್ಲೂ ಲಸಿಕೆಯನ್ನು ತ್ವರಿತಗತಿಯಲ್ಲಿ ಜನರಿಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ಟಾಟಾ ಎಜುಕೇಷನ್‌ ಮತ್ತು ಡೆವಲಪ್‌ಮೆಂಟ್‌ ಟ್ರಸ್ಟ್‌ ಮೈಸೂರಿನ ಲಯನ್ಸ್‌ ಕ್ಲಬ್‌ ಮೂಲಕ ಜೆಎಸ್‌ಎಸ್‌ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ ₹ 51 ಲಕ್ಷ ಮೊತ್ತದ ವೈದ್ಯಕೀಯ ಪರಿಕರಗಳನ್ನು ಹಸ್ತಾಂತರಿಸಲು ಸುತ್ತೂರು ಮಠದ ಮೈಸೂರು ಶಾಖೆಯಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

65 ವರ್ಷಕ್ಕಿಂತ ಮೇಲಿನವರು, ವಿವಿಧ ಕಾಯಿಲೆಯಿಂದ ಬಳಲುತ್ತಿರು ವವರು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು ರೋಗನಿ ರೋಧಕ ಶಕ್ತಿ ಕಡಿಮೆಯಿರುವವರಿಗೆ ಲಸಿಕೆ ನೀಡಲು ಮೊದಲ ಪ್ರಾಶಸ್ತ್ಯ ಕೊಡಲಾಗುವುದು ಎಂದು ತಿಳಿಸಿದರು.

ADVERTISEMENT

ಮಾಸ್ಕ್ ಧರಿಸುವುದರಿಂದ ಕೊರೊನಾ ಹರಡುವುದನ್ನು ಶೇ 90ರಷ್ಟು ತಡೆಗಟ್ಟಬಹುದು. ಸಾರ್ವ ಜನಿಕರು ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಆದ್ದರಿಂದ ಮಾಸ್ಕ್‌ ಧರಿಸದವರಿಗೆ ದಂಡ ವಿಧಿಸುವ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಚಾಲನೆ: ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ನಿರ್ಮಿಸಿರುವ ಕೋವಿಡ್‌–19 ನಂತರದ ಪುನಶ್ಚೇತನ ಕೇಂದ್ರಕ್ಕೆ ಸಚಿವ ಡಾ.ಕೆ.ಸುಧಾಕರ್‌ ಸೋಮವಾರ ಚಾಲನೆ ನೀಡಿದರು.

ಕೋವಿಡ್‌ ನಂತರದ ಚಿಕಿತ್ಸೆ ಅತ್ಯಗತ್ಯ. ಕೋವಿಡ್‌ಗೆ ತುತ್ತಾದವರು ಅನೇಕ ರೀತಿಯ ಒತ್ತಡಗಳಿಗೆ ಒಳಗಾಗುತ್ತಾರೆ. ಅವರಿಗೆ ಮಾನಸಿಕ ಸ್ಥೈರ್ಯ ತುಂಬುವುದು ಅಗತ್ಯ. ಸರ್ಕಾರದಿಂದ ನಮಗೆ ಇಂತಹ ಕೇಂದ್ರ ಸ್ಥಾಪಿಸಲು ಇನ್ನೂ ಆಗಿಲ್ಲ. ಜೆಎಎಸ್‌ ಆಸ್ಪತ್ರೆಯಲ್ಲಿ ಈ ಕೇಂದ್ರ ಸ್ಥಾಪಿಸಿರುವುದು ಸ್ವಾಗತಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಕುಲಪತಿ ಡಾ.ಬಿ. ಸುರೇಶ್, ರಾಜ್ಯ ಸರ್ಕಾರದ ನಾಗರಿಕ ರಕ್ಷಣೆಯ ಕಮಾಂಡಿಂಗ್ ಆಫೀಸರ್ ಡಾ.ಪಿ.ಆರ್.ಎಸ್.ಚೇತನ, ಲಯನ್ಸ್ ಕ್ಲಬ್‍ನ ಎಂ.ಎನ್.ಜಯಪ್ರಕಾಶ್, ಕೆ.ಎನ್.ಮುನಿಯಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.