ADVERTISEMENT

ಹುಣಸೂರು | ಕೃಷಿ ಭೂಮಿ ದುರಸ್ತಿಗೆ ತಕರಾರು: ರೈತ ಸಂಘ ಖಂಡನೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 3:03 IST
Last Updated 8 ಫೆಬ್ರುವರಿ 2026, 3:03 IST
ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್‌
ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್‌   

ಹುಣಸೂರು: ‘ಅರಣ್ಯದಂಚಿನಲ್ಲಿ ಸಾಗುವಳಿ ಮಾಡುವ ಕೃಷಿ ಭೂಮಿ ದುರಸ್ತಿಗೊಳಿಸುವಂತೆ ಕಂದಾಯ ಇಲಾಖೆಗೆ ಮನವಿ ಮಾಡಿದ್ದು, ಅರಣ್ಯ ಇಲಾಖೆ ತಮ್ಮ ವ್ಯಾಪ್ತಿಗೆ ಸೇರಿದೆ ಎಂದು ತಕರಾರು ತೆಗೆದಿರುವುದು ರೈತ ಸಂಘ ಖಂಡಿಸುತ್ತದೆ’ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್‌ ಹೇಳಿದ್ದಾರೆ.

ತಾಲ್ಲೂಕಿನ ಅರಣ್ಯದಂಚಿನಲ್ಲಿ ದಶಕಗಳಿಂದ ಸಾಗುವಳಿ ಮಾಡುತ್ತಿರುವ ರೈತರ ಭೂಮಿ ದುರಸ್ತಿಗೊಳಿಸಿ ಹಕ್ಕು ಪತ್ರ ನೀಡಲು ಕಂದಾಯ ಇಲಾಖೆ ಮುಂದಾಗುತ್ತಿದ್ದಂತೆ ಅರಣ್ಯ ಇಲಾಖೆ ತಕರಾರು ತೆಗೆದಿದೆ. ಇದರಿಂದಾಗಿ ಕೃಷಿಕರು ಅತಂತ್ರ ಪರಿಸ್ಥಿತಿ ಎದುರಿಸುವಂತಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘1974ರಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆ ಅರಣ್ಯದಂಚಿನಲ್ಲಿ ಸರ್ವೆ ನಡೆಸಿ ಅರಣ್ಯ ಭೂಮಿ ಗುರುತಿಸಿದ ಬಳಿಕ ಕಂದಾಯ ಇಲಾಖೆ ಹಕ್ಕು ಪತ್ರ ನೀಡಿದೆ. ಭೂಮಿ ಅನುಭೋಗದಲ್ಲಿರುವ ರೈತರು ತಮ್ಮ ಭೂಮಿ ದುರಸ್ತಿಗೊಳಿಸಿಕೊಡುವಂತೆ ಮಾಡಿದ ಮನವಿಗೆ ಕಂದಾಯ ಇಲಾಖೆ ಮುಂದಾಗುತ್ತಿದ್ದಂತೆ ಅರಣ್ಯ ಇಲಾಖೆ 5ರಿಂದ 10 ಕಿ.ಮಿ. ದೂರದಲ್ಲಿರುವ ಕೃಷಿ ಭೂಮಿಯೂ ತಮ್ಮ ವ್ಯಾಪ್ತಿಗೆ ಸೇರಿದ್ದು ಎಂದು ತಕರಾರು ಮಾಡಿದೆ’ ಎಂದು ದೂರಿದ್ದಾರೆ.

ADVERTISEMENT

ಕ್ಷೇತ್ರದ ವಾರಂಚಿ, ಸೊಳ್ಳೆಪುರ ಭಾಗದಲ್ಲಿನ ಅರಣ್ಯದಂಚಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಅರಣ್ಯ ಇಲಾಖೆ ಕಿರುಕುಳ ನೀಡುತ್ತಿದ್ದು, ಈ ಸಂಬಂಧ ಸರ್ಕಾರ ಆದೇಶದ ಅನ್ವಯ ಕ್ರಮವಹಿಸಿ ಸಮಸ್ಯೆ ಪರಿಹರಿಸಬೇಕು ಇಲ್ಲವಾದಲ್ಲಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಮನವಿ: ‘ಕ್ಷೇತ್ರದ ಶಾಸಕ ಜಿ.ಡಿ.ಹರೀಶ್‌ ಗೌಡ ಮತ್ತು ಮಾಜಿ ಶಾಸಕ ಎಚ್.ಪಿ.ಮಂಜುನಾಥ್‌ ಒಗ್ಗೂಡಿ ಕ್ಷೇತ್ರದ ಅರಣ್ಯದಂಚಿನಲ್ಲಿ ಕೃಷಿ ಭೂಮಿ ಹೊಂದಿರುವ ರೈತರ ಸಮಸ್ಯೆ ಬಗೆ ಹರಿಸಬೇಕು. ಇತ್ತೀಚಿಗೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರೂ ಈ ಸಂಬಂಧ ಇತ್ತೀಚೆಗೆ ಅರಣ್ಯದಿಂದ 2 ರಿಂದ 3 ಕಿ.ಮಿ. ದೂರದಲ್ಲಿರುವ ಸಾಗುವಳಿ ಭೂಮಿಗೆ ಅರಣ್ಯ ಇಲಾಖೆ ಯಾವುದೇ ತಕರಾರು ಮಾಡದಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದು, ಅದರಂತೆ ಕ್ಷೇತ್ರದ ಶಾಸಕರು ಕ್ರಮವಹಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.