ಮೈಸೂರು: ನಗರದ ಹೃದಯ ಭಾಗದಲ್ಲಿ ಒಂಬತ್ತು ವರ್ಷಗಳ ಹಿಂದೆ ಆರಂಭವಾದ ‘ಅಂಬೇಡ್ಕರ್ ಭವನ’ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿಲ್ಲ. ಯೋಜನಾ ವೆಚ್ಚ ಮಾತ್ರ ಎರಡು ಪಟ್ಟು ಹೆಚ್ಚಾಗಿದ್ದು ಅನುಮಾನಗಳಿಗೆ ದಾರಿ ಮಾಡಿದೆ.
ನಿರ್ಮಾಣ ಕಾರ್ಯ ಆರಂಭವಾದ ನಂತರ ಮೂರು ಸರ್ಕಾರಗಳು, ಐವರು ಮುಖ್ಯಮಂತ್ರಿ ಹಾಗೂ ಆರು ಉಸ್ತುವಾರಿ ಸಚಿವರು ಬದಲಾಗಿದ್ದಾರೆ. ಆರಂಭದಲ್ಲಿದ್ದ ಯೋಜನೆ ವೆಚ್ಚ ಹೆಚ್ಚಾಗಿ ₹ 16.5 ಕೋಟಿಗೆ ಪ್ರಸ್ತಾವ ಸಲ್ಲಿಸಲಾ
ಗಿದೆ. ವಿಳಂಬವಾದಂತೆ ಕ್ರಿಯಾ ಯೋಜನೆ ಬದಲಾಗುತ್ತಲೇ ಇದ್ದು, ಸದ್ಯಕ್ಕೆ ಕಾಮಗಾರಿ ಸ್ಥಗಿತಗೊಂಡಿದೆ. ಕಾಮ
ಗಾರಿ ಪೂರ್ಣಗೊಳ್ಳಲು ಇನ್ನೆಷ್ಟು ವರ್ಷ ಬೇಕು ಎಂಬುದು ಸಾರ್ವಜನಿಕರ ಪ್ರಶ್ನೆ.
‘ಮುಡಾ ವತಿಯಿಂದ ಕಾಮಗಾರಿ ಕೈಗೊಳ್ಳಲಾಗಿದ್ದು, ಹವಾನಿಯಂತ್ರ ವ್ಯವಸ್ಥೆ ಆಗಬೇಕಿದೆ. ಕುರ್ಚಿಗಳ ಅಳವಡಿಕೆ, ಪ್ರೊಜೆಕ್ಟರ್ ರೂಂ ನಿರ್ಮಾಣ ಸೇರಿದಂತೆ 18 ಕೆಲಸಗಳು ಬಾಕಿ ಇವೆ. ಅನುದಾನದ ಕೊರತೆಯಿಂದ ವಿಳಂಬವಾಗಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕಿ ಬಿ.ಮಾಲತಿ ‘ಪ್ರಜಾವಾಣಿ’ಗೆ ಗುರುವಾರ ತಿಳಿಸಿದರು.
ನಗರದ ದೇವರಾಜ ಪೊಲೀಸ್ ಠಾಣೆ ಸಮೀಪ 7,470 ಚದರ ಮೀಟರ್ ವಿಸ್ತೀರ್ಣದಲ್ಲಿ ಸಮಾಜ ಕಲ್ಯಾಣ ಇಲಾಖೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ), ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಭವನ ನಿರ್ಮಿಸಲಾಗುತ್ತಿದೆ.
2012ರ ಮೇ 4ರಂದು ಆಡಳಿತಾತ್ಮಕ ಅನುಮೋದನೆ ದೊರೆತಿತ್ತು. ಬೇಸ್ಮೆಂಟ್, ನೆಲ ಮಹಡಿ, ಮೊದಲ ಅಂತಸ್ತು ಹಾಗೂ ಎರಡನೇ ಮಹಡಿ ನಿರ್ಮಿಸಲು ಯೋಜನೆ ರೂಪಿಸಿ ಕಾಮಗಾರಿ ಪೂರ್ಣಗೊಳಿಸಲು 18 ತಿಂಗಳ ಗಡುವು ನಿಗದಿಪಡಿಸಲಾಗಿತ್ತು. ಬಳಿಕ ಬಯಲು ಸಭಾಂಗಣಕ್ಕೆ ತಿರುಗಿ, ನಂತರ ಒಳಾಂಗಣ ಸಭಾಂಗಣ ನಿರ್ಮಾಣಕ್ಕೆ ಯೋಜನೆ ಬದಲಾಯಿತು.
2,500 ಆಸನ ವ್ಯವಸ್ಥೆ, ಗ್ರಂಥಾಲಯ, ಸಂಶೋಧನಾ ಕೇಂದ್ರ, ಎರಡು ಗ್ರೀನ್ ರೂಂ, ವಿಶ್ರಾಂತಿ ಕೊಠಡಿ, ಶೌಚಾಲಯ, ಬೇಸ್ಮೆಂಟ್ನಲ್ಲಿ 150 ಕಾರು ಹಾಗೂ 350 ಬೈಕ್ ನಿಲುಗಡೆಗೆ ವ್ಯವಸ್ಥೆ ಒದಗಿಸಲು ಯೋಜನೆ ರೂಪಿಸಲಾಗಿದೆ.
‘ಮೊದಲ ಹಂತದಲ್ಲಿ ₹ 20.66 ವೆಚ್ಚದ ಅಭಿವೃದ್ಧಿ ಪೂರ್ಣಗೊಂಡಿದೆ. ಬಾಕಿ ಅನುದಾನ ಬಿಡುಗಡೆಯಾದ ನಂತರ 2ನೇ ಹಂತದ ಕೆಲಸ ಶುರುವಾಗಬೇಕು. ಅದನ್ನು ಯಾರು ಕೈಗೆತ್ತಿಕೊಳ್ಳಬೇಕು ಎಂಬುದು ನಿರ್ಧಾರವಾಗಿಲ್ಲ’ ಎಂದು ಮುಡಾ ಸೂಪರಿಂಟೆಂಡೆಂಟ್ ಎಂಜಿನಿಯರ್ ಶಂಕರ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.