ಮೈಸೂರು: ‘ಅಗಾಧ ಜ್ಞಾನ ಸಂಪಾದಿಸಿದ್ದ ಅಂಬೇಡ್ಕರ್ ವಿದೇಶದಲ್ಲಿ ನೆಮ್ಮದಿಯಿಂದ ನೆಲೆಸಬಹುದಿತ್ತು. ಆದರೆ, ದೇಶಕ್ಕೆ ಮರಳಿ ಇಲ್ಲಿದ್ದ ಜಾತಿ ವಿನಾಶಕ್ಕೆ ಹೋರಾಡಿದರು. ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು’ ಎಂದು ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಭವನ ನಿರ್ದೇಶಕ ಪ್ರೊ.ಎಸ್.ನರೇಂದ್ರ ಕುಮಾರ್ ಹೇಳಿದರು.
ಕುವೆಂಪುನಗರದ ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ‘ವಿಜ್ಞಾನ, ಅರ್ಥಶಾಸ್ತ್ರ, ರಾಜಕೀಯ ವಿಜ್ಞಾನ ಸೇರಿದಂತೆ 35ಕ್ಕೂ ಹೆಚ್ಚು ವಿಷಯಗಳ ಮೇಲೆ ಪಾಂಡಿತ್ಯವನ್ನು ಅಂಬೇಡ್ಕರ್ ಪಡೆದಿದ್ದರು. ಅವರಷ್ಟು ಸ್ನಾತಕೋತ್ತರ ಪದವಿ ಪಡೆದವರು ಜಗತ್ತಿನಲ್ಲಿ ಬೇರೊಬ್ಬರಿರಲಿಲ್ಲ’ ಎಂದರು.
‘ಕುಟುಂಬದೊಂದಿಗೆ ಐಷಾರಾಮಿ ಜೀವನ ನಡೆಸದೆ, ಜನರಿಗಾಗಿ ಹೋರಾಟ ನಡೆಸಿದರು. ಮಹಿಳೆಯರು, ಪರಿಶಿಷ್ಟರು ಹಾಗೂ ಶೂದ್ರ ಸಮುದಾಯಗಳಿಗೆ ಸಮಾನ ಹಕ್ಕುಗಳನ್ನು ಒದಗಿಸಿಕೊಟ್ಟರು. ಶಿಕ್ಷಣ, ಸಂಘಟನೆ ಹಾಗೂ ಹೋರಾಟ ನಡೆಸಬೇಕೆಂದು ದೇಶದ ಜನರಿಗೆ ಕರೆ ನೀಡಿದ್ದರು’ ಎಂದು ಹೇಳಿದರು.
‘ಜಾತಿ ವ್ಯವಸ್ಥೆಯು ಶೂದ್ರರು, ಅಸ್ಪೃಶ್ಯರು, ಮಹಿಳೆಯರನ್ನು ಮುಖ್ಯವಾಹಿನಿಯಿಂದ ದೂರವಿಟ್ಟಿತ್ತು. ಶಿಕ್ಷಣವೇ ಸಿಗುತ್ತಿರಲಿಲ್ಲ. ಶಾಲಾ ಕೊಠಡಿಯ ಹೊರಗೆ ಕೂತು ಶಿಕ್ಷಣ ಪಡೆದ ಅವರು ಎದುರಿಸಿದ ಅವಮಾನ, ಸಂಕಷ್ಟಗಳು ದೇಶದ ಜನರಿಗೆ ನ್ಯಾಯ ಒದಗಿಸಲು ಪ್ರೇರೇಪಿಸಿದವು’ ಎಂದರು.
‘ಬುದ್ಧಿವಂತಿಕೆಯ ಜೊತೆಗೆ ಹೃದಯವಂತಿಕೆಯೂ ಮುಖ್ಯವೆಂದು ಹೇಳಿದ ಬಾಬಾ ಸಾಹೇಬರು, ಅಸಮಾನತೆಯನ್ನು ಪ್ರಶ್ನಿಸಿದರು. ಶಿಕ್ಷಣದ ಮೂಲಕ ಪ್ರಜ್ಞಾವಂತ ಸಮಾಜ ನಿರ್ಮಾಣ ಸಾಧ್ಯವೆಂದು ನಂಬಿದ್ದರು. ಸಂವಿಧಾನದ ಮೂಲಕ ದೇಶದ ಎಲ್ಲ ಜನರಿಗೆ ಬೆಳಕಾದರು’ ಎಂದು ಬಣ್ಣಿಸಿದರು.
‘ಪರಿಶಿಷ್ಟರು, ಮಹಿಳೆಯರಿಗೆ ಶಾಲಾ ಪ್ರವೇಶವೇ ಇರಲಿಲ್ಲ. ಮಹಿಳೆಯರು ಶಿಕ್ಷಣ ಪಡೆಯುವುದು ಸಂಪ್ರದಾಯಕ್ಕೆ ವಿರುದ್ಧವಾಗಿತ್ತು. ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಅವರು ಹೆಣ್ಣು ಮಕ್ಕಳಿಗೆ ಶಾಲೆಗಳನ್ನು ಆರಂಭಿಸಿದ್ದರು’ ಎಂದರು.
‘ಫುಲೆ ದಂಪತಿ, ಅಂಬೇಡ್ಕರ್, ಗಾಂಧಿ ಮಹಿಳೆಯರ ಹಕ್ಕುಗಳಿಗೆ ದುಡಿದರು. ಜಾತಿಗಿಂತ ಗುಣ ಮುಖ್ಯ ಎಂದರು. ದೇಶವು ಇಂದು ಅಭಿವೃದ್ಧಿಯತ್ತ ನಡೆದಿದ್ದರೆ, ಸಮಾಜದಲ್ಲಿ ಬದಲಾವಣೆಯಾಗಿದ್ದರೆ ಅದಕ್ಕೆ ಸಂವಿಧಾನವೇ ಕಾರಣ’ ಎಂದು ಅಭಿಪ್ರಾಯಪಟ್ಟರು.
‘ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್’ ಸಂಸ್ಥೆಯ ಅಧ್ಯಕ್ಷ ಎಂ.ಪುಟ್ಟಸ್ವಾಮಿ, ಮುಖ್ಯ ಆಡಳಿತಾಧಿಕಾರಿ ಪಿ.ಗೀತಾಂಜಲಿ, ಪ್ರಾಂಶುಪಾಲ ಎಂ.ಮಹದೇವಸ್ವಾಮಿ, ಟಿ.ರಮೇಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.