ಹುಣಸೂರು: ಆಂಧ್ರಪ್ರದೇಶದ 40 ಅಧಿಕಾರಿಗಳ ತಂಡ ತಾಲ್ಲೂಕಿನ ಬನ್ನಿಕುಪ್ಪೆ ಮತ್ತು ಮರದೂರು ಪಂಚಾಯಿತಿಗೆ ಭೇಟಿ ನೀಡಿ ಗ್ರಾಮೀಣ ಭಾಗದಲ್ಲಿ ಪಂಚಾಯತ್ ರಾಜ್ ಆಡಳಿತ ಮತ್ತು ಯೋಜನೆ ಅನುಷ್ಠಾನ ಕುರಿತು ಮಾಹಿತಿ ಪಡೆದರು.
ಮೈಸೂರಿನ ಎಸ್.ಐ.ಆರ್.ಡಿ ಕೇಂದ್ರಕ್ಕೆ ಐದು ದಿನಗಳ ಅಧ್ಯಯನ ಪ್ರವಾಸ ಕೈಗೊಂಡಿರುವ ಅಧಿಕಾರಿಗಳು, ಕ್ಷೇತ್ರ ಭೇಟಿ ಸಂಬಂಧ ಹುಣಸೂರಿನ ಬನ್ನಿಕುಪ್ಪೆ ಮತ್ತು ಮರದೂರು ಪಂಚಾಯಿತಿಗೆ ಬಂದಿದ್ದರು.
ಅಧಿಕಾರಿಗಳ ತಂಡ ನರೇಗಾ, ಜೆಜೆಎಂ (ಗಂಗಾಜಲ್), ಸ್ವಚ್ಛ ಭಾರತ್ ಅಭಿಯಾನ ಯೋಜನೆ ಸೇರಿದಂತೆ ಸಾವಯವ ಗೊಬ್ಬರ ತಯಾರಿಸುವ ಘಟಕಕ್ಕೆ ಭೇಟಿ ನೀಡಿ ಸಮಗ್ರ ಮಾಹಿತಿ ಸಂಗ್ರಹಿಸಿದರು.
ವಿಜಯವಾಡ ಜಿಲ್ಲೆಯ ರಾಮಕೃಷ್ಣ ಮಾತನಾಡಿ, ‘ಆಂಧ್ರ ಪ್ರದೇಶದಿಂದ 5 ದಿನಗಳ ಅಧ್ಯಯನ ಪ್ರವಾಸಕ್ಕೆ ಭೇಟಿ ನೀಡಿದ್ದು, ಪಂಚಾಯತ್ ರಾಜ್ ಯೋಜನೆಯಲ್ಲಿ ಅನುಷ್ಠಾನಗೊಂಡಿರುವ ಕೇಂದ್ರ ಮತ್ತು ರಾಜ್ಯದ ಯೋಜನೆಗಳ ಮಾಹಿತಿ ಸಂಗ್ರಹಿಸಿ ಆಂಧ್ರದಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಚಿಂತನ ಮಂಥನ ನಡೆದಿದೆ’ ಎಂದರು.
ಗ್ರಾಮಗಳ ಮನೆಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿರುವ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನರೇಗಾ ಯೋಜನೆಯಲ್ಲಿ ತೊಡಗುವ ಕೂಲಿ ಕಾರ್ಮಿಕರಿಗೆ ವೇತನ ನೀಡುವ ವ್ಯವಸ್ಥೆ ಮತ್ತು ಜಾಬ್ ಕಾರ್ಡ್ ನಿರ್ವಹಣೆ ಕುರಿತು ಪಂಚಾಯಿತಿ ಅಧಿಕಾರಿಗಳು ಸಭೆಯಲ್ಲಿ ವಿವರಿಸಿದರು.
ಮರದೂರು ಪಂಚಾಯಿತಿ ಕೇಂದ್ರಕ್ಕೆ ಭೇಟಿ ನೀಡಿ ಸಂಜೀವಿನಿ ಮಹಿಳಾ ಸ್ವಸಹಾಯ ಸಂಘ ನಡೆಸುತ್ತಿರುವ ವಿವಿಧ ಯೋಜನೆಗಳ ಮಾಹಿತಿ ಪಡೆದು, ಮಹಿಳೆಯರೊಂದಿಗೆ ಸಂವಾದ ನಡೆಸಿದರು.
ಎಸ್.ಐ.ಆರ್.ಡಿ ತರಬೇತಿ ಕೇಂದ್ರದ ಪ್ರಕಾಶ್, ಅಬೂಬಕರ್, ಬನ್ನಿಕುಪ್ಪೆ ಪಿಡಿಒ ರಾಘವೇಂದ್ರ, ಮರದೂರು ಪಿಡಿಒ ಧರ್ಮೇಂದ್ರ, ಅಧ್ಯಕ್ಷ ಗೋವಿಂದ ನಾಯಕ, ವೇದಮೂರ್ತಿ, ಸಂಜೀವಿನಿ ಒಕ್ಕೂಟದ ಪ್ರತಿನಿಧಿಗಳು, ಪಂಚಾಯಿತಿ ಸದಸ್ಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.