ಮೈಸೂರು: ನಗರದ ಅಪೋಲೊ ಬಿಜಿಎಸ್ ಆಸ್ಪತ್ರೆಯಲ್ಲಿ 18 ವರ್ಷಕ್ಕಿಂತ ಮೇಲಿನವರಿಗೆ ಸೋಂಕುಗಳ ವಿರುದ್ಧ ರಕ್ಷಣಾ ಕಾರ್ಯವಿಧಾನವಾಗಿ ಲಸಿಕೆ ಕಾರ್ಯಕ್ರಮ ಪ್ರಾರಂಭಿಸಲಾಗಿದೆ.
ಈಚೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಇನ್ಫ್ಲುಯೆನ್ಜಾ, ನ್ಯುಮೋಕೊಕಲ್ ಹಾಗೂ ಟಿಡ್ಯಾಪ್ ಲಸಿಕೆಯನ್ನು ನೀಡಲಾಗುತ್ತದೆ.
‘ಲಸಿಕೆಯು ಮಕ್ಕಳಿಗೆ ಮಾತ್ರ ಇರುವುದು ಎಂದೇನಿಲ್ಲ. ಏಕೆಂದರೆ ಬಾಲ್ಯದಲ್ಲಿ ಪಡೆದ ಲಸಿಕೆಗಳಿಂದ ದೊರೆತ ರೋಗ ನಿರೋಧಕ ಶಕ್ತಿಯು ಕಾಲಾನಂತರದಲ್ಲಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಕೆಲವರು ವಿವಿಧ ರೋಗಗಳನ್ನು ಹೊಂದುವ ಅಪಾಯವಿರುತ್ತದೆ. ಹೀಗಾಗಿ ವಯಸ್ಕರಿಗೂ ಲಸಿಕೆಯು ಅಗತ್ಯವಾಗಿ ಬೇಕಾಗಿರುತ್ತದೆ’ ಎಂದು ಅಪೋಲೊ ಬಿಜಿಎಸ್ ಆಸ್ಪತ್ರೆಯ ತಜ್ಞ ವೈದ್ಯ ಡಾ.ಸಂಜೀವ್ ರಾವ್ ಗಿರಿಮಾಜಿ ತಿಳಿಸಿದರು.
ಅಪೋಲೊ ಬಿಜಿಎಸ್ ಆಸ್ಪತ್ರೆಯ ಉಪಾಧ್ಯಕ್ಷ ಎನ್.ಜಿ.ಭರತೀಶ ರೆಡ್ಡಿ ಮಾತನಾಡಿ, ‘ವಯಸ್ಸಾದಂತೆ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ವಿವಿಧ ರೋಗಗಳಿಗೆ ತುತ್ತಾಗುತ್ತೇವೆ. ಹೀಗಾಗಿ ವಯಸ್ಕರು ಲಸಿಕೆ ಪಡೆಯುವುದರಿಂದ ಅನೇಕ ಸಂಭಾವ್ಯ ಗಂಭೀರ ಕಾಯಿಲೆಗಳನ್ನು ತಡೆಗಟ್ಟಬಹುದು. ಲಸಿಕೆ ಪಡೆಯಲಾಗದ ವ್ಯಕ್ತಿಗಳಿಗೆ ರೋಗಗಳನ್ನು ಹರಡುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು. ಇದರಿಂದಾಗಿ ಅನಗತ್ಯ ಬಳಲಿಕೆ ಮತ್ತು ರೋಗಗಳಿಂದ ಉಂಟಾಗುವ ವೆಚ್ಚವನ್ನು ತಪ್ಪಿಸಬಹುದು’ ಎಂದರು.
ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ.ಅಮನ್ ನಾಯಕ್ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.