ADVERTISEMENT

ಕಾಂಗ್ರೆಸ್‌ ಪರ ಮತದಾರರ ಒಲವು: ಬಿ.ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2024, 13:40 IST
Last Updated 22 ಏಪ್ರಿಲ್ 2024, 13:40 IST
ಬೆಳಕವಾಡಿ ಸಮೀಪ ಕಾಂಗ್ರೆಸ್ ಮುಖಂಡ ಬಿ.ಸೋಮಶೇಖರ್ ಬಿಜಿಪುರ ಗ್ರಾಮದ ಮುಖಂಡರ ಸಭೆ ನಡೆಸಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಪರ ಮತಯಾಚಿಸಿದರು
ಬೆಳಕವಾಡಿ ಸಮೀಪ ಕಾಂಗ್ರೆಸ್ ಮುಖಂಡ ಬಿ.ಸೋಮಶೇಖರ್ ಬಿಜಿಪುರ ಗ್ರಾಮದ ಮುಖಂಡರ ಸಭೆ ನಡೆಸಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಪರ ಮತಯಾಚಿಸಿದರು   

ಬೆಳಕವಾಡಿ: ‘ಮಳವಳ್ಳಿ, ಹಾಸನ, ಮೈಸೂರು, ಚಾಮರಾಜನಗರ ಕ್ಷೇತ್ರಗಳಿಗೆ ಭೇಟಿ ನೀಡಿದ್ದು, ಎಲ್ಲಾ ಕಡೆ ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳ ಪರ ಒಲವು ಹೊಂದಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಬಿ.ಸೋಮಶೇಖರ್ ಹೇಳಿದರು.

ಬೋಪ್ಪೇಗೌಡನಪುರ (ಬಿಜಿಪುರ) ಹೋಬಳಿಯ ಹೊಸಹಳ್ಳಿ, ಬೆಳಕವಾಡಿ, ಬಿಜಿಪುರ ಗ್ರಾಮಗಳಲ್ಲಿ ಸೋಮವಾರ ಮುಖಂಡರ ಸಭೆ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಪರ ಮತಯಾಚನೆ ಮಾಡಿದರು.

‘ಈ ಬಾರಿಯ ಚುನಾವಣೆಯಲ್ಲಿ ಮೋದಿ ಅಲೆ ಕಡಿಮೆಯಾಗಿದೆ. ಚುನಾವಣೆಯ ಸಮಯದಲ್ಲಿ ನೀಡಿದ ಭರವಸೆಗಳನ್ನು ಮೋದಿ ಸರ್ಕಾರವು 10 ವರ್ಷಗಳಿಂದ ಈಡೇರಿಸಿಲ್ಲ ಎಂವ ಭಾವನೆ ಜನರ ಮನಸ್ಸಿನಲ್ಲಿ ಬಂದಿದೆ. ದೇಶದಲ್ಲಿ ಬಡತನ ಕಡಿಮೆಯಾಗಿಲ್ಲ, ದಿನ ಬಳಕೆ ವಸ್ತು, ಗ್ಯಾಸ್, ಪೆಟ್ರೋಲ್ ದರ ಗಗನಕ್ಕೇರಿದೆ. ರೈತರ ಆದಾಯ ದುಪ್ಪಟ್ಟು ಭರವಸೆ ಸುಳ್ಳಾಗಿದೆ’ ಎಂದು ದೂರಿದರು.

ADVERTISEMENT

‘ಕೇವಲ ರಾಮಮಂದಿರ ಕಟ್ಟಿದರೆ ಜನ ಮತ ಹಾಕಲ್ಲ, ಎಲ್ಲರಿಗೂ ದೇವರಿದ್ದಾನೆ. ಸ್ವಾತಂತ್ರ್ಯವಾಗಿ ಇರಬೇಕಾದ ಸಿಬಿಐ, ಇಡಿ ಸಂಸ್ಥೆಗಳು ಸರ್ಕಾರದ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿವೆ. ವಿರೋಧ ಪಕ್ಷದವರ ಮೇಲೆ ದಾಳಿ ಹೆದರಿಸುವುದಕ್ಕೆ ಇಟ್ಟು ಕೊಂಡಿದ್ದಾರೆ’ ಎಂದು ಆರೋಪಿಸಿದರು.

ಬಿಜಿಪುರ ಹೊರಮಠಕ್ಕೆ ಭೇಟಿ ನೀಡಿ ಮಠಾಧೀಶ ಚಂದ್ರಶೇಖರ್ ಸ್ವಾಮೀಜಿ ಆಶೀರ್ವಾದ ಪಡೆದರು. ಮುಖಂಡರಾದ ಶಿವಲಿಂಗಯ್ಯ, ಜಯರಾಮಣ್ಣ, ರಾಜಣ್ಣ, ಡಿ.ಬಿ.ಬಸವರಾಜು, ಸುರೇಶ್, ಮಂಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.