ADVERTISEMENT

ಹೋರಾಟಕ್ಕೆ ತಾರ್ಕಿಕ ಅಂತ್ಯ: ಕಾರ್ಣಿಕ್‌

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 8:09 IST
Last Updated 1 ಅಕ್ಟೋಬರ್ 2020, 8:09 IST
ಗಣೇಶ್ ಕಾರ್ಣಿಕ್‌
ಗಣೇಶ್ ಕಾರ್ಣಿಕ್‌   

ಮೈಸೂರು: ರಾಮಜನ್ಮ ಭೂಮಿಗಾಗಿ 500 ವರ್ಷಗಳಿಂದ ನಿರಂತರವಾಗಿ ನಡೆದ ಆಂದೋಲನ ಹಾಗೂ ಹೋರಾಟಕ್ಕೆ ತಾರ್ಕಿಕ ಅಂತ್ಯ ಹಾಗೂ ಜಯ ಲಭಿಸಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾ.ಗಣೇಶ್ ಕಾರ್ಣಿಕ್‌ ಬುಧವಾರ ಇಲ್ಲಿ ಹೇಳಿದರು.

‘ಬಾಬರಿ ಮಸೀದಿ ಧ್ವಂಸ ಪ್ರಕರಣ ಸಂಬಂಧ ಲಖನೌ ವಿಶೇಷ ಸಿಬಿಐ ನ್ಯಾಯಾಲಯ ನೀಡಿರುವ ತೀರ್ಪನ್ನು ಬಿಜೆಪಿ ಸ್ವಾಗತಿಸಲಿದೆ. ಇಡೀ ದೇಶ ಸಂತೋಷಪಡುವಂಥ ತೀರ್ಪು ಇದು. ಪ್ರಕರಣದಲ್ಲಿ ಆರೋಪಿಗಳಾಗಿದ್ದ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಸೇರಿದಂತೆ 32 ಮಂದಿಯನ್ನು ದೋಷ ಮುಕ್ತಗೊಳಿಸಿದ್ದು, ಅವರು ಶ್ರೀರಾಮನಿಗಾಗಿ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಘಟನೆಯ ಹಿಂದೆ ಯಾರ ಕೈವಾಡವೂ ಇಲ್ಲ. ಇದು
ಪೂರ್ವ ನಿಯೋಜಿತ ಕೃತ್ಯವೂ ಅಲ್ಲ ಎಂಬುದಾಗಿ ವಿಶೇಷ ನ್ಯಾಯಾಲಯ ಹೇಳಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಅಂದಿನ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರ ಮೇಲೆ ಒತ್ತಡ ಹಾಕಿ, ಸಿಬಿಐ ದುರುಪಯೋಗ ಮಾಡಿಕೊಂಡು, ಸುಳ್ಳು ಮೊಕದ್ದಮೆ ದಾಖಲಿಸಿ, 3 ದಶಕಗಳ ಕಾಲ ವೋಟ್ ಬ್ಯಾಂಕ್‌ಗಾಗಿ ವಿವಾದಿತ ಕಟ್ಟಡ ಧ್ವಂಸದ ಕುರಿತು ಅಪಪ್ರಚಾರ ನಡೆಸಿದ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳ ಷಡ್ಯಂತ್ರ ಬಯಲಾಗಿದೆ. ಬಾಬರಿ ಮಸೀದಿ ವಿಷಯವನ್ನು ಕಾಂಗ್ರೆಸ್‌ ತನ್ನವೋಟ್ ಬ್ಯಾಂಕ್‍ಗಾಗಿ ಬಳಸಿಕೊಳ್ಳುವ ಮೂಲಕ ಬಹುಸಂಖ್ಯಾತರ ಭಾವನೆಗೆ ಧಕ್ಕೆ ಉಂಟು ಮಾಡಿತು’ ಎಂದು ಆರೋಪಿಸಿದರು.

ADVERTISEMENT

ಬಿಜೆಪಿ ನಗರ ಘಟಕದ ಟಿ.ಎಸ್‌.ಶ್ರೀವತ್ಸ, ಗ್ರಾಮಾಂತರ ಅಧ್ಯಕ್ಷೆ ಮಂಗಳಾ ಸೋಮಶೇಖರ್‌, ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಸಹ ಸಂಚಾಲಕರಾದ ಪ್ರದೀಪ್ ಕುಮಾರ್. ಕೇಬಲ್ ಮಹೇಶ್,
ಚೇತನ್, ಪ್ರಸಾದ್, ಎಸ್‌ಸಿ ಮೋರ್ಚಾ ಉಪಾಧ್ಯಕ್ಷ ಸೋಮಶೇಖರ್‌ ಸುದ್ದಿಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.