ಮೈಸೂರು: ಇಲ್ಲಿನಬೆಳಗೊಳದಲ್ಲಿರುವ ಬೆಳವಲ ಫೌಂಡೇಷನ್ ನಗರದ 8 ಬಡ ವಿದ್ಯಾರ್ಥಿಗಳಿಗೆ ಓದಿನೊಂದಿಗೆ ನೈಸರ್ಗಿಕ ವಿಧಾನದ ಕೃಷಿ ಪದ್ಧತಿಯ ತರಬೇತಿ ನೀಡಿ, ಅವರು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡುವಂತಹ ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ.
ಫೌಂಡೇಷನ್ನ 8 ಎಕರೆ ಫಾರಂನಲ್ಲಿ 2015ರಿಂದ ನೈಸರ್ಗಿಕ ಕೃಷಿ ಪದ್ಧತಿ ಅನುಸರಿಸಿ ವಿವಿಧ ಬೆಳೆ ಬೆಳೆಯುತ್ತಿದೆ. ಈಗ 8 ಬಡ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ, ಅವರಿಂದಲೇ ಬೆಳೆ ಬೆಳೆಸಿ, ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವಂತಹ ವ್ಯವಸ್ಥೆ ರೂಪಿಸಿದೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಫೌಂಡೇಷನ್ನ ಡಾ.ರಾಮಕೃಷ್ಣ, ‘ವಿದ್ಯಾರ್ಥಿಗಳ ಶಕ್ತಿಗೆ ಅನುಸಾರವಾಗಿ ಭೂಮಿಯನ್ನು ಹಂಚಿಕೆ ಮಾಡಲಾಗಿದೆ. ಅವರು ಅಲ್ಲಿ ನೈಸರ್ಗಿಕ ವಿಧಾನದಲ್ಲಿ ತರಕಾರಿ ಹಾಗೂ ಹಣ್ಣು ಬೆಳೆದು ಗ್ರಾಹಕರಿಗೆ ಮಾರಾಟ ಮಾಡಿ, ಬಂದ ಹಣವನ್ನು ತಮ್ಮ ವಿದ್ಯಾಭ್ಯಾಸಕ್ಕೆ ಬಳಸುತ್ತಾರೆ. ಉಚಿತವಾಗಿ ಹಣ ನೀಡುವುದಕ್ಕಿಂತ ಇದು ಮಿಗಿಲು’ ಎಂದರು.
ನಗರದ ಗೋಕುಲಂ 2ನೇ ಹಂತದಲ್ಲಿ ಭಾನುವಾರ ‘ಬೆಳವಲ ಬಜಾರ್’ ಅನ್ನು ರಾಜ್ಯ ಯೋಜನಾ ಆಯೋಗದ ಸದಸ್ಯ ಎ.ಸಿ.ಲಕ್ಷ್ಮಣ ಹಾಗೂ ಜಾನಪದ ವಿದ್ವಾಂಸ ಕಾಳೇಗೌಡ ನಾಗವಾರ ಉದ್ಘಾಟಿಸಿದರು.
ವಿದ್ಯಾರ್ಥಿಗಳಾದ ಪ್ರಿಯಾಂಕಾ, ಮದನ, ವಿಜಯ್, ಶಶಾಂಕ್, ದರ್ಶನ್, ಭಾಸ್ಕರ್, ರಾಜು ನೈಸರ್ಗಿಕವಾಗಿ ಬೆಳೆದ ಬಾಳೆಹಣ್ಣು, ಕೊತ್ತಂಬರಿ ಸೊಪ್ಪು, ಕರಿಬೇವು, ಪಾಲಕ್, ಚಕ್ಕೋತ, ನುಗ್ಗೆ
ಕಾಯಿ, ಹುಣಸೆಹಣ್ಣು, ರೋಜ್ ಆ್ಯಪಲ್, ಸಪೋಟ, ಪಪ್ಪಾಯ ಹಣ್ಣು ಮಾರಾಟಕ್ಕೆ ಇರಿಸಿದ್ದಾರೆ. ಮುಂದಿನ ದಿನ
ಗಳಲ್ಲಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿ ಸುವ ಉದ್ದೇಶವನ್ನೂ ಹೊಂದಿದ್ದಾರೆ.
ವಿದ್ಯಾರ್ಥಿನಿ ಪ್ರಿಯಾಂಕಾ ಅವರು, ‘ಫೌಂಡೇಷನ್ ನಮಗೆ ಈ ವಿಧದಲ್ಲಿ ನೆರವಾಗಿದೆ. ಯಾವುದೇ ಮಧ್ಯವರ್ತಿ ಇಲ್ಲದೇಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ಸೌಲಭ್ಯ ಇದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.