ಮೈಸೂರು: ನಗರದಲ್ಲಿ ಕಳವಾಗುತ್ತಿದ್ದ ದುಬಾರಿ ಬೆಲೆಯ ಬೈಕ್ಗಳ ಕಳವಿನ ರಹಸ್ಯವನ್ನು ಹೆಬ್ಬಾಳ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ.
‘ಯೂಟ್ಯೂಬ್’ನಲ್ಲಿರುವ ವಿಡಿಯೊ ನೋಡಿ ಕದಿಯುವ ವಿಧಾನ ತಿಳಿದು ಕಳವು ಮಾಡುತ್ತಿದ್ದ ಆರೋಪಿ ಹುಣಸೂರು ಪಟ್ಟಣದ ನಿವಾಸಿ ಕೆ.ಪಿ.ಪ್ರಜ್ವಲ್ (23) ಎಂಬಾತನನ್ನು ಬಂಧಿಸಿದ್ದಾರೆ. ಈತನಿಂದ ₹ 10 ಲಕ್ಷ ಮೌಲ್ಯದ ದುಬಾರಿ ಬೆಲೆಯ ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ತಮಿಳುನಾಡಿನ ಕೆಲವು ಯುವಕರು ‘ಯೂಟ್ಯೂಬ್’ನಲ್ಲಿ ‘ರಾಯಲ್ ಎನ್ಫೀಲ್ಡ್’ ಸೇರಿದಂತೆ ದುಬಾರಿ ಬೆಲೆಯ ಬೈಕ್ಗಳನ್ನು ಕಳವು ಮಾಡುವ ಕುರಿತ ವಿವರವಾದ ವಿಡಿಯೊವೊಂದನ್ನು ‘ಅಪ್ಲೋಡ್’ ಮಾಡಿದ್ದಾರೆ. ಇದನ್ನು ನೋಡಿದ ಆರೋಪಿ ಇದೇ ತಂತ್ರಗಾರಿಕೆ ಬಳಸಿ ಕಳವು ಮಾಡಲು ತೊಡಗಿದ್ದಾನೆ. ಈತ ಐಟಿಐ ಕೋರ್ಸ್ ಮಾಡಿದ್ದರಿಂದ ವಿಡಿಯೊ ನೋಡಿದ ಕೇವಲ ಕೆಲವೇ ಸೆಕೆಂಡ್ಗಳಲ್ಲಿ ಬೈಕ್ಗಳನ್ನು ಕಳವು ಮಾಡುತ್ತಿದ್ದ.
ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಈತ ಬೈಕ್ ಮಾರಾಟ ಮಾಡಲು ಯತ್ನಿಸುತ್ತಿದ್ದ. ಈ ವೇಳೆ ಈತನ ಬಳಿ ಇದ್ದ ನಂಬರ್ ಪ್ಲೇಟ್ ಇಲ್ಲದ ಬೈಕ್ನ್ನು ಕಂಡು ಪೊಲೀಸರು ಬಂಧಿಸಿದ್ದಾರೆ.
ಈತನಿಂದ 4 ರಾಯಲ್ ಎನ್ಫೀಲ್ಡ್ ಬೈಕ್ಗಳು, ಟಿವಿಎಸ್ ಸ್ಟಾರ್ ಸಿಟಿ, ಹಿರೊ ಹೊಂಡಾ ಸ್ಪೆಂಡ್ಲರ್, ಹೊಂಡಾ ಡಿಯೊದ ತಲಾ ಒಂದೊಂದು ಬೈಕ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೆಬ್ಬಾಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 4 ಹಾಗೂ ಹುಣಸೂರು ಠಾಣೆಯ 3 ಬೈಕ್ ಕಳವು ಪ್ರಕರಣಗಳು ಪತ್ತೆಯಾಗಿವೆ.
ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಬಿ.ಟಿ.ಕವಿತಾಮಾರ್ಗದರ್ಶನ ನೀಡಿದ್ದರು. ನರಸಿಂಹರಾಜ ವಿಭಾಗದ ಎಸಿಪಿ ಶಿವಶಂಕರ್ ನೇತೃತ್ವ ವಹಿಸಿದ್ದರು. ಇನ್ಸ್ಪೆಕ್ಟರ್ ಚಲುವೇಗೌಡ, ಪಿಎಸ್ಐಕಿರಣ್, ಸಿಬ್ಬಂದಿಕಾಂತರಾಜು, ರವಿಕುಮಾರ್, ಶ್ರೀಧರ್, ಎಂ.ಆರ್.ಮಲ್ಲಿಕಾರ್ಜುನಪ್ಪ, ಜಗದೀಶ್, ಬಿ.ಎಸ್.ಮಹೇಶ್, ಮಲ್ಲೇಶ್, ಪ್ರತಾಪ್, ಹರೀಶ್, ಸಂತೋಷ್, ರವಿಚಂದ್ರನಾವಿ ಕಾರ್ಯಾಚರಣೆ ತಂಡದಲ್ಲಿದ್ದರು.
ಮಹಿಳೆ ಆತ್ಮಹತ್ಯೆ
ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಕೋಳಗಾಲ ಗ್ರಾಮದ ಸೌಮ್ಯ (26) ಎಂಬುವವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಗರೆ ಗ್ರಾಮದ ಇವರು 5 ವರ್ಷಗಳ ಹಿಂದೆ ವಿವಾಹವಾಗಿದ್ದು, ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಇಲ್ಲಿ ನೆಲೆಸಿದ್ದರು. ಸಾವಿನ ಕುರಿತು ಅನುಮಾನ ಇದೆ ಎಂದು ಸೌಮ್ಯ ಅವರ ಪೋಷಕರು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಎಚ್.ಡಿ.ಕೋಟೆ ಠಾಣೆಯಲ್ಲಿ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.