BJP
ಮೈಸೂರು: ‘ಯುವ ಕಾಂಗ್ರೆಸ್ ಕಾರ್ಯಕರ್ತರು ಅನುಮತಿ ಪಡೆಯದೆ ಸಾರಿಗೆ ಬಸ್ಗಳಿಗೆ ರಾಜಕೀಯ ಪಕ್ಷದ ಸ್ಟಿಕ್ಕರ್ ಅಂಟಿಸಿದ್ದಾರೆ’ ಎಂದು ಆರೋಪಿಸಿ ಬಿಜೆಪಿ ಮೈಸೂರು ನಗರ ಯುವ ಮೋರ್ಚಾ ಕಾರ್ಯಕರ್ತರು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ಬುಧವಾರ ದೂರು ನೀಡಿದರು.
ಯುವ ಮೋರ್ಚಾ ಮೈಸೂರು ನಗರಾಧ್ಯಕ್ಷ ಆರ್.ರಾಕೇಶ್ ಗೌಡ ಮಾತನಾಡಿ, ‘ಸ್ಟಾಪ್ ವೋಟ್ ಚೋರಿ’ ಅಭಿಯಾನದಡಿ ಮತಗಳ್ಳತನ ನಿಲ್ಲಿಸಿ ಎಂದು ಅಪಪ್ರಚಾರ ಮಾಡುವ ಸ್ಟಿಕ್ಕರ್ಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರಿ ಬಸ್ಗಳಿಗೆ ಅಂಟಿಸಿದ್ದಾರೆ’ ಎಂದು ದೂರಿದರು.
‘ಸಾರ್ವಜನಿಕರ ಸೇವೆಗಾಗಿ ಜಾಹೀರಾತು ನೀಡಿದರೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಅನುಮತಿ ಪಡೆದು ಸ್ಟಿಕರ್ ಅಂಟಿಸಿರುತ್ತಾರೆ. ಆದರೆ ಯಾವುದೇ ಅನುಮತಿ ಪಡೆಯದೆ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರಕ್ಕಾಗಿ ಸ್ಟಿಕರ್ಸ್ ಅಂಟಿಸಿದ್ದಾರೆ. ಇದಕ್ಕೆ ಅನುಮತಿ ನೀಡಿದವರು ಯಾರು, ಅವನ್ನು ಅಂಟಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
‘ಕಾಂಗ್ರೆಸ್ ಕಾರ್ಯಕರ್ತರು ಯಾವುದೇ ಸಾಕ್ಷಿ, ಆಧಾರಗಳಿಲ್ಲದೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದೆ ವಿಚಲಿತರಾಗಿ, ಅಪಪ್ರಚಾರ ಮಾಡಿಕೊಂಡು ಓಡಾಡುವುದನ್ನು ಬಿಟ್ಟು, ತಮ್ಮ ಸರ್ಕಾರದ ಸಾಧನೆ ಏನು ಎಂಬುದನ್ನು ಹೇಳಿ. ಅಪಪ್ರಚಾರ ಮುಂದುವರಿದರೆ ಉಗ್ರ ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಸಿದರು.
ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಿ.ಲೋಹಿತ್, ಆರ್.ಸಚಿನ್, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ.ರಘು, ಉಪಾಧ್ಯಕ್ಷರಾದ ರುದ್ರಮೂರ್ತಿ, ಟಿ.ರಮೇಶ್, ಚಾಮರಾಜ ಕ್ಷೇತ್ರದ ಅಧ್ಯಕ್ಷ ದಿನೇಶ್ ಗೌಡ, ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷ ರಾಕೇಶ್ ಭಟ್, ಯುವ ಮೋರ್ಚಾ ಕಾರ್ಯಕರ್ತರಾದ ನಿಶಾಂತ್, ನವೀನ್, ಉಮೇಶ್, ರವಿ, ಕೀರ್ತಿ, ಕಿರಣ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.