
ಮೈಸೂರು: ‘ಒತ್ತಡದಲ್ಲಿ ಬದುಕುವುದೇ ಇಂದಿನ ಜೀವನಶೈಲಿಯಾಗಿದೆ. ಶ್ರೀಮಂತಿಕೆಯೆಂದರೆ ಆರೋಗ್ಯ, ನೆಮ್ಮದಿ, ಸ್ವಾತಂತ್ರ್ಯ ಎನ್ನುವುದನ್ನು ಎಲ್ಲರೂ ಅರಿಯಬೇಕಿದೆ’ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಹೇಳಿದರು.
ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಇಲ್ಲಿನ ಐಶ್ವರ್ಯ ಪೆಟ್ರೋಲ್ ಬಂಕ್ ಎದುರಿನ ಮೈದಾನದಲ್ಲಿ ಭಾನುವಾರ ನಡೆದ 90ನೇ ವಾರ್ಷಿಕೋತ್ಸವ, ಮಹಾಶಿವರಾತ್ರಿ ಪ್ರಯುಕ್ತದ ಸೋಮನಾಥ ದಿವ್ಯ ದರ್ಶನ ಸಮಾರೋಪದಲ್ಲಿ ವಿಶ್ವವಿದ್ಯಾಲಯ ಮೈಸೂರು ಉಪವಲಯ ಮುಖ್ಯ ಸಂಚಾಲಕಿ ಲಕ್ಷ್ಮೀಜಿ ಅವರಿಂದ ಈಶ್ವರೀಯ ಪ್ರಶಸ್ತಿ- 2026 ಸ್ವೀಕರಿಸಿ ಮಾತನಾಡಿದರು.
‘ದ್ವೇಷ, ತಾಪಗಳೇ ನಮ್ಮ ಅನಾರೋಗ್ಯಕ್ಕೆ ಪ್ರಮುಖ ಕಾರಣ. ಒತ್ತಡ ಇಂದು ಆಧುನಿಕ ತಂಬಾಕಿನಂತೆ ಕೆಲಸ ಮಾಡುತ್ತಿದೆ. ತಾಳ್ಮೆಯೆಂಬುದೇ ಇಲ್ಲವಾಗಿದೆ. ಸಣ್ಣ ವಿಚಾರಕ್ಕೂ ಆತಂಕ, ಬೇರೆಯವರ ಅಭಿವೃದ್ಧಿ ಕಂಡು ಅಸೂಹೆ ಪಡುವ ಮನೋಭಾವ ನಮ್ಮನ್ನು ಹಾನಿಗೀಡು ಮಾಡುತ್ತದೆ. ಧ್ಯಾನ ಇದಕ್ಕೆ ಉತ್ತಮ ಮದ್ದು’ ಎಂದರು.
‘ಪ್ರಾರ್ಥನೆ, ನಂಬಿಕೆಯನ್ನೇ ಜೀವನದ ಮೌಲ್ಯವಾಗಿ ಪರಿಗಣಿಸಬೇಕು. ಇತರರಿಗೆ ತೊಂದರೆಯಾಗದಂತೆ ಬದುಕುವುದೇ ಸಾಧನೆ. ನಾನೊಬ್ಬನೇ ಜ್ಞಾನಿ ಎನ್ನುವ ಅಹಂಕಾರ ವಿಷವಾಗುತ್ತದೆ. ಮಾನವೀಯತೆಯನ್ನು ಎಂದೂ ಮರೆಯಬಾರದು. ಪರೋಪಕಾರದಲ್ಲಿ ತೊಡಬೇಕು. ಈಶ್ವರೀಯ ವಿಶ್ವವಿದ್ಯಾಲಯ ಇದಕ್ಕೆ ಮಾದರಿಯಾಗಿದೆ’ ಎಂದು ಶ್ಲಾಘಿಸಿದರು.
ವಿಶ್ವವಿದ್ಯಾಲಯ ಪ್ರಾಂಶುಪಾಲ ರಂಗನಾಥ್ ಸಮಾರೋಪ ಭಾಷಣ ಮಾತನಾಡಿದರು. ವಕೀಲ ಓ.ಶಾಂ ಭಟ್, ವಿಶ್ರಾಂತ ಕುಲಪತಿಗಳಾದ ಕೆ.ಎಸ್.ರಂಗಪ್ಪ, ಇ.ಟಿ.ಪುಟ್ಟಯ್ಯ ಅತಿಥಿಗಳಾಗಿ ಪಾಲ್ಗೊಂಡರು.
ಜ್ಞಾನ ಸರೋವರ ರಿಟ್ರೀಟ್ ನಿರ್ದೇಶಕಿ ಶಾರದಾ, ಸರಸ್ವತಿಪುರಂ ಕೇಂದ್ರದ ಸಂಚಾಲಕಿ ಮಂಜುಳಾ, ವಿಶ್ವವಿದ್ಯಾಲಯದ ಶಿವಲೀಲಾ, ರಾಮಚಂದ್ರ ರಾವ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.