ADVERTISEMENT

ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯಿಂದ ಅಂಗದಾನ: ನಾಲ್ವರಿಗೆ ಜೀವದಾನ

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಚಂದ್ರಶೇಖರ್‌; ನಾಲ್ವರ ಜೀವ ಉಳಿಸಲು ಸಹಾಯ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2019, 12:38 IST
Last Updated 17 ಡಿಸೆಂಬರ್ 2019, 12:38 IST
ಅಂಗಾಂಗಳನ್ನು ಪಡೆದ ಆಂಬುಲೆನ್ಸ್ ಬೆಂಗಳೂರಿಗೆ ಮಂಗಳವಾರ ಹೊರಟಿರುವುದು
ಅಂಗಾಂಗಳನ್ನು ಪಡೆದ ಆಂಬುಲೆನ್ಸ್ ಬೆಂಗಳೂರಿಗೆ ಮಂಗಳವಾರ ಹೊರಟಿರುವುದು   

ಮೈಸೂರು: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮಿದುಳು ನಿಷ್ಕ್ರಯಗೊಂಡಿದ್ದ ನಿವೇದಿತ ನಗರ ಚಂದ್ರಶೇಖರ್‌ (27) ಅವರು ಅಂಗಾಂಗ ದಾನ ಮಾಡಿದ್ದು, ನಾಲ್ವರ ಜೀವ ಉಳಿಸಿದ್ದಾರೆ.

ಚಂದ್ರಶೇಖರ್‌ ಅವರು ಡಿ. 14ರಂದು ಮಂಡ್ಯದ ಶ್ರೀರಂಗಪಟ್ಟಣದ ಗಣಂಗೂರು ಗ್ರಾಮದ ಬಳಿ ಬರುತ್ತಿದ್ದಾಗ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಇವರನ್ನು ಚಿಕಿತ್ಸೆಗಾಗಿ ಅಪೊಲೊ ಬಿಜಿಎಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

24 ಗಂಟೆಗಳ ಕಾಲ ಸತತ ಚಿಕಿತ್ಸೆ ನೀಡಿದರೂ ಚಂದ್ರಶೇಖರ್‌ ಅವರು ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಅಂಗಾಂಗ ಕಸಿ ಕಾಯ್ದೆ 2004ರಲ್ಲಿನ ನಿಯಮಾವಳಿಗಳಂತೆ ವಿವಿಧ ಹಂತಗಳಲ್ಲಿ ಪರೀಕ್ಷೆಗಳನ್ನು ನಡೆಸಿದ ವೈದ್ಯರು, ಡಿ. 16ರಂದು ಚಂದ್ರಶೇಖರ್‌ ಅವರ ಮಿದುಳು ನಿಷ್ಕ್ರಿಯವಾಗಿದೆ ಎಂದು ಘೋಷಿಸಿದರು.

ADVERTISEMENT

‘ಚಂದ್ರಶೇಖರ್‌ ಅವರ ‍ಪೋಷಕರೊಂದಿಗೆ ಸಮಾಲೋಚನೆ ನಡೆಸಿ ಅಂಗಾಂಗ ದಾನಕ್ಕೆ ಸಮ್ಮತಿ ಪಡೆಯಲಾಯಿತು. ಮಂಗಳವಾರ ಬೆಳಿಗ್ಗೆ 7ರಲ್ಲಿ ಅಂಗಾಂಗಳನ್ನು ಹೊರತೆಗೆಯಲಾಯಿತು. ಗ್ರೀನ್‌ ಕಾರಿಡಾರ್‌ ಹಾಗೂ ಶೂನ್ಯ ಸಂಚಾರದ ಮೂಲಕ ವಿವಿಧ ಆಸ್ಪತ್ರೆಗಳಿಗೆ ಅಂಗಗಳನ್ನು ರವಾನೆ ಮಾಡಲಾಯಿತು. ಬೆಂಗಳೂರಿನ ರಾಮಯ್ಯ ಆಸ್ಪತ್ರೆಗೆ ಹೃದಯ, ಎನ್‌ಯು ಆಸ್ಪತ್ರೆಗೆ ಕಿಡ್ನಿ, ಮೈಸೂರಿನ ಅಪೊಲೊ ಬಿಜಿಎಸ್‌ ಆಸ್ಪತ್ರೆಗೆ ಕಿಡ್ನಿ ಹಾಗೂ ಲಿವರ್‌ ನೀಡಲಾಯಿತು’ ಎಂದು ಆಸ್ಪತ್ರೆಯ ವೈದ್ಯಕೀಯ ಸೇವೆಗಳ ವ್ಯವಸ್ಥಾಪಕ ಸಿ.ಬಿ.ದಕ್ಷ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.