ADVERTISEMENT

ತಲಕಾಡು ಸಮೀಪ ಪ್ರೀ ವೆಡ್ಡಿಂಗ್ ಫೋಟೊಶೂಟ್‌ ದುರಂತ: ತೆಪ್ಪ ಮುಳುಗಿ ವಧು, ವರ ಸಾವು

ಪ್ರೀ ವೆಡ್ಡಿಂಗ್‌ ಫೋಟೊಶೂಟ್‌ ವೇಳೆ ಅವಘಡ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2020, 17:03 IST
Last Updated 9 ನವೆಂಬರ್ 2020, 17:03 IST
ಶಶಿಕಲಾ  ಹಾಗೂ ಚಂದ್ರು
ಶಶಿಕಲಾ ಹಾಗೂ ಚಂದ್ರು    

ತಲಕಾಡು (ಮೈಸೂರು ಜಿಲ್ಲೆ): ವಿವಾಹಪೂರ್ವ (ಪ್ರಿ ವೆಡ್ಡಿಂಗ್) ಫೋಟೊಶೂಟ್‌ನಲ್ಲಿ ಭಾಗಿಯಾಗಿದ್ದ ವೇಳೆ ಮುಡುಕುತೊರೆಯ ಕಾವೇರಿ ನದಿಯಲ್ಲಿ ತೆಪ್ಪ ಮುಳುಗಿ ಹಸೆಮಣೆ ಏರಬೇಕಿದ್ದ ಶಶಿಕಲಾ (20) ಹಾಗೂ ಚಂದ್ರು (30) ಸೋಮವಾರ ಮೃತಪಟ್ಟಿದ್ದಾರೆ.

ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಗಳಾದ ಇವರ ವಿವಾಹಕ್ಕೆ ಕಳೆದ ವಾರವಷ್ಟೇ ನಿಶ್ಚಿತಾರ್ಥ ನಡೆದಿತ್ತು. ನ. 22ರಂದು ಇವರ ವಿವಾಹ ಜರುಗಬೇಕಿತ್ತು.

ಫೋಟೊಗ್ರಾಫರ್ ಹಾಗೂ ಇಬ್ಬರು ಸಂಬಂಧಿಕರೊಂದಿಗೆ ಫೋಟೊ ತೆಗೆಸಿಕೊಳ್ಳಲು ಇವರು ಇಲ್ಲಿಗೆ ಬಂದಿದ್ದರು. ಮೀನು ಹಿಡಿಯಲು ಬಳಸುವ ಸಣ್ಣದೊಂದು ತೆಪ್ಪದ ಮೇಲೆ ಕುಳಿತ ಇವರು ಅಂಬಿಗನೊಂದಿಗೆ 10 ಅಡಿ ದೂರಕ್ಕೆ ಹೋಗಿದ್ದಾರೆ. ಅಲ್ಲಿ ಅಕ್ಕಪಕ್ಕ ಕುಳಿತು ಪರಸ್ಪರ ಹೆಗಲ ಮೇಲೆ ಕೈ ಹಾಕಿಕೊಂಡ ರೀತಿಯಲ್ಲಿ ಕ್ಯಾಮೆರಾಗೆ ಫೋಸ್‌ ನೀಡುತ್ತಿದ್ದ ವೇಳೆ ಒಂದೇ ಕಡೆ ಭಾರ ಹೆಚ್ಚಾಗಿ ತೆಪ್ಪ ಮುಗುಚಿದೆ. ಕೂಡಲೇ ಅಂಬಿಗ ಈಜಿ ದಡ ಸೇರಿದ್ದಾನೆ. ಇವರಿಬ್ಬರೂ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹಗಳನ್ನು ನೀರಿನಿಂದ ಹೊರ ತೆಗೆದ ಬಳಿಕ, ಸಂಬಂಧಿಕರ ರೋದನ ಮುಗಿಲು ಮುಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.