ADVERTISEMENT

ಬೌದ್ಧ ಭಿತ್ತಿಯಲ್ಲಿ ಕರಗುವ ತುರ್ತು: ಕೋಟಿಗಾನಹಳ್ಳಿ ರಾಮಯ್ಯ

ಅಂಬೇಡ್ಕರ್ ಸಮಕಾಲೀನಗೊಳಿಸಿ:

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 6:22 IST
Last Updated 28 ಜುಲೈ 2025, 6:22 IST
ಮಾನಸಗಂಗೋತ್ರಿಯಲ್ಲಿ ಭಾನುವಾರ ಆಯೋಜಿಸಿದ್ದ ‘ಧಮ್ಮಂ ನಮಾಮಿ– ನವಯುವಯಾನ’– ‘ಅಂಬೇಡ್ಕರ್‌ವಾದಿಗಳು ಮತ್ತು ಬೌದ್ಧ ಅನುಯಾಯಿಗಳ ಸಮ್ಮೇಳನ’ವನ್ನು ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ ಉದ್ಘಾಟಿಸಿದರು. ಬಂತೆ ಮಾತೆ ಗೌತಮಿ, ಸುಗತಪಾಲ ಭಂತೇಜಿ, ಪುರುಷೋತ್ತಮ್‌, ಪುಟ್ಟಮಣಿ ದೇವಿದಾಸ್, ರಮಾ ಸಿದ್ದಲಿಂಗಯ್ಯ, ಹೊಂಗಯ್ಯ, ನಾಗಮಣಿ ಪಾಲ್ಗೊಂಡಿದ್ದರು
ಮಾನಸಗಂಗೋತ್ರಿಯಲ್ಲಿ ಭಾನುವಾರ ಆಯೋಜಿಸಿದ್ದ ‘ಧಮ್ಮಂ ನಮಾಮಿ– ನವಯುವಯಾನ’– ‘ಅಂಬೇಡ್ಕರ್‌ವಾದಿಗಳು ಮತ್ತು ಬೌದ್ಧ ಅನುಯಾಯಿಗಳ ಸಮ್ಮೇಳನ’ವನ್ನು ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ ಉದ್ಘಾಟಿಸಿದರು. ಬಂತೆ ಮಾತೆ ಗೌತಮಿ, ಸುಗತಪಾಲ ಭಂತೇಜಿ, ಪುರುಷೋತ್ತಮ್‌, ಪುಟ್ಟಮಣಿ ದೇವಿದಾಸ್, ರಮಾ ಸಿದ್ದಲಿಂಗಯ್ಯ, ಹೊಂಗಯ್ಯ, ನಾಗಮಣಿ ಪಾಲ್ಗೊಂಡಿದ್ದರು   

ಮೈಸೂರು: ‘ಬಾಬಾಸಾಹೇಬರನ್ನು ಸರಿಯಾಗಿ ಓದಿಕೊಳ್ಳಬೇಕು. ಅವರು ತೋರಿದ ‘ನವಯಾನ’ದ ಬೌದ್ಧ ಭಿತ್ತಿಯಲ್ಲಿ ಎಲ್ಲರೂ ಕರಗಬೇಕು’ ಎಂದು ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ ಪ್ರತಿಪಾದಿಸಿದರು. 

ನಗರದ ಮಾನಸಗಂಗೋತ್ರಿಯ ರಾಣಿಬಹದ್ದೂರ್‌ ಸಭಾಂಗಣದಲ್ಲಿ ವಿಶ್ವಮೈತ್ರಿ ಬುದ್ಧವಿಹಾರ ಹಾಗೂ ಮೈಸೂರು ವಿಶ್ವವಿದ್ಯಾಲಯದ ಸಂಶೋಧಕರ ಸಂಘವು ಭಾನುವಾರ ಆಯೋಜಿಸಿದ್ದ ‘ಧಮ್ಮಂ ನಮಾಮಿ– ನವ ಯುವ ಯಾನ’– ‘ಅಂಬೇಡ್ಕರ್‌ವಾದಿಗಳು ಮತ್ತು ಬೌದ್ಧ ಅನುಯಾಯಿಗಳ ಸಮ್ಮೇಳನ’ ಉದ್ಘಾಟಿಸಿ ಮಾತನಾಡಿದರು. 

‘ಬಾಬಾಸಾಹೇಬರು ಅಶೋಕನ ಕಾಲದ ಬೌದ್ಧ ಭಾರತಕ್ಕೆ ಮರಳಿಸುವ ದೀಕ್ಷೆ ತೆಗೆದುಕೊಂಡರು. ಬೌದ್ಧ ಧರ್ಮಕ್ಕೆ ‘ನವಯಾನ’ ಮಾರ್ಗವನ್ನು ತೋರಿದರು. ಆದರೆ, ಬುದ್ಧ– ಅಂಬೇಡ್ಕರ್‌ ಅವರ ಬೆಳಕು ಜನರಿಗೆ ತಾಕಿಲ್ಲ. ಅವರನ್ನು  ಸಮಕಾಲೀನಗೊಳಿಸುವಲ್ಲಿ ನಾವು ಹಿಂದೆ ಉಳಿದಿದ್ದೇವೆ’ ಎಂದು ಬೇಸರಿಸಿದರು. 

ADVERTISEMENT

‘ರಾಜಕೀಯ ಜೀವನದ ಕೊನೆಯು ಅಧ್ಯಾತ್ಮವಾಗಿದೆ ಎಂದು ಬಾಬಾಸಾಹೇಬರು ಹೇಳಿದ್ದರು. ಇಂದು ಅಧ್ಯಾತ್ಮ ಮಾರಾಟದ ಸರಕಾಗಿದೆ. ಅಂಬೇಡ್ಕರ್ ಅವರನ್ನು ಸರಿಯಾಗಿ ಓದದಿದ್ದರೆ ಅವರು ಆಶಿಸದ ದಿಕ್ಕಿಗೆ ಬಲದಾಗಿ‌ ವಿರುದ್ಧ ಚಲಿಸಬೇಕಾಗುತ್ತದೆ. ಈಗಲಾದರೂ‌ ಅವರನ್ನು ಒಳಹೊಕ್ಕಿ ನೋಡಬೇಕಾದ ಚಾರಿತ್ರಿಕ ಒತ್ತಡ ನಮ್ಮದಾಗಬೇಕಿದೆ’ ಎಂದು ಸಲಹೆ ನೀಡಿದರು.  

‘ಸಂವಿಧಾನದ ಪ್ರಾಣ ಪೋಷಕವಾದ ಸಮಾನತೆ, ಸ್ವಾತಂತ್ರ್ಯ, ಸಹೋದರತೆ ತತ್ವಗಳು ಫ್ರೆಂಚ್‌ ಕ್ರಾಂತಿಯಿಂದ ತೆಗೆದುಕೊಂಡಿದ್ದಲ್ಲ. ಬುದ್ಧತ್ವದಿಂದ ಪಡೆದದ್ದೆಂದು ಅಂಬೇಡ್ಕರ್ ಹೇಳಿದ್ದರು. ತಳಸಮುದಾಯಗಳು ಬೌದ್ಧ ಮಾರ್ಗದಲ್ಲಿ ನಡೆಯುವಂತೆ ಮಾಡಿ, ಪುನಶ್ಚೇತನಗೊಳಿಸಬೇಕಿದೆ. ಸಂವಿಧಾನದ ಅರಿವು ಮೂಡಿಸಬೇಕಿದೆ’ ಎಂದರು. 

‘ತಿರುಪತಿ, ಪಂಡರಾಪುರ ಸೇರಿದಂತೆ ಹಲವು ಶ್ರದ್ಧಾಕೇಂದ್ರಗಳು ಬೌದ್ಧ ಧರ್ಮಕ್ಕೆ ಸೇರಿದವು. ಶೇ 80ರಷ್ಟು ಪುನರ್‌ ನಿರ್ಮಾಣಗೊಂಡ ದೇಗುಲಗಳಲ್ಲಿ ನಡೆದ ಉತ್ಖನನಗಳು ಬೌದ್ಧ ಶ್ರದ್ಧಾಕೇಂದ್ರಗಳೆಂದು ಗೊತ್ತಾಗಿವೆ. ಗತದಲ್ಲಿ ಕಳೆದುಹೋಗಿರುವ ಕತ್ತಲ ಅಧ್ಯಾಯಗಳು, ಬೇರುಗಳೊಂದಿಗೆ ಬೆಸೆಯುವ ಕೆಲಸವನ್ನು ಅಂಬೇಡ್ಕರ್‌ವಾದಿಗಳು, ಸಂಶೋಧಕರು ಮಾಡಬೇಕಿದೆ’ ಎಂದು ಸಲಹೆ ಮಾಡಿದರು. 

ಬಂತೆ ಮಾತೆ ಗೌತಮಿ, ಸುಗತಪಾಲ ಭಂತೇಜಿ, ಮಾಜಿ ಮೇಯರ್ ಪುರುಷೋತ್ತಮ್‌, ಪುಟ್ಟಮಣಿ ದೇವಿದಾಸ್, ರಮಾ ಸಿದ್ದಲಿಂಗಯ್ಯ, ಹೊಂಗಯ್ಯ, ನಾಗಮಣಿ ಪಾಲ್ಗೊಂಡಿದ್ದರು 

ಅಂಬೇಡ್ಕರ್ ಪುತ್ಥಳಿ ಚಿತ್ರಗಳನ್ನು ಅವಮಾನಿಸುವ ಕೃತ್ಯ ನಡೆಯುತ್ತಲೇ ಇವೆ. ಅದು ರಾಷ್ಟ್ರೀಯ ಅಪಮಾನವೆಂದು ಘೋಷಿಸುತ್ತಿಲ್ಲ. ದ್ವೇಷ ಸಂಘರ್ಷ ಆಳುವವರಿಗೆ ಬೇಕಾಗಿದೆ
– ಕೋಟಿಗಾನಹಳ್ಳಿ ರಾಮಯ್ಯ, ರಂಗಕರ್ಮಿ

‘ಅಂಬೇಡ್ಕರ್‌ವಾದ ನಾಶಕ್ಕೆ ಕೃತಿ ಪ್ರಕಟ’

‘ಕಳೆದ 20 ವರ್ಷದಿಂದ ಅಂಬೇಡ್ಕರ್ ಹೆಮ್ಮರವನ್ನು ಕೊರೆಯುವ ಹುಳುಗಳಾಗಿ ಆರ್‌ಎಸ್‌ಎಸ್‌ ಬಿಜೆಪಿಗಳು ಕೆಲಸ ಮಾಡುತ್ತಿವೆ. ಅವರಿಗೆ ಅಂಬೇಡ್ಕರ್‌ವಾದಿಗಳನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಪ್ರತಿರೋಧದ ಬಾಬಾ ಸಾಹೇಬರನ್ನು ನಾಶಮಾಡಲು ನೂರಾರು ಲೇಖಕರಿಂದ ಕೃತಿಗಳನ್ನು ಬರೆಸಿ ಪ್ರಕಟಿಸಿ ಹಂಚುತ್ತಿರುವುದು ದ್ರೋಹ’ ಎಂದು ರಾಮಯ್ಯ ಹೇಳಿದರು.

‘ಕಾಂಗ್ರೆಸ್ ಅಂಬೇಡ್ಕರ್ ಚರಿತ್ರೆಯನ್ನು ಅಳಿಸಿ ಹಾಕಿದೆಯೆಂದು ಹೇಳುವ ಬಿಜೆಪಿಯು ಅಂಬೇಡ್ಕರ್‌ ಜೀವನದ ಸ್ಥಳಗಳನ್ನು ಯಾತ್ರಾ ಸ್ಥಳವನ್ನಾಗಿ ಮಾಡಿ ಆರಾಧನೆಗೆ ಮಿತಿಗೊಳಿಸುತ್ತಿದೆ. ಕಾಂಗ್ರೆಸ್ ಸುಡುವ ಮನೆಯೆಂದು ಅಂಬೇಡ್ಕರ್ ಹೇಳಿದ್ದರು. ಆದರೆ ಇಂದಿನ ಬಿಜೆಪಿ ಕಟುಕರ ಮನೆಯಾಗಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.