ADVERTISEMENT

ಗನ್‌ ಮ್ಯಾನ್‌ ವಿರುದ್ಧ ಪ್ರಕರಣ: ಎಸ್ಪಿ

ಮೈಸೂರಿನ ಉದ್ಯಮಿ ಕುಟುಂಬದ ಸಾವು

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 20:01 IST
Last Updated 17 ಆಗಸ್ಟ್ 2019, 20:01 IST
ಎಚ್‌.ಡಿ.ಆನಂದ ಕುಮಾರ್‌ಎಸ್‌ಪಿ, ಚಾಮರಾಜನಗರ
ಎಚ್‌.ಡಿ.ಆನಂದ ಕುಮಾರ್‌ಎಸ್‌ಪಿ, ಚಾಮರಾಜನಗರ   

ಚಾಮರಾಜನಗರ: ‘ಮೈಸೂರಿನ ಉದ್ಯಮಿ ಓಂಪ್ರಕಾಶ್‌ ಭಟ್ಟಾಚಾರ್ಯ ಹಾಗೂ ಅವರ ಕುಟುಂಬದವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಗನ್‌ ಮ್ಯಾನ್‌ ಒಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು‘ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದ ಕುಮಾರ್‌ ಅವರು ಹೇಳಿದರು.

‘ಓಂಪ್ರಕಾಶ್‌ ಅವರು ಮೂ‌ವರು ಗನ್‌ಮ್ಯಾನ್‌ ಇಟ್ಟುಕೊಂಡಿದ್ದರು ಎಂಬ ಮಾಹಿತಿ ಸಿಕ್ಕಿದೆ. ಉದ್ಯಮಿ ಬಳಿ ಪಿಸ್ತೂಲ್‌ ಇರಲಿಲ್ಲ. ಅವರ ಗನ್‌ ಮ್ಯಾನ್‌ ಒಬ್ಬರಿಗೆ ಸೇರಿದ ಪಿಸ್ತೂಲಿನಿಂದ ಈ ಕೃತ್ಯ ನಡೆದಿದ್ದು, ಪಿಸ್ತೂಲಿಗೆ ಪರವಾನಗಿಯೂ ಇದೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಎಲ್ಲರನ್ನೂ ಕೊಂದು ತಾವೂ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಓಂಪ್ರಕಾಶ್‌ ಮೊದಲೇ ನಿರ್ಧರಿಸಿದ್ದರು. ಅದಕ್ಕಾಗಿ, ಅಗತ್ಯ ಸಿದ್ಧತೆಯನ್ನೂ ಮಾಡಿಕೊಂಡಿದ್ದ ಅವರು ತಾವು ಎದುರಿಸುತ್ತಿರುವ ಸಂಕಷ್ಟ, ತಮ್ಮ ಅಸಹಾಯಕತೆಯನ್ನು ಅವರು ಕುಟುಂಬದವರಿಗೆ ಮನವರಿಕೆ ಮಾಡಿದ್ದರು. ಸಾಯುವುದಕ್ಕೆ ಮಾನಸಿಕವಾಗಿ ಅವರನ್ನು ಸಜ್ಜುಗೊಳಿಸಿದ್ದರು. ಗುಂಡಿಕ್ಕುವ ಸಂದರ್ಭದಲ್ಲಿ ಯಾರೂ ವಿರೋಧ ವ್ಯಕ್ತಪಡಿಸಿದಂತೆ ಕಂಡು ಬಂದಿಲ್ಲ’ ಎಂದು ಅವರು ಹೇಳಿದ್ದಾರೆ.

ADVERTISEMENT

ಅವರ ವ್ಯವಹಾರಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಬಳಸುತ್ತಿದ್ದ ಕಂಪ್ಯೂಟರ್‌, ಮೊಬೈಲ್‌ ಹಾಗೂ ಇನ್ನಿತರ ಗ್ಯಾಜೆಟ್‌ಗಳನ್ನು ಜಪ್ತಿ ಮಾಡಿ ಪರಿಶೀಲಿಸಲಾಗುತ್ತಿದೆ. ಮೈಸೂರಿನಲ್ಲಿರುವ ಅವರ ಮನೆಯನ್ನು ತಪಾಸಣೆ ನಡೆಸಲಾಗಿದ್ದು, ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದರು.

ಮನೆಯ ಸಾಮಗ್ರಿಗಳನ್ನು ಮೂಟೆ ಕಟ್ಟಿಟ್ಟಿದ್ದರು!(ಮೈಸೂರು): ಓಂಪ್ರಕಾಶ್‌ ಸೋದರಿಯ ಸಮ್ಮುಖದಲ್ಲಿ ಇಲ್ಲಿನ ದಟ್ಟಗಳ್ಳಿಯಲ್ಲಿನ ಅವರ ಮನೆಯ ಬೀಗ ಒಡೆಯಲಾಯಿತು. ಮನೆಯ ಪರಿಕರಗಳು ಮೂಟೆ ಕಟ್ಟಿಟ್ಟ ಸ್ಥಿತಿಯಲ್ಲಿ ಕಂಡು ಬಂದವು. ಮನೆ ಖಾಲಿ ಮಾಡುವ ಉದ್ದೇಶದಿಂದ ಎಲ್ಲ ವಸ್ತುಗಳನ್ನು ಕಟ್ಟಿಡಲಾಗಿತ್ತು ಎಂದು ಶಂಕಿಸಲಾಗಿದೆ. ಕೆಲವು ದಾಖಲೆಗಳು ಸಿಕ್ಕಿದ್ದು, ಪರಿಶೀಲನೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಓಂಪ್ರಕಾಶ್‌ ಸೇರಿದಂತೆ ಅವರ ಕುಟುಂಬದ ಐವರ ಅಂತ್ಯಕ್ರಿಯೆ, ಚಾಮುಂಡಿಬೆಟ್ಟದ ತಪ್ಪಲಿನ ಸ್ಮಶಾನದಲ್ಲಿ ನೆರವೇರಿತು.

ನಿದ್ದೆ ಮಾಡುತ್ತಿದ್ದ ಮಗನಿಗೆ ಗುಂಡು

‘ನಸುಕಿನ 3 ಗಂಟೆ ಸುಮಾರಿಗೆ ಓಂ ಪ್ರಕಾಶ್‌ ತಾವೇ ಕಾರು ಚಾಲನೆ ಮಾಡಿಕೊಂಡು, ಮನೆಯರನ್ನು ಜಮೀನಿಗೆ ಕರೆದುಕೊಂಡು ಬಂದಿದ್ದರು. ಈ ಸಂದರ್ಭದಲ್ಲಿ ಮಗ ನಿದ್ದೆ ಮಾಡುತ್ತಿದ್ದ. ನಿದ್ದೆ ಮಾಡುತ್ತಿದ್ದ ಸಂದರ್ಭದಲ್ಲೇ ಮಗನ ಹಣೆಗೆ ಗುಂಡಿಕ್ಕಿದ್ದಾರೆ. ನಂತರ ತಂದೆ, ಆ ಬಳಿಕ ಪತ್ನಿ, ಕೊನೆಗೆ ತಾಯಿಗೆ ಗುಂಡಿಕ್ಕಿ ಅಂತಿಮವಾಗಿತಾವೂ ಗುಂಡು ಹಾರಿಸಿಕೊಂಡು ಪ್ರಾಣ ಕಳೆದುಕೊಂಡಿದ್ದಾರೆ’ ಎಂದು ಆನಂದ ಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.