ADVERTISEMENT

ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ| ಮೈಸೂರು ಸೀಮೆಗೆ ₹ 3,647 ಕೋಟಿ

ಇದೇ ಮೊದಲ ಬಾರಿಗೆ ಟೆಂಟ್‌ನಲ್ಲಿ ಆಯೋಜನೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2025, 20:02 IST
Last Updated 24 ಏಪ್ರಿಲ್ 2025, 20:02 IST
ಮಹದೇಶ್ವರ ಬೆಟ್ಟದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಪಾಲ್ಗೊಂಡಿದ್ದರು
ಮಹದೇಶ್ವರ ಬೆಟ್ಟದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಪಾಲ್ಗೊಂಡಿದ್ದರು   

ಮಹದೇಶ್ವರ ಬೆಟ್ಟ (ಚಾಮರಾಜನಗರ ಜಿಲ್ಲೆ): ಗಡಿ ಜಿಲ್ಲೆ ಚಾಮರಾಜನಗರವೂ ಸೇರಿದಂತೆ ಮೈಸೂರು ಕಂದಾಯ ವಿಭಾಗದಲ್ಲಿ ₹ 3,647 ಕೋಟಿ ಮೊತ್ತದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಇಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಇದೇ ಮೊದಲ ಬಾರಿಗೆ ‘ಜರ್ಮನ್‌ ಟೆಂಟ್‌’ನಲ್ಲಿ ಮೂರು ತಾಸು ನಡೆದ ಸಭೆಯಲ್ಲಿ ಮಂಡನೆಯಾದ 78 ವಿಷಯಗಳಿಗೂ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.

ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಕೋವಿಡ್‌ 19 ವಿಚಾರಣಾ ಆಯೋಗದ 1ನೇ ವರದಿಯ ಕುರಿತು ಸಚಿವ ಸಂಪುಟವು 2024ರ ಅಕ್ಟೋಬರ್‌ನಲ್ಲಿ ನೀಡಿದ್ದ ಅನುಮೋದನೆಯಂತೆ, 2ನೇ ವರದಿಯಲ್ಲಿ ಉಲ್ಲೇಖಿಸಿರುವ ಹಣ ದುರುಪಯೋಗ ಮತ್ತು ಇತರೆ ಲೋಪದೋಷಗಳ ಶಿಫಾರಸ್ಸಿನ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ಸಚಿವ ಸಂಪುಟ ನಿರ್ಧರಿಸಿದೆ’ ಎಂದು ತಿಳಿಸಿದರು.

ADVERTISEMENT

‘ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜ ಸಾಗರ ಜಲಾಶಯದ ಬಳಿ ಗಂಗಾ ಆರತಿ ಮಾದರಿಯಲ್ಲಿ, ಕಾವೇರಿ ಆರತಿ ನಡೆಸಲು ಮೂಲಸೌಕರ್ಯ ಕಲ್ಪಿಸುವ ಕಾಮಗಾರಿಗೆ  ₹ 92.30 ಕೋಟಿ ಅಂದಾಜು ಮೊತ್ತದ ಪ್ರಸ್ತಾವನೆಗೆ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

‘ಸಣ್ಣ ನೀರಾವರಿ ಮತ್ತು ಜಲಸಂಪನ್ಮೂಲ ಇಲಾಖೆಗಳ ವತಿಯಿಂದ 29 ಕಾಮಗಾರಿಗಳನ್ನು ₹ 1,787 ಕೋಟಿ ಮೊತ್ತದಲ್ಲಿ ಕೈಗೊಳ್ಳಲಾಗುವುದು. ಇದರಿಂದ ಮೈಸೂರು ಕಂದಾಯ ವಿಭಾಗದ ಜಿಲ್ಲೆಗಳ ಜಲಾಶಯ, ಕೆರೆಗಳು, ಕಾಲುವೆಗಳ ಅಭಿವೃದ್ಧಿಯಾಗಲಿದೆ’ ಎಂದರು.

‘ಪರಿಶಿಷ್ಟ ಪಂಗಡದ ಜನರಿರುವ ಪ್ರದೇಶಗಳ ಅಭಿವೃದ್ಧಿಗೆಂದು ಪ್ರಮುಖವಾಗಿ 4 ಯೋಜನೆಗಳಿಗೆ ₹ 203 ಕೋಟಿ ವಿನಿಯೋಗಿಸಲಾಗುತ್ತಿದೆ. ರಸ್ತೆ, ಚರಂಡಿ, ವಿದ್ಯುತ್ ದೀಪ ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಇದಕ್ಕೂ ಸಚಿವ ಸಂಪುಟದ ಅನುಮೋದನೆ ಸಿಕ್ಕಿದೆ. ಕೆರೆ‌ ತುಂಬಿಸುವ ಯೋಜನೆ, ಆಸ್ಪತ್ರೆಗಳ ಹಾಸಿಗೆ ಸಾಮರ್ಥ್ಯವನ್ನು ಹೆಚ್ಚಿಸುವುದು, ವಿವಿಧ ಪ್ರವಾಸಿತಾಣಗಳನ್ನು ಅಭಿವೃದ್ಧಿಪಡಿಸುವ ತೀರ್ಮಾನವನ್ನೂ ಕೈಗೊಳ್ಳಲಾಗಿದೆ’ ಎಂದರು.

ಬದನವಾಳು ಅಭಿವೃದ್ಧಿ:

ಭಾರತ್ ಜೋಡೊ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ನಂಜನಗೂಡು ತಾಲ್ಲೂಕು ಬದನವಾಳು ಗ್ರಾಮಕ್ಕೆ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಭೇಟಿ ನೀಡಿದ್ದರು. ಈ ಗ್ರಾಮಕ್ಕೆ ಮಹಾತ್ಮ ಗಾಂಧೀಜಿಯವರೂ ಹಿಂದೆ ಭೇಟಿ ಕೊಟ್ಟಿದ್ದರು. ಅದರ ನೆನಪಿಗಾಗಿ ₹ 40 ಕೋಟಿ ವೆಚ್ಚದಲ್ಲಿ ಶತಮಾನೋತ್ಸವ ಭವನ ಹಾಗೂ ಗ್ರಾಮೀಣ ಅಭಿವೃದ್ಧಿ ಕೇಂದ್ರವನ್ನು ನಿರ್ಮಿಸಲಾಗುವುದು’ ಎಂದು ತಿಳಿಸಿದರು. 

‘ರಾಜ್ಯದ ನಾಲ್ಕೂ ಕಂದಾಯ ವಿಭಾಗಗಳಲ್ಲಿ ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಕಲಬುರಗಿಯಲ್ಲಿ ನಡೆದಿದ್ದ ಮೊದಲ ಸಭೆಯಲ್ಲಿ 56 ವಿಷಯಗಳಿಗೆ ಅನುಮೋದನೆ ನೀಡಲಾಗಿತ್ತು. ಈಗ ಮೈಸೂರಿನಲ್ಲಿ 78 ವಿಷಯಗಳ ಬಗ್ಗೆ ಚರ್ಚಿಸಿ ಮಂಜೂರಾತಿ ನೀಡಲಾಗಿದೆ. ಬೆಳಗಾವಿ ವಿಭಾಗದ ಸಭೆಯನ್ನು ವಿಜಯಪುರದಲ್ಲಿ ಹಾಗೂ ಬೆಂಗಳೂರು ವಿಭಾಗದ ಸಭೆಯನ್ನು ನಂದಿ ಬೆಟ್ಟದಲ್ಲಿ ನಡೆಸಲು ನಿರ್ಧರಿಸಿದ್ದೇವೆ’ ಎಂದರು.

 ಪೋಪ್ ನಿಧನಕ್ಕೆ ಸಭೆ ಸಂತಾಪ ಸೂಚಿಸಿತು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್, ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್, ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್, ಶಾಸಕರಾದ ಪುಟ್ಟರಂಗಶೆಟ್ಟಿ, ಕೃಷ್ಣಮೂರ್ತಿ, ಮಂಜುನಾಥ್, ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಇದ್ದರು. ಸಚಿವರಾದ ಪ್ರಿಯಾಂಕ್‌ ಖರ್ಗೆ, ಮಧು ಬಂಗಾರಪ್ಪ ಹಾಗೂ ಸಂತೋಷ್ ಲಾಡ್ ಸಭೆಗೆ ಬಂದಿರಲಿಲ್ಲ. 

ಮೈಸೂರು ವಿಭಾಗದಲ್ಲಿ ತುರ್ತಾಗಿ ಮಾಡಬೇಕಾದ ಕೆಲಸ ಹಾಗೂ ಬಜೆಟ್‌ನಲ್ಲಿ ಹೇಳಿದ್ದ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ವಹಿಸಲಾಗಿದೆ ಸಿದ್ದರಾಮಯ್ಯ ಮುಖ್ಯಮಂತ್ರಿ

ಮುಖ್ಯಮಂತ್ರಿಯ ಅಪೇಕ್ಷೆಯಂತೆ ಈ ಪವಿತ್ರ ಸ್ಥಳದಲ್ಲಿ ಸಚಿವ ಸಂಪುಟ ಸಭೆ ನಡೆಸಿದ್ದೇವೆ. ಚಾಮರಾಜನಗರದ ಭಾಗ್ಯದ ಬಾಗಿಲು ತೆರೆಯುವ ನಿಟ್ಟಿನಲ್ಲಿ ಸಭೆ ಉತ್ತಮವಾಗಿ ನಡೆದಿದೆ. ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಲಾಗಿದೆ ಎಚ್.ಕೆ. ಪಾಟೀಲ ಕಾನೂನು ಸಚಿವ

ಹಣವಿಲ್ಲದೇ ಇದೆಲ್ಲಾ ಬಂತಾ? ಗ್ಯಾರಂಟಿಗೆ ಹಣ ನೀಡುತ್ತಿರುವುದರಿಂದ ಸರ್ಕಾರದ ಬೊಕ್ಕಸದಲ್ಲಿ ದುಡ್ಡಿಲ್ಲ ಎಂದು ವಿರೋಧ ಪಕ್ಷದವರು ಆರೋಪಿಸುತ್ತಾರೆ. ಆದರೆ ಅದೆಲ್ಲ ಸುಳ್ಳು. ಸರ್ಕಾರದಲ್ಲಿ ದುಡ್ಡಿಲ್ಲದಿದ್ದರೆ ಒಂದೇ ಸಚಿವ ಸಂಪುಟ ಸಭೆಯಲ್ಲಿ ₹ 3647 ಕೋಟಿ ಮೊತ್ತದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಆಗುತ್ತಿತ್ತೇ?’ ಎಂದು ಮುಖ್ಯಮಂತ್ರಿ ಕೇಳಿದರು.

‘ಕಾವೇರಿ ಆರತಿಗೆ ₹ 92.30 ಕೋಟಿ’

‘ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜ ಸಾಗರ ಜಲಾಶಯದ ಬಳಿ ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ ನಡೆಸಲು ಮೂಲಸೌಕರ್ಯ ಕಲ್ಪಿಸುವ ಕಾಮಗಾರಿಗೆ  ₹ 92.30 ಕೋಟಿ ಅಂದಾಜು ಮೊತ್ತದ ಪ್ರಸ್ತಾವನೆಗೆ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ‘ಈ ಯೋಜನೆ ಬಗ್ಗೆ ಹಿಂದೆಯೇ ಹೇಳಿದ್ದೆವು. ದಸರಾ ಉತ್ಸವದ ವೇಳೆ ಕಾವೇರಿ ಆರತಿ ನಡೆಸುವ ಉದ್ದೇಶವಿದೆ. ಅದಕ್ಕಾಗಿ ಸಿದ್ಧತೆ ನಡೆಸಲು ಅನುದಾನ ನೀಡಲಾಗುವುದು’ ಎಂದು ತಿಳಿಸಿದರು.

‘ಕೋವಿಡ್ ಹಣ ದುರ್ಬಳಕೆ ಅಗತ್ಯ ಕ್ರಮ’

‘ಕೋವಿಡ್‌ 19 ವಿಚಾರಣಾ ಆಯೋಗದ 1ನೇ ವರದಿಯ ಕುರಿತು ಸಚಿವ ಸಂಪುಟವು 2024ರ ಅಕ್ಟೋಬರ್‌ನಲ್ಲಿ ನೀಡಿದ್ದ ಅನುಮೋದನೆಯಂತೆ 2ನೇ ವರದಿಯಲ್ಲಿ ಉಲ್ಲೇಖಿಸಿರುವ ಹಣ ದುರುಪಯೋಗ ಮತ್ತು ಇತರೆ ಲೋಪದೋಷಗಳ ಶಿಫಾರಸ್ಸಿನ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ಸಚಿವ ಸಂಪುಟ ನಿರ್ಧರಿಸಿದೆ’ ಎಂದು ಮುಖ್ಯಮಂತ್ರಿ ತಿಳಿಸಿದರು.

ಅನುಮೋದನೆಗೊಂಡ ಪ್ರಮುಖ ಯೋಜನೆಗಳು?

* ಚಿಕ್ಕಲ್ಲೂರಿನಲ್ಲಿ ರಾಚಪ್ಪಾಜಿ ಮಂಟೇಸ್ವಾಮಿ ಸಿದ್ದಪ್ಪಾಜಿ ಪ್ರಾಧಿಕಾರ ರಚನೆ

* ನ್ಯಾ. ಕುನ್ಹಾ ನೇತೃತ್ವದ ಕೋವಿಡ್– 19 ವಿಚಾರಣಾ ಆಯೋಗವು ಸಲ್ಲಿಸಿರುವ 2ನೇ ವರದಿಯ ಕುರಿತು ಕ್ರಮ .

* ಹನೂರಿನಲ್ಲಿ ತಾಲ್ಲೂಕು ಆಸ್ಪತ್ರೆ ತಾಲ್ಲೂಕು ಭವನ ನಿರ್ಮಾಣ

* ಮೈಸೂರಿನಲ್ಲಿ ₹391 ಕೋಟಿ ಮೊತ್ತದಲ್ಲಿ ವೈಟ್ ಟ್ಯಾಪಿಂಗ್ (ಸಿಮೆಂಟ್ ರಸ್ತೆ) ನಿರ್ಮಾಣ.

* ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ₹ 53.20 ಕೋಟಿ ವೆಚ್ಚದಲ್ಲಿ ಕಾಡಾನೆ ಸಾಫ್ಟ್ ರಿಲೀಸ್ ಕೇಂದ್ರ ಸ್ಥಾಪನೆ

* ಮೈಸೂರಿನ ಇಲವಾಲದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನ ಸ್ಥಾಪನೆ

* ಮೈಸೂರು ವಿಮಾನ ನಿಲ್ದಾಣ ರನ್ ವೇ ವಿಸ್ತರಣೆಗೆ ಜಾಗ

* ನೀರಾವರಿ ಯೋಜನೆಗಳಿಗೆ ₹ 1787 ಕೋಟಿ

* ಮಾನವ–ವನ್ಯಜೀವಿ ಸಂಘರ್ಷ ನಿವಾರಣೆಗೆ ಚಾಮರಾಜನಗರ ಜಿಲ್ಲೆಯಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ₹ 210 ಕೋಟಿ

* ಕುಡಿಯುವ ನೀರಿಗಾಗಿ ₹315 ಕೋಟಿ ಆರೋಗ್ಯ ಸುಧಾರಣೆಗೆ ₹228 ಕೋಟಿ ಕೊಳ್ಳೇಗಾಲದಲ್ಲಿ ಜಿಲ್ಲಾ ಆಸ್ಪತ್ರೆ ನಿರ್ಮಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.