ಎಚ್.ಡಿ.ಕೋಟೆ: ತಾಲ್ಲೂಕಿನ ತುಂಬಸೋಗೆ ಪಂಚಾಯಿತಿ ವ್ಯಾಪ್ತಿಯ ಜಕ್ಕಹಳ್ಳಿ ಗ್ರಾಮದ ಕುಡಿಯುವ ನೀರಿನ ಟ್ಯಾಂಕ್ನಲ್ಲಿ ಕಾಗೆಯ ಕಳೇಬರ ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ.
ಕುಡಿಯುವ ನೀರು ದುರ್ವಾಸನೆ ಬಂದು, ಅನೇಕ ದಿನಗಳ ಬಳಿಕ ನೀರು ಬಾರದಿದ್ದರಿಂದ ಗ್ರಾಮಸ್ಥರ ಒತ್ತಾಯದ ಮೇರೆಗೆ ಪಂಚಾಯಿತಿ ಸಿಬ್ಬಂದಿ ಟ್ಯಾಂಕ್ ಪರೀಕ್ಷಿಸಿದಾಗ ಪೈಪ್ನೊಳಗೆ ಕಾಗೆಯ ಕಳೇಬರ ಸಿಕ್ಕಿಹಾಕಿಕೊಂಡಿರುವುದು ಬಯಲಾಗಿದೆ.
ಗ್ರಾಮ ಪಂಚಾಯಿತಿ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟು ದಿನಗಳಿಂದ ಎದುರಾಗಿದ್ದು, ಗ್ರಾಮ ಪಂಚಾಯಿತಿ ಸಮಸ್ಯೆಗೆ ಪರಿಹಾರ ಸೂಚಿಸುವಲ್ಲಿ ವಿಫಲವಾಗಿದೆ. ಶುದ್ಧ ಕುಡಿಯುವ ನೀರಿನ ಘಟಕದಲ್ಲಿಯೂ ಸರಿಯಾದ ನೀರು ಬರುವುದಿಲ್ಲ. ಟ್ಯಾಂಕ್ ಅನ್ನು ಶುಚಿಯಾಗಿ ಇಟ್ಟುಕೊಂಡಿಲ್ಲ’ ಎಂದು ಗ್ರಾಮದ ಮುರಳಿ ಆರೋಪಿಸುತ್ತಾರೆ.
‘ಈ ಹಿಂದೆ ಕಲುಷಿತ ನೀರು ಸೇವಿಸಿ 60ಕ್ಕೂ ಹೆಚ್ಚು ಜನ ಅನಾರೋಗ್ಯಕ್ಕೀಡಾಗಿದ್ದರು. ಅದೇ ಪರಿಸ್ಥಿತಿ ಮರುಕಳಿಸುವುದು ಬೇಡ. ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮದ ಚಲುವರಾಜು,ಮಹದೇವು ಒತ್ತಾಯಿಸಿದರು.
‘ನೀರಿನ ಟ್ಯಾಂಕ್ ನಿರ್ವಹಣೆಯನ್ನು ಗುತ್ತಿಗೆ ನೀಡಲಾಗಿದೆ. ಕುಡಿಯುವ ನೀರು ವಾಸನೆ ಬರುತ್ತಿದ್ದು, ಪರಿಶೀಲಿಸಿದಾಗ ಕಾಗೆ ಸತ್ತಿರುವುದು ಪತ್ತೆಯಾಗಿದೆ. ಕೂಡಲೇ ಟೆಂಡರ್ ಪಡೆದವರನ್ನು ಕರೆದು ಟ್ಯಾಂಕ್ ಸ್ವಚ್ಛತೆಗೆ ಸೂಚಿಸಲಾಗಿದೆ’ ಎಂದು ತುಂಬಸೋಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಧುರಾ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.