ಶ್ರೀರಂಗಪಟ್ಟಣ ತಾಲ್ಲೂಕಿನ ದರಸಗುಪ್ಪೆ ಬಳಿ ಸಿಡಿಎಸ್ ನಾಲೆಯ ಏರಿ ಒಡೆದಿದೆ
ಮೈಸೂರು: ಮೈಸೂರು ಹಾಗೂ ಮಂಡ್ಯ ಜಿಲ್ಲೆಯಲ್ಲಿ ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಿಗ್ಗೆಯವರೆಗೂ ಗುಡುಗು ಸಹಿತ ಜೋರು ಮಳೆ ಬಿದ್ದಿತು.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ದರಸಗುಪ್ಪೆ ಬಳಿ ಚಿಕ್ಕದೇವರಾಯಸಾಗರ (ಸಿಡಿಎಸ್) ನಾಲೆಯ ಏರಿ ಒಡೆದಿದೆ.
ನಾಲೆಯ 21ನೇ ಮೈಲಿ ಬಳಿ 15 ಅಡಿಗಳಷ್ಟು ಒಡೆದಿದ್ದು, ಕೃಷಿ ಭೂಮಿಗೆ ನೀರು ನುಗ್ಗಿದೆ. ನಾಲೆ ಪಕ್ಕದ ಕೃಷಿ ಭೂಮಿ ಬೆಳೆ ಸಹಿತ ಕೊಚ್ಚಿಹೋಗಿದೆ. ಅಡಿಕೆ, ತೆಂಗು, ಕಬ್ಬು, ಭತ್ತದ ಬೆಳೆ ಜಲಾವೃತವಾಗಿದ್ದು,
ಕೆಲವೆಡೆ ಬೆಳೆಗಳ ಮೇಲೆ ಮಣ್ಣು ಸಂಗ್ರಹವಾಗಿದೆ. ಇದರಿಂದ ಕೃಷಿಕರು
ಕಂಗಾಲಾಗಿದ್ದಾರೆ.
ಶ್ರೀರಂಗಪಟ್ಟಣ ತಾಲ್ಲೂಕಿನ ಚಿಕ್ಕಪಾಳ್ಯ ಗ್ರಾಮದಲ್ಲಿ ಮನೆಯ ಗೋಡೆ ಕುಸಿದಿದೆ. ಗ್ರಾಮದ ಪುನೀತ್ ಕುಮಾರ ಅವರ ಮನೆಯ ಗೋಡೆ 25 ಅಡಿಗಳಷ್ಟು ಕುಸಿದು ಬಿದ್ದಿದೆ. ಮಲಗಿದ್ದ ಪುನೀತ್ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಅನುಕೂಲ: ಮೈಸೂರು ತಾಲ್ಲೂಕಿನ ಜಯಪುರ ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಉತ್ತಮ ಮಳೆ ಆಗಿದ್ದು, ರಾಗಿ, ತೊಗರಿ, ಅವರೆ, ಹುರುಳಿ ಮೊದಲಾದ ಬೆಳೆಗಳಿಗೆ ಅನುಕೂಲವಾಗಿದೆ.
ಹುಣಸೂರು ತಾಲ್ಲೂಕಿನಲ್ಲಿ ಹೊಡಿಜೆ ಕಟ್ಟೆ, ಮೋದೂರು ಕೆರೆ, ನಾಗನಹಳ್ಳಿ ಕೆರೆ ಮತ್ತು ಹಿರಿಕದಯಾತನಗಳ್ಳಿ ಭಾಗದಲ್ಲಿ 50 ಎಕರೆಗೂ ಜಾಸ್ತಿ ಭತ್ತದ ಬೆಳೆ ಕೊಚ್ಚಿ ಹೋಗಿದೆ.
ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನಲ್ಲಿ ಗುರುವಾರ ರಾತ್ರಿ ಸುರಿದ ಜೋರು ಮಳೆಯು, ಒಣಗುತ್ತಿದ್ದ ಬೆಳೆಗಳಿಗೆ ಜೀವಸೆಲೆ ಒದಗಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.