ಮೈಸೂರು: ಕಳೆದ ಕೆಲವು ತಿಂಗಳುಗಳಿಂದ ಕಡಿಮೆಯಾಗಿದ್ದ ಸರಗಳ್ಳತನ ನಗರದಲ್ಲಿ ಮತ್ತೆ ಆರಂಭವಾಗಿದೆ. ಬುಧವಾರ ಸಂಜೆ ಚಾಮರಾಜಮೊಹಲ್ಲಾ ಹಾಗೂ ವಿ.ವಿ.ಮೊಹಲ್ಲಾಗಳಲ್ಲಿ 15 ನಿಮಿಷಗಳ ಅಂತರದಲ್ಲಿ ಸರಗಳ್ಳತನ ನಡೆದಿದೆ.
ಮೊದಲಿಗೆ ಸರಗಳ್ಳರು ಚಾಮರಾಜಮೊಹಲ್ಲಾದ ದಿವಾನ್ಸ್ ರಸ್ತೆಯಲ್ಲಿ ಸಂಜೆ 7.15ರಲ್ಲಿ ನಡೆದುಕೊಂಡು ಹೋಗುತ್ತಿದ್ದ ಉಮಾದೇವಿ (70) ಎಂಬುವವರ ಕುತ್ತಿಗೆಯಲ್ಲಿದ್ದ 70 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾದರು.
ಇಲ್ಲಿಂದ ಇವರು 7.45ಕ್ಕೆ ವಿ.ವಿ.ಪುರಂ ಸಮೀಪದ ಹೈವೇ ಹೋಟೆಲ್ ಕ್ರಾಸ್ ರಸ್ತೆಯಲ್ಲಿ ಸೊಸೆ ಹಾಗೂ ಮೊಮ್ಮಕ್ಕಳೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಮೀನಾಕ್ಷಮ್ಮ (70) ಅವರ ಕುತ್ತಿಗೆಯಲ್ಲಿದ್ದ 70 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಹೋದರು.
ಎರಡೂ ಕಡೆಯೂ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಕೃತ್ಯ ಎಸಗಿದ್ದಾರೆ. ಚಾಲನೆ ಮಾಡುತ್ತಿದ್ದ ವ್ಯಕ್ತಿ ಹೆಲ್ಮೆಟ್ ಧರಿಸಿದ್ದರೆ, ಹಿಂಬದಿ ಸವಾರ ಹೆಲ್ಮೆಟ್ ಹಾಕಿರಲಿಲ್ಲ. ಹಿಂದಿನಿಂದ ಬಂದು ಸ್ವಲ್ಪ ದೂರ ಮುಂದೆ ಹೋಗಿ ವಾಪಸ್ ಸ್ಕೂಟರ್ನ್ನು ಹಿಂದಕ್ಕೆ ತಿರುಗಿಸಿಕೊಂಡು ಸರಗಳ್ಳತನ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯರು ರಸ್ತೆಯಲ್ಲಿ ಓಡಾಡುವಾಗ ಚಿನ್ನದ ಸರವನ್ನು ಬಹಿರಂಗವಾಗಿ ಪ್ರದರ್ಶಿಸಿಕೊಂಡು ಹೋಗುವ ಬದಲು ಎಚ್ಚರದಿಂದ ಸಾಗಬೇಕು. ಅಪರಿಚಿತರು ಎದುರಾದರೇ ಜಾಗರೂಕರಾಗಿರಬೇಕು. ಅನುಮಾನಾಸ್ಪದ ವ್ಯಕ್ತಿಗಳ ಚಲನವಲನ ಕುರಿತು ಪೊಲೀಸ್ ನಿಯಂತ್ರಣ ಸಂಖ್ಯೆ 112 ಗೆ ಮಾಹಿತಿ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಕೃತ್ಯ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಶೋಧ ಕಾರ್ಯ ನಡೆಸಿದರಾದರೂ ಸರಗಳ್ಳರ ಸುಳಿವು ಲಭ್ಯವಾಗಲಿಲ್ಲ. ಲಕ್ಷ್ಮೀಪುರಂ ಹಾಗೂ ವಿ.ವಿ.ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋವಿಡ್ ಸಂಕಷ್ಟ; ಆತ್ಮಹತ್ಯೆ
ಮೈಸೂರು: ಕೋವಿಡ್ ಸಂಕಷ್ಟದಿಂದ ವ್ಯಾಪಾರದಲ್ಲಿ ನಷ್ಟ ಉಂಟಾಯಿತು ಎಂದು ಬೇಸರಗೊಂಡ ಹುಣಸೂರಿನ ರಿಚರ್ಡ್ಸನ್ (30) ಇಲ್ಲಿನ ನಾಯ್ಡು ನಗರದ ಉದ್ಯಾನದ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ವ್ಯಾಪಾರ ನಡೆಸುತ್ತಿದ್ದ ಇವರು ಕೋವಿಡ್ ನಂತರ ನಷ್ಟಕ್ಕೆ ತುತ್ತಾಗಿದ್ದರು. ಸಾಕಷ್ಟು ಆರ್ಥಿಕ ತೊಂದರೆಗೂ ಸಿಲುಕಿ ಖಿನ್ನತೆಗೆ ಒಳಗಾಗಿದ್ದರು. ಇಲ್ಲಿನ ತಮ್ಮ ಸಂಬಂಧಿಕರ ನಿವಾಸಕ್ಕೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಎನ್.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.