ಮೈಸೂರು: ಸಾರ್ವಜನಿಕರ ದರ್ಶನಕ್ಕೆ ಚಾಮುಂಡೇಶ್ವರಿ ದೇಗುಲದ ಬಾಗಿಲು ಸೋಮವಾರ (ಜೂನ್ 8) ತೆರೆಯಲಿದ್ದು, ಚಾಮುಂಡಿಬೆಟ್ಟದಲ್ಲಿ ಸಕಲ ಸಿದ್ಧತೆ ನಡೆದಿವೆ.
ಕೊರೊನಾ ವೈರಣು ಹರಡುವಿಕೆ ನಿಯಂತ್ರಣ ನಿಟ್ಟಿನಲ್ಲಿ ಮುಜರಾಯಿ ಇಲಾಖೆ ಅಧೀನದ ಈ ದೇಗುಲಕ್ಕೆ ಮಾರ್ಚ್ ಕೊನೆಯ ವಾರ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು.
ಸದ್ಯಕ್ಕೆ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಉಳಿದ ಸೇವೆಗಳು ಇರುವುದಿಲ್ಲ. ಜೊತೆಗೆ ಹೂ, ಹಣ್ಣು, ಕಾಯಿ ಮುಂತಾದ ಪೂಜಾ ಸಾಮಗ್ರಿಗಳನ್ನು ತರುವಂತಿಲ್ಲ. ತೀರ್ಥ, ಪ್ರಸಾದ ಇರುವುದಿಲ್ಲ.
‘ದರ್ಶನಕ್ಕೆ ಸೋಮವಾರ ಬೆಳಿಗ್ಗೆ ದೇಗುಲದ ಬಾಗಿಲು ತೆರೆಯಲಾಗುವುದು. ಸರ್ಕಾರದ ಮಾರ್ಗಸೂಚಿಯಂತೆ ಸಿದ್ಧತೆ ಮಾಡಿಕೊಂಡಿದ್ದು, ಮುನ್ನೆಚ್ಚರಿಕೆ ಕ್ರಮ ಅನುಸರಿಸಲಾಗುತ್ತಿದೆ’ ಎಂದು ದೇಗುಲದ ಕಾರ್ಯನಿರ್ವಹಣಾಧಿಕಾರಿಯೂ ಆಗಿರುವ ಮುಜರಾಯಿ ಇಲಾಖೆ ತಹಶೀಲ್ದಾರ್ ಯತಿರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
ದೇಗುಲದ ಆವರಣ ತೊಳೆದು ಸ್ವಚ್ಛಗೊಳಿಸಲಾಗಿದೆ. ಅಂತರ ಕಾಯ್ದುಕೊಳ್ಳಲು ಆರು ಅಡಿಗೊಂದು ಬಾಕ್ಸ್ ಮಾಡಲಾಗಿದ್ದು, ಆ ಸ್ಥಳದಲ್ಲೇ ನಿಲ್ಲಬೇಕು. ಥರ್ಮಲ್ ಸ್ಕ್ರೀನಿಂಗ್ ನಡೆಸಲು ಹಾಗೂ ಸ್ಯಾನಿಟೈಸರ್ ನೀಡಲು ವ್ಯವಸ್ಥೆ ಮಾಡಲಾಗಿದೆ.
‘ಬೆಳಿಗ್ಗೆ 7.30ರಿಂದ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಳ್ಳಲಾಗುತ್ತಿದೆ. ಮೊದಲಿಗೆ 15 ಮಂದಿ ಒಳಗೆ ಹೋಗಿ ದೇವರ ದರ್ಶನ ಪಡೆಯುತ್ತಾರೆ. ಅವರು ಹೊರಗೆ ಬಂದ ಬಳಿಕ ಮತ್ತೆ 15 ಮಂದಿಯನ್ನು ಒಳಗೆ ಬಿಡಲಾಗುತ್ತದೆ’ ಎಂದು ಚಾಮುಂಡೇಶ್ವರಿ ದೇಗುಲದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ತಿಳಿಸಿದರು.
ಜ್ವರ, ಕೆಮ್ಮು, ನೆಗಡಿ ಹಾಗೂ ಇತರ ರೋಗ ಲಕ್ಷಣಗಳು ಇದ್ದರೆ ದೇವಾಲಯಕ್ಕೆ ಪ್ರವೇಶವಿರುವುದಿಲ್ಲ. ಗರ್ಭಿಣಿಯರು, 65 ವರ್ಷ ಮೇಲಿನವರು, 10 ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ನಿಷೇಧಿಸಿದೆ.
ಪೂರ್ಣ ಲಾಕ್ಡೌನ್ ಇದ್ದಾಗಲೂ ಚಾಮುಂಡೇಶ್ವರಿ ದೇಗುಲದಲ್ಲಿ ನಿತ್ಯ ಬೆಳಿಗ್ಗೆ, ಸಂಜೆ ಸಂಕಲ್ಪ ಹಾಗೂ ಜಪ ಮಾಡಿ ಪೂಜೆ ಸಲ್ಲಿಸಲಾಗುತಿತ್ತು.
‘ದಕ್ಷಿಣ ಕಾಶಿ’ ಖ್ಯಾತಿಯ ನಂಜನಗೂಡಿನ ಶ್ರೀಕಂಠೇಶ್ವರ ದೇಗುಲದಲ್ಲೂ ಸಿದ್ಧತೆ ನಡೆದಿದ್ದು, ಸೋಮವಾರದಿಂದ ದರ್ಶನ ಸಿಗಲಿದೆ. ಮಾರ್ಗಸೂಚಿ ಪ್ರಕಾರವೇ ಮುನ್ನೆಚ್ಚರಿಕೆ ಕ್ರಮ ವಹಿಸಿ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ದೇಗುಲದ ಅಧಿಕಾರಿಗಳು ಹೇಳಿದ್ದಾರೆ.
ಈಗಾಗಲೇ ದೇಗುಲದ ಸಿಬ್ಬಂದಿಯ ಆರೋಗ್ಯ ತಪಾಸಣೆ ನಡೆಸಲಾಗಿದೆ. ಹೆಚ್ಚಿನ ಸಂಖ್ಯೆಯ ಕೋವಿಡ್ ಪ್ರಕರಣಗಳು ಈ ತಾಲ್ಲೂಕಿನಲ್ಲಿ ವರದಿ ಆಗಿದ್ದರಿಂದ ಭಾರಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.