ADVERTISEMENT

ಚಾಮುಂಡಿಬೆಟ್ಟ ಉಳಿವಿಗೆ ಕೂಗು: ಪ್ಲಾಸ್ಟಿಕ್‌ ಮುಕ್ತಗೊಳಿಸುವಂತೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 5:54 IST
Last Updated 5 ಜನವರಿ 2026, 5:54 IST
ಮೈಸೂರಿನ ಚಾಮುಂಡಿಬೆಟ್ಟದ ಸಂರಕ್ಷಣೆಗಾಗಿ ‘ಪರಿಸರಕ್ಕಾಗಿ ನಾವು’ ಸೇರಿದಂತೆ ವಿವಿಧ ಸಂಘಟನೆಗಳು ಭಾನುವಾರ ಆಯೋಜಿಸಿದ್ದ ನಡಿಗೆಯಲ್ಲಿ ಪ್ಲೆಕಾರ್ಡ್‌ ಹಿಡಿದ ಚಿಣ್ಣರು ಬೆಟ್ಟ ಹತ್ತುವವರಿಗೆ ಜಾಗೃತಿ ಮೂಡಿಸಿದರು  ಪ್ರಜಾವಾಣಿ ಚಿತ್ರ
ಮೈಸೂರಿನ ಚಾಮುಂಡಿಬೆಟ್ಟದ ಸಂರಕ್ಷಣೆಗಾಗಿ ‘ಪರಿಸರಕ್ಕಾಗಿ ನಾವು’ ಸೇರಿದಂತೆ ವಿವಿಧ ಸಂಘಟನೆಗಳು ಭಾನುವಾರ ಆಯೋಜಿಸಿದ್ದ ನಡಿಗೆಯಲ್ಲಿ ಪ್ಲೆಕಾರ್ಡ್‌ ಹಿಡಿದ ಚಿಣ್ಣರು ಬೆಟ್ಟ ಹತ್ತುವವರಿಗೆ ಜಾಗೃತಿ ಮೂಡಿಸಿದರು  ಪ್ರಜಾವಾಣಿ ಚಿತ್ರ   

ಮೈಸೂರು: ಚಾಮುಂಡಿಬೆಟ್ಟದ ಉಳಿವಿಗಾಗಿ ನೂರಾರು ನಾಗರಿಕರು, ಚಿಣ್ಣರು, ಪರಿಸರ ಪ್ರಿಯರು ಭಾನುವಾರ ಬೆಳಿಗ್ಗೆ ಬೆಟ್ಟದ ಪಾದದಿಂದ ಹೆಜ್ಜೆ ಹಾಕಿದರು. ನಗರದ ಹಸಿರು ವಲಯವನ್ನು ಸಂರಕ್ಷಿಸಲು, ಆಡಳಿತ ನಡೆಸುವವರ ಕಣ್ಣು ತೆರೆಸಲು ಜೊತೆಯಾಗುವಂತೆ ಅಲ್ಲಿಗೆ ಬಂದ ಮೈಸೂರಿಗರಿಗೆ ಕರೆ ಕೊಟ್ಟರು. 

‘ಅಭಿವೃದ್ಧಿ ಯೋಜನೆ ಮತ್ತು ಮಾನವ ಹಸ್ತಕ್ಷೇಪದಿಂದ ಬೆಟ್ಟ ನಲುಗಿದೆ. ಪ್ಲಾಸ್ಟಿಕ್ ತ್ಯಾಜ್ಯದ ಕೊಂಪೆಯಾಗಿದೆ. ಬಹುಮಹಡಿ ಕಟ್ಟಡಗಳು, ಮನೆಗಳ ನಿರ್ಮಾಣಕ್ಕೆ ಕಡಿವಾಣ ಹಾಕಿ, ಒತ್ತುವರಿ ನಿಲ್ಲಿಸಿ’ ಎಂಬ ಘೋಷ ಕೂಗಿದ ನಾಗರಿಕರು ಸಾವಿರ ಮೆಟ್ಟಿಲುಗಳನ್ನು ಏರಿ, ಪ್ಲೆಕಾರ್ಡ್‌ಗಳನ್ನು ಹಿಡಿದು ಜಾಗೃತಿ ಮೂಡಿಸಿದರು.

ಕಪತ್ತಗುಡ್ಡ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ, ನಿಡಸೋಸಿ ಮಠದ ನಿಜಲಿಂಗೇಶ್ವರ ಸ್ವಾಮೀಜಿ, ಕೆಸವತ್ತೂರು ಮಠದ ಬಸವರಾಜೇಂದ್ರ ಸ್ವಾಮೀಜಿ, ತೊರೆನೂರು ಮಠದ ಮಲ್ಲೇಶ ಸ್ವಾಮೀಜಿ, ‘ಪರಿಸರಕ್ಕಾಗಿ ನಾವು’ ಸಂಘಟನೆ ಅಧ್ಯಕ್ಷ ಎ.ಟಿ.ರಾಮಸ್ವಾಮಿ, ಪರಿಸರ ತಜ್ಞ ಕೃಪಾಕರ, ಕಾಂಗ್ರೆಸ್‌ ಮುಖಂಡ ಎಂ.ಕೆ.ಸೋಮಶೇಖರ್ ಮೊದಲಾದವರು ಸೇರಿದಂತೆ ಮುಖಂಡರು ತೋಳಿಗೆ ಹಸಿರು ಪಟ್ಟಿ ಹಾಕಿಕೊಂಡು ಬೆಟ್ಟದ ಉಳಿವಿನ ಅಗತ್ಯವನ್ನು ಸಾರಿದರು.

ADVERTISEMENT

ಕನ್ನಡಿಗರ ಜವಾಬ್ದಾರಿ:

ಶಿವಕುಮಾರ ಸ್ವಾಮೀಜಿ ಮಾತನಾಡಿ, ‘ನಾಡಿನ ಎಲ್ಲ ಬೆಟ್ಟ– ಗುಡ್ಡಗಳನ್ನು ಉಳಿಸುವ ಜವಾಬ್ದಾರಿ 7 ಕೋಟಿ ಕನ್ನಡಿಗರ ಮೇಲಿದೆ. ನಿರ್ಮಲವಾದ ಪರಿಸರ ನಿರ್ಮಾಣದಲ್ಲಿಯೇ ದೇವರು ಇರುತ್ತಾನೆ. ಗದುಗಿನ ಜನರು ಸಂಘಟಿತರಾಗಿ ಕಪತ್ತಗುಡ್ಡದಲ್ಲಿ ಗಣಿಗಾರಿಕೆ ಬಾರದಂತೆ ನೋಡಿಕೊಂಡರು. ಮೈಸೂರಿನ ಪ್ರಜ್ಞಾವಂತರು ಅಭಿವೃದ್ಧಿ ಯೋಜನೆಗಳಿಂದ ನಲುಗಿರುವ ಚಾಮುಂಡಿ ಬೆಟ್ಟ ಉಳಿಸಿಕೊಳ್ಳಬೇಕು’ ಎಂದರು.

ನಿಜಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ‘ದೇವರ ದರ್ಶನಕ್ಕೆ ದೇಗುಲಕ್ಕೆ ಬರುವವರು ಪವಿತ್ರ ಜಾಗವನ್ನು ಗಲೀಜು ಮಾಡಿದರೆ ಹೇಗೆ? ಸ್ವಚ್ಛತೆಯೇ ಆದ್ಯತೆಯಾಗಬೇಕು. ಜಾಗೃತರಾಗಿ ಕಸ ಮುಕ್ತ ಬೆಟ್ಟ ಆಗಿಸಬೇಕು. ಸ್ವಚ್ಛ ಪರಿಸರ ಸಾಕಾರಗೊಳ್ಳಬೇಕು’ ಎಂದು ಹೇಳಿದರು.

ತ್ಯಾಜ್ಯ ಮುಕ್ತಗೊಳಿಸಿ:

‘ಪರಿಸರಕ್ಕಾಗಿ ನಾವು’ ಸಂಘಟನೆ ಅಧ್ಯಕ್ಷ ಎ.ಟಿ.ರಾಮಸ್ವಾಮಿ, ‘ನಿಸರ್ಗದತ್ತವಾಗಿ ಚಾಮುಂಡಿ ಬೆಟ್ಟ ಸೃಷ್ಟಿಯಾಗಿದೆ. ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಲು, ತಿರುಪತಿ, ತಿರುವಣ್ಣಮಲೈನಲ್ಲಿ ಇರುವಂತೆಯೇ ಯಾರೂ ಪ್ಲಾಸ್ಟಿಕ್ ಕವರ್‌ಗಳನ್ನು ತೆಗೆದುಕೊಂಡು ಹೋಗದಂತೆ ಬೆಟ್ಟದ ಪಾದದಲ್ಲಿಯೇ ಪರಿಶೀಲನೆ ನಡೆಸಬೇಕು. ಅದರಿಂದ ತ್ಯಾಜ್ಯದ ಕೊಂಪೆ ಆಗಿರುವ ಬೆಟ್ಟದ ರಕ್ಷಣೆ ಸಾಧ್ಯವಾಗುತ್ತದೆ’ ಎಂದರು.

ಲೇಖಕಿ ಕುಸುಮಾ ಆಯರಹಳ್ಳಿ ಮತ್ತು ತಂಡದವರು ‘ರೆಂಬೆ ಕೊಂಬೆಯ ಮ್ಯಾಲ’ ಮೊದಲಾದ ಗೀತೆಗಳನ್ನು ಹಾಡಿದರು.

ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಆರ್‌. ರಘು (ಕೌಟಿಲ್ಯ), ಮೈಸೂರು ಗ್ರಾಹಕರ ಪರಿಷತ್‌ನ ಭಾಮಿ ವಿ.ಶೆಣೈ, ನಿವೃತ್ತ ಮೇಜರ್ ಜನರಲ್‌ ಸುಧೀರ್ ಒಂಬತ್ಕೆರೆ, ಇತಿಹಾಸ ತಜ್ಞ ಪ್ರೊ.ಎನ್‌.ಎಸ್‌.ರಂಗರಾಜು, ಪರಿಸರ ತಜ್ಞ ಯು.ಎನ್.ರವಿಕುಮಾರ್, ಪಿಯುಸಿಎಲ್‌ನ ಕಮಲ್ ಗೋಪಿನಾಥ್, ಮುಮುಖಂಡರಾದ ಎಚ್‌.ವಿ.ರಾಜೀವ್, ಪರಶುರಾಮೇಗೌಡ, ಗೋಕುಲ್ ಗೋವರ್ಧನ್, ಲೀಲಾ ಶಿವಕುಮಾರ್, ಒಡನಾಡಿಯ ಸ್ಟ್ಯಾನ್ಲಿ, ಕುಮುದಿನಿ ಅಚ್ಚಿ, ಅರುಣ್‌, ಶೈಲಜೇಶ್, ಪ್ರಭಾ, ಲೀಲಾ ವೆಂಕಟೇಶ್, ಭಾಗ್ಯಾ ಶಂಕರ್, ಗೀತಾ, ಶ್ವೇತಾ, ಅಭಿಷೇಕ್, ಸುರೇಶ್‌ ಸುಬ್ಬರಾವ್, ರವಿ ಪಾಲ್ಗೊಂಡಿದ್ದರು.

‘ಭೂ ಸ್ವರೂಪದೊಂದಿಗೆ ನವಿಲಕ್ಕಿ ಮರೆ’ 

‘ಮನುಷ್ಯ ಹುಟ್ಟುವುದಕ್ಕಿಂತಲೂ ಮೊದಲು ಚಾಮುಂಡಿ ಬೆಟ್ಟವಿತ್ತು. ದಖನ್ ಪ್ರಸ್ಥಭೂಮಿಯ ದಕ್ಷಿಣದಲ್ಲಿರುವ ಇದು ಗುಲಾಬಿ ಗ್ರಾನೈಟ್‌ ಕಲ್ಲುಗಳಿಂದ ಕೂಡಿದೆ. ಅಭಿವೃದ್ಧಿ ಹೆಸರಿನಲ್ಲಿ ಬೆಟ್ಟದ ಪರಿಸರಕ್ಕೆ ಮಾರಕವಾದ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ’ ಎಂದು ಪರಿಸರ ತಜ್ಞ ಕೃಪಾಕರ ಕಳವಳ ವ್ಯಕ್ತಪಡಿಸಿದರು.

‘ಬೆಟ್ಟದಲ್ಲಿ ಅಪರೂಪದ 40 ಜಾತಿಯ ಮರಗಳಿವೆ. ಬ್ರಿಟಿಷ್‌ ಪರಿಸರ ತಜ್ಞ ಜಾರ್ಜ್‌ ಸ್ಯಾಂಡರ್‌ಸನ್ ತನ್ನ ಡೈರಿಯಲ್ಲಿ ಬೆಟ್ಟದ ಕೆಳಗೆ ಕಿ.ಮೀ.ಗಳಷ್ಟು ಚಾಚಿದ್ದ ಆಳೆತ್ತರದ ಹುಲ್ಲುಗಾವಲು ಹಾಗೂ ಈಗ ಅಳಿವಿನಂಚಿನಲ್ಲಿರುವ ‘ಫ್ಲೊರಿಕಾನ್‌’ ಹಕ್ಕಿಗಳು (ನವಿಲಕ್ಕಿ) ಕೆಲ ಮೀಟರ್‌ಗಳವರೆಗೆ ಹಾರುತ್ತಿದ್ದ ಅಪರೂಪದ ದೃಶ್ಯ ನೆನೆಸಿಕೊಂಡಿದ್ದಾನೆ. ಬೆಟ್ಟದ ಕೆಳಗಿದ್ದ ಹುಲ್ಲುಗಾವಲು ಕೆರೆಗಳು ಒತ್ತುವರಿಯಾಗಿವೆ. ಮೇಲೆ ಕಾಂಕ್ರೀಟ್‌ ಕಾಡು ಎದ್ದಿದೆ’ ಎಂದು ಕಳವಳ ವ್ಯಕ್ತ‍ಪಡಿಸಿದರು.

ಹಕ್ಕೊತ್ತಾಯಗಳು

  • ಚಾಮುಂಡಿ ಬೆಟ್ಟವು ಭಕ್ತಿ ಶಾಂತಿಯಿಂದ ಕೂಡಿದ ಪವಿತ್ರ ಆಧ್ಯಾತ್ಮಿಕ ಸ್ಥಳ ಆಗಬೇಕು l ಪ್ಲಾಸ್ಟಿಕ್ ನಿಷೇಧ ವಲಯವಾಗಿ ನಿರ್ಮಾಣ ಬೆಟ್ಟದ ಕೆಳಗೆ ಪ್ಲಾಸ್ಟಿಕ್ ಒಯ್ಯದಂತೆ ಪರಿಶೀಲಿಸಬೇಕು

  • ಎಲ್ಲ ರೀತಿಯ ಖಾಸಗಿ ವಾಹನ ಓಡಾಟ ನಿಷೇಧಿಸಿ ಗೋಪಾಲಸ್ವಾಮಿ ಬೆಟ್ಟದ ಮಾದರಿಯಲ್ಲಿ ಬಸ್‌ ವ್ಯವಸ್ಥೆ ಕಲ್ಪಿಸಬೇಕು

  • ಚಾಮುಂಡಿ ಬೆಟ್ಟ ಪ್ರಾಧಿಕಾರ ಪುನರ್ ರಚನೆ ಆಗಬೇಕು. ಅದರಲ್ಲಿ ಪರಿಸರ ಜಲ ವನ್ಯಜೀವಿ ತಜ್ಞರು ಭೂ ವಿಜ್ಞಾನಿ ಪರಂಪರೆ ತಜ್ಞರು ಸದಸ್ಯರಾಗಿರಬೇಕು

  • ಖಾಲಿ ಇರುವ 400 ಮಳಿಗೆ ದುರಸ್ತಿಗೊಳಿಸಿ ರಸ್ತೆ ಬದಿ ವ್ಯಾಪಾರಿಗಳನ್ನು ಅಲ್ಲಿಗೆ ಸ್ಥಳಾಂತರಿಸಬೇಕು

  • ಪ್ರಸಾದ್‌ ಯೋಜನೆಯಡಿ ಯಾವುದೇ ಹೊಸ ಕಟ್ಟಡ ನಿರ್ಮಾಣ ಮಾಡಬಾರದು. ಹಣವನ್ನು ಕೆರೆ ರಸ್ತೆ ಸ್ವಚ್ಛತೆ ನಿರ್ವಹಣೆ ಅಕ್ರಮ ಒತ್ತುವರಿ ತೆರವುಗೊಳಿಸಲು ಬಳಸಿಕೊಳ್ಳಬೇಕು

  • ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ಮೆಟ್ಟಿಲುಗಳಲ್ಲಿ ರಾಸಾಯನಿಕ ಕುಂಕುಮ ಹಚ್ಚುವುದಕ್ಕೆ ನಿಷೇಧಿಸಬೇಕು. ಬೆಟ್ಟದ ಧಾರಣಾ ಸಾಮರ್ಥ್ಯದ ಮೌಲ್ಯಮಾಪನ ಮಾಡಬೇಕು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.