ADVERTISEMENT

ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶ ಇಲ್ಲ

ಆಷಾಢ ಶುಕ್ರವಾರಗಳಂದು ಹೆಲಿಪ್ಯಾಡ್‌ನಲ್ಲಿ ವಾಹನ ನಿಲುಗಡೆ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 2:43 IST
Last Updated 3 ಜುಲೈ 2019, 2:43 IST
   

ಮೈಸೂರು: ಪ್ರತಿ ವರ್ಷದಂತೆ ಈ ಬಾರಿಯೂ ಆಷಾಢ ಶುಕ್ರವಾರ ಹಾಗೂ ಚಾಮುಂಡೇಶ್ವರಿ ಅಮ್ಮನವರ ಜನ್ಮೋತ್ಸವಗಳ ದಿನದಂದು ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಲಲಿತಮಹಲ್ ಹೆಲಿಪ್ಯಾಡ್‌ನಲ್ಲಿ ವಾಹನಗಳನ್ನು ನಿಲ್ಲಿಸಿ, ನಗರ ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಬೆಟ್ಟವನ್ನು ತಲುಪಬಹುದಾಗಿದೆ.

ಜುಲೈ 5, 12, 19, ಹಾಗೂ 26ರಂದು ಆಷಾಢ ಶುಕ್ರವಾರಗಳಿದ್ದರೆ, 24ರಂದು ಚಾಮುಂಡೇಶ್ವರಿ ಅಮ್ಮನವರ ಜನ್ಮೋತ್ಸವ ಇದೆ. ಈ ದಿನಗಳಂದು ಸಂಚಾರದಲ್ಲಿ ಪೊಲೀಸರು ಈ ಬದಲಾವಣೆ ಮಾಡಿದ್ದಾರೆ.

ಪ್ರತಿ ಗುರುವಾರದ ರಾತ್ರಿ 11 ಗಂಟೆಯಿಂದ ಶುಕ್ರವಾರದ ರಾತ್ರಿ 11ರವರೆಗೆ ಒಟ್ಟು 3 ಪಾಳಿಗಳಲ್ಲಿ 831 ಮಂದಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇವರಲ್ಲಿ ಎಸಿಪಿ ದರ್ಜೆಯ 8 ಮಂದಿ ಅಧಿಕಾರಿಗಳು, 31 ಇನ್‌ಸ್ಪೆಕ್ಟರ್‌ಗಳು, 28 ಸಬ್‌ಇನ್‌ಸ್ಪೆಕ್ಟರ್‌ಗಳು, 124 ಸಹಾಯಕ ಸಬ್‌ಇನ್‌ಸ್ಪೆಕ್ಟರ್‌ಗಳು, 306 ಹೆಡ್‌ಕಾನ್‌ಸ್ಟೆಬಲ್‌ಗಳು, 160 ಮಹಿಳಾ ಸಿಬ್ಬಂದಿ, 174 ಗೃಹರಕ್ಷಕ ಸಿಬ್ಬಂದಿ ಇದ್ದಾರೆ.

ADVERTISEMENT

ಇವರ ಜತೆಗೆ, ನಗರ ಕಮಾಂಡೊ ಪಡೆ, ಅಶ್ವರೋಹಿದಳ, 8 ಸಿಎಆರ್ ತುಕಡಿ, 4 ಕೆಎಸ್‌ಆರ್‌ಪಿ ತುಕಡಿ, 3 ಎಎಸ್‌ಸಿ ತಂಡ, 4 ಆಂಬುಲೆನ್ಸ್, 4 ಅಗ್ನಿಶಾಮಕ ದಳ, 2-ಇಂಟರ್‌ಸೆಪ್ಟರ್ ವಾಹನಗಳು, ಮೊಬೈಲ್ ಕಮಾಂಡ್ ಸೆಂಟರ್ ವಾಹನ ಮತ್ತು ಗರುಡ ವಾಹನಗಳನ್ನು ಬಳಕೆ ಮಾಡಲಾಗುತ್ತದೆ.

ಇದರ ಜತೆಗೆ, ಮಫ್ತಿಯಲ್ಲಿ ವಿಶೇಷ ಪೊಲೀಸರ ತಂಡವನ್ನು ರಚಿಸಿದ್ದು, ಇವರು ಅಪರಾಧಿಗಳ ಮೇಲೆ ನಿಗಾ ವಹಿಸಲಿದ್ದಾರೆ.

ಅಕ್ಕಪಕ್ಕದ ಜಿಲ್ಲೆ ಮತ್ತು ರಾಜ್ಯಗಳಿಂದ ಸರಗಳ್ಳರು ಮತ್ತು ಪಿಕ್‍ಪಾಕೆಟ್ ಆರೋಪಿಗಳು ಬರುವ ಸಂಭವವಿರುವುದರಿಂದ ಅಕ್ಕಪಕ್ಕದ ಜಿಲ್ಲೆ ಮತ್ತು ರಾಜ್ಯಗಳಿಂದಲೂ ಸಹ ನುರಿತ ಅಪರಾಧ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ.

ದೇವಸ್ಥಾನದಲ್ಲಿ ಪ್ರತ್ಯೇಕ ಸಹಾಯವಾಣಿ, ವಿದ್ಯುತ್ ದೀಪಗಳ ವ್ಯವಸ್ಥೆ, ಭದ್ರತೆಯ ದೃಷ್ಟಿಯಿಂದ ಸಿ.ಸಿ.ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜತೆಗೆ, ಹೆಲಿಪ್ಯಾಡ್‍ನ ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ವಾಹನಗಳ ನಿಲುಗಡೆಗೆ ಭದ್ರತಾ ವ್ಯವಸ್ಥೆ, ಶೌಚಾಲಯ, ವೈದ್ಯಕೀಯ ಸೌಲಭ್ಯ ಹಾಗೂ ವಿದ್ಯುತ್ ದೀಪಗಳ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.