ADVERTISEMENT

ಮೈಸೂರು: ‘ಚೀನಿ ನಮ್ಮೊಳಗೆ ನುಡಿಯುವ ಹೃದಯ..’

ರಂಗ ಸಂಗೀತ ನಿರ್ದೇಶಕ ‘ಶ್ರೀನಿವಾಸ ಭಟ್‌ ‘ಸಂಗೀತ ನಮನ’; ಗೆಳೆಯರು ಭಾಗಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2023, 5:18 IST
Last Updated 13 ಫೆಬ್ರುವರಿ 2023, 5:18 IST
ಮೈಸೂರಿನ ಕಿರುರಂಗಮಂದಿರದಲ್ಲಿ ಭಾನುವಾರ ನಡೆದ ‘ಶ್ರೀನಿವಾಸ್‌ ಭಟ್‌ (ಚೀನಿ) ಗೀತ ನುಡಿನಮನ’ದಲ್ಲಿ ಭಾವಚಿತ್ರಕ್ಕೆ ಗೋಪಾಲಕೃಷ್ಣ, ಕೃಷ್ಣಕುಮಾರ್‌ ನಾರ್ಣಕಜೆ, ಮೈಮ್‌ ರಮೇಶ್‌, ರಾಮಚಂದ್ರ, ರಘುನಂದನ, ಚಂದ್ರಶೇಖರ ಆಚಾರ್, ಸುರೇಶ್‌ ಬಾಬು, ದೇವಾನಂದ ವರಪ್ರಸಾದ ಪುಷ್ಪನಮನ ಸಲ್ಲಿಸಿದರು
ಮೈಸೂರಿನ ಕಿರುರಂಗಮಂದಿರದಲ್ಲಿ ಭಾನುವಾರ ನಡೆದ ‘ಶ್ರೀನಿವಾಸ್‌ ಭಟ್‌ (ಚೀನಿ) ಗೀತ ನುಡಿನಮನ’ದಲ್ಲಿ ಭಾವಚಿತ್ರಕ್ಕೆ ಗೋಪಾಲಕೃಷ್ಣ, ಕೃಷ್ಣಕುಮಾರ್‌ ನಾರ್ಣಕಜೆ, ಮೈಮ್‌ ರಮೇಶ್‌, ರಾಮಚಂದ್ರ, ರಘುನಂದನ, ಚಂದ್ರಶೇಖರ ಆಚಾರ್, ಸುರೇಶ್‌ ಬಾಬು, ದೇವಾನಂದ ವರಪ್ರಸಾದ ಪುಷ್ಪನಮನ ಸಲ್ಲಿಸಿದರು   

ಮೈಸೂರು: ಅಲ್ಲಿ ಮಾತುಗಳು ಹಾಡಾಗಿದ್ದವು.. ಎದೆಯಲ್ಲಿ ಉಳಿದಿದ್ದ ಹಾಡುಗಳು ನುಡಿಗಳಾದವು..

ನಗರದ ಕಿರು ರಂಗಮಂದಿರದಲ್ಲಿ ಭಾನುವಾರ ರಂಗಾಯಣ ಹಾಗೂ ಹವ್ಯಾಸಿ ರಂಗತಂಡಗಳ ನೂರಾರು ಕಲಾವಿದರು, ರಂಗಕರ್ಮಿಗಳು, ರಂಗ ತಂತ್ರಜ್ಞರು ಸೇರಿದ್ದರು. ಇತ್ತೀಚೆಗೆ ನಿಧನರಾದ ರಂಗ ಸಂಗೀತ ನಿರ್ದೇಶಕ ಶ್ರೀನಿವಾಸ ಭಟ್‌ಗೆ (ಚೀನಿ) ‘ಸಂಗೀತ ನಮನ’ ಸಲ್ಲಿಸಲಾಯಿತು.

‘ಚೀನಿ ರಂಗ ಬಳಗ’ ಆಯೋಜಿಸಿದ್ದ ‘ಚೀನಿ ಮಾಮನಿಗಾಗಿ ಒಂದು ಕ್ಷಣ’– ಗೀತ ನುಡಿ ನಮನ ಸಲ್ಲಿಸುವಾಗ ಕೆಲವರ ಕಣ್ಣಾಲಿಗಳು ತುಂಬಿಬಂದರೆ, ರಂಗಕರ್ಮಿಗಳಾದ ಸಿ.ಬಸವಲಿಂಗಯ್ಯ, ರಘುನಂದನ್, ಪ್ರೊ.ಎಸ್‌.ಆರ್‌.ರಮೇಶ್‌ ಅವರು ನೆನಪುಗಳಿಗೆ ಜಾರಿದರು.

ADVERTISEMENT

ಎಚ್‌.ಜನಾರ್ಧನ್ ಅವರು ‘ಹಯವದನ’ ನಾಟಕದ ‘ಗಜವದನ ಹೇರಂಭ’ ರಂಗಗೀತೆ ಹಾಡಿದರು. ರಂಗಭೀಷ್ಮ ಬಿ.ವಿ.ಕಾರಂತರು ಹಾಗೂ ಅವರ ರಂಗ ಸಂಗೀತ ಮಾದರಿ ಮುಂದುವರಿಸಿದ ‘ಚೀನಿ’ ಅವರ ಒಡನಾಟವನ್ನು ನೆನೆದರು. ‘ಚೀನಿ ಎಲ್ಲೂ ಹೋಗಿಲ್ಲ.. ನಮ್ಮೊಳಗೆ ನುಡಿಯುವ ಹೃದಯ’ ಎಂದರು.

‘ರಿದಂ ಅಡ್ಡ’ ಗುಂಗು: ಚೀನಿ ಅವರು ಆರಂಭಿಸಿದ್ದ ‘ರಿದಂ ಅಡ್ಡ’ ಬ್ಯಾಂಡ್‌ ಪ್ರಸ್ತುತಿ ಎಲ್ಲರನ್ನು ಸೆಳೆಯಿತು. ಶ್ರೀಕಂಠಸ್ವಾಮಿ (ಡ್ರಮ್ಸ್), ಅನುಷ್‌ ಎ.ಶೆಟ್ಟಿ (ತಬಲಾ), ಕೃಷ್ಣಚೈತನ್ಯ (ಚಂಡೆ, ಡೋಲಾಕ್ ಹಾಗೂ ಇತರೆ ತಾಳವಾದ್ಯ) ಹಾಗೂ ಮುನ್ನ (ಗಿಟಾರ್‌) ಪ್ರಸ್ತುತಪಡಿಸಿದ ಲಯ ಲಹರಿಯು ಮೋಡಿ ಮಾಡಿತು.

‘ಜಿಪಿಇಆರ್‌’ ರಂಗತಂಡ, ‘ಚೀನಿ’ ಅವರ ‘ಮೂರುಕಾಸಿನ ಸಂಗೀತ ನಾಟಕ’ದ ‘ಇಲ್ದಿದ್ದರೇನಂತೆ ಪಾದ್ರಿ ಪುರಾಣ’ ರಂಗಗೀತೆ ಪ್ರಸ್ತುತಪಡಿಸಿದರೆ, ‘ನಿರಂತರ’ದ ಕಲಾವಿದರು ‘ಜುಂಜಪ್ಪ’ ನಾಟಕದ ‘ಮೊದಲೇ ನೆನೆದೇವೂ’ ಗೀತೆ ಹಾಡಿದರು. ಮೈಮ್‌ ರಮೇಶ್, ರಂಗ ಸಂಗೀತ ನಿರ್ದೇಶಕ ಚಂದ್ರಶೇಖರ್‌ ಆಚಾರ್‌, ದಿನೇಶ್‌ ಚಮ್ಮಾಳಿಗೆ, ಅರುಣ್‌ ಪಡುವಾರಹಳ್ಳಿ, ಬಿ.ಕೆ.ಕಿರಣ್, ‘ಏಕತಾರಿ’ಯ ದೇವಾನಂದ ವರಪ್ರಸಾದ, ಶಿರಾ ಸೋಮಶೇಖರ್‌ ಸೇರಿದಂತೆ ಹತ್ತಾರು ಕಲಾವಿದರು ಮೇಳದಲ್ಲಿ ಸಾಥ್ ನೀಡಿದರು.

‘ಬಿ.ವಿ.ಕಾರಂತರ ಬಲಗೈಯಂತಿದ್ದ ಅವರು ಎಲ್ಲರ ಗೆಳೆಯರಿಗೂ, ಮಕ್ಕಳಿಗೆ ಅಕ್ಕರೆಯ ‘ಚೀನಿ ಮಾಮ’ ಆಗಿದ್ದರು. ರಾಜ್ಯದ ಯಾವುದೇ ನಾಟಕದಲ್ಲೂ ಚೀನಿ ಅವರ ಪಾತ್ರ ಇದ್ದೇ ಇರುತ್ತಿತ್ತು. ಅವರೊಂದಿಗೆ ಕಾರಂತ ಸಂಗೀತದ ಅಧ್ಯಾಯವೇ ಮುಗಿದಿದೆ’ ಎಂದು ರಂಗಕರ್ಮಿ ಸಿ.ಬಸವಲಿಂಗಯ್ಯ ಬೇಸರ ವ್ಯಕ್ತಪಡಿಸಿದರು.

ವರ್ಚ್ಯವಲ್‌ನಲ್ಲಿ ಮಾತನಾಡಿದ ಸಂಗೀತ ನಿರ್ದೇಶಕ ಗುರುಕಿರಣ್, ‘40 ವರ್ಷದ ಪರಿಚಯ. ಅವರ ಹಾಡು ಕೇಳುವುದೇ ಒಂದು ಸೌಭಾಗ್ಯವಾಗಿತ್ತು’ ಎಂದರು.

ರಂಗಕರ್ಮಿಗಳಾದ ರಾಮೇಶ್ವರಿ ವರ್ಮ, ಪ್ರಸನ್ನ, ಪ್ರಶಾಂತ ಹಿರೇಮಠ, ಶಶಿಕಲಾ, ಸುರೇಶ್‌ ಬಾಬು, ರಾಜಶೇಖರ ಕದಂಬ, ಕೃಷ್ಣಕುಮಾರ್ ನಾರ್ಣಕಜೆ, ಮಹದೇವ್‌, ರಾಮು, ಪ್ರಮೀಳಾ ಬೇಂಗ್ರೆ, ನಂದಿನಿ, ಬಿ.ಎಂ.ರಾಮಚಂದ್ರ, ಸುಗುಣ, ದೀಪಕ್‌ ಮೈಸೂರು, ಗೋಪಾಲಕೃಷ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.