ADVERTISEMENT

ಮೈಸೂರಿನಲ್ಲಿ ಕ್ರಿಸ್‌ಮಸ್‌ ಸಂಭ್ರಮ: ಪ್ರೇಮ, ಕಾರುಣ್ಯದ ‘ತಾರೆ’ಯ ಸ್ವಾಗತಿಸಿದರು..

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 18:12 IST
Last Updated 24 ಡಿಸೆಂಬರ್ 2025, 18:12 IST
<div class="paragraphs"><p>ಮೈಸೂರಿನ ಫಿಲೊಮಿನಾ ಚರ್ಚ್‌ನಲ್ಲಿ ‘ಕ್ರಿಸ್‌ಮಸ್‌ ಈವ್’ ಪ್ರಯುಕ್ತ ಬುಧವಾರ ತಡರಾತ್ರಿ ಬಾಲಯೇಸು ಪ್ರತಿಮೆಯನ್ನು ಧರ್ಮಾಧ್ಯಕ್ಷ ಫ್ರಾನ್ಸಿಸ್‌ ಸೆರಾವೊ ಅವರು ಗೋದಲಿಯಲ್ಲಿ ಇರಿಸಿ ಕ್ರಿಸ್‌ಮಸ್‌ ಹಬ್ಬಕ್ಕೆ ಮುನ್ನುಡಿ ಬರೆದರು.</p></div>

ಮೈಸೂರಿನ ಫಿಲೊಮಿನಾ ಚರ್ಚ್‌ನಲ್ಲಿ ‘ಕ್ರಿಸ್‌ಮಸ್‌ ಈವ್’ ಪ್ರಯುಕ್ತ ಬುಧವಾರ ತಡರಾತ್ರಿ ಬಾಲಯೇಸು ಪ್ರತಿಮೆಯನ್ನು ಧರ್ಮಾಧ್ಯಕ್ಷ ಫ್ರಾನ್ಸಿಸ್‌ ಸೆರಾವೊ ಅವರು ಗೋದಲಿಯಲ್ಲಿ ಇರಿಸಿ ಕ್ರಿಸ್‌ಮಸ್‌ ಹಬ್ಬಕ್ಕೆ ಮುನ್ನುಡಿ ಬರೆದರು.

   

ಪ್ರಜಾವಾಣಿ ಚಿತ್ರಗಳು/ ಅನೂಪ್‌ ರಾಘ ಟಿ.

ಮೈಸೂರು: ಕ್ರಿಸ್‌ಮಸ್‌ ಹಬ್ಬದ ಮುನ್ನಾ ದಿನವಾದ ಬುಧವಾರ ನಗರದೆಲ್ಲೆಡೆ ‘ಕ್ರಿಸ್‌ಮಸ್‌ ಈವ್‌’ ಸಂಭ್ರಮ ಕಳೆಗಟ್ಟಿತ್ತು. ರಾತ್ರಿ 11 ಗಂಟೆಯ ವಿಶೇಷ ಪ್ರಾರ್ಥನೆ ನಂತರ ಚರ್ಚ್‌ಗಳಲ್ಲಿ ನಿರ್ಮಿಸಿದ್ದ ವೈಭವದ ‘ಗೋದಲಿ’ಗಳಲ್ಲಿ ಬಾಲಯೇಸುವನ್ನು ಪಾದ್ರಿಗಳು ಇರಿಸುವುದರೊಂದಿಗೆ ಸಡಗರ ಹೆಚ್ಚಿತು.

ADVERTISEMENT

ಪ್ರೇಮ, ಕಾರುಣ್ಯದ ‘ತಾರೆ’ಯಾದ ಕ್ರಿಸ್ತ ದೇವಲೋಕದಿಂದ ಬಂದು ಗೋದಲಿಯಲ್ಲಿ ಜನಿಸಿದ ಅಪೂರ್ವ ಕ್ಷಣವನ್ನು ಕ್ರೈಸ್ತ ಬಾಂಧವರು ಮರುಸೃಷ್ಟಿಸಿದರು. ಕ್ರಿಸ್ತನನ್ನು ಸ್ವಾಗತಿಸಲು ಚರ್ಚ್‌, ಮನೆಗಳನ್ನು ವಿದ್ಯುತ್‌ ದೀಪಾಲಂಕಾರದಿಂದ ಸಿಂಗರಿಸಿದ್ದರು. ಆಸ್ಪತ್ರೆಗಳು, ಅಂಗಡಿ– ಮಳಿಗೆಗಳು, ಶಾಲೆಗಳಲ್ಲಿ ಕ್ರಿಸ್‌ಮಸ್‌ ಮರ, ಸಾಂತಾಕ್ಲಾಸ್‌, ನಕ್ಷತ್ರಗಳಿಂದ ಅಲಂಕರಿಸಿದ್ದರು.

ಮನೆಗಳಲ್ಲೂ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಮುಂದೆ ನಕ್ಷತ್ರ ದೀಪಗಳನ್ನು ತೂಗು ಹಾಕಿದ್ದರು. ಮುಂಬಾಗಿಲಿಗೆ ಕ್ರಿಸ್‌ಮಸ್‌ ರೀತ್‌ ಅಳವಡಿಸಿದ್ದರು. ವೃತ್ತಾಕಾರದಲ್ಲಿರುವ ಈ ಹಸಿರಿನ ಗುಚ್ಛ ‘ಪ್ರೀತಿಗೆ ಸಾವಿಲ್ಲ’ ಎಂಬ ಸಂದೇಶ ಸಾರಿತು.

ಫಿಲೊಮಿನಾದಲ್ಲಿ ಸಂಭ್ರಮ: ಫಿಲೊಮಿನಾ ಚರ್ಚ್‌ನಲ್ಲಿ ಸಂಜೆಯಿಂದಲೇ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಐಫೆಲ್‌ ಟವರ್ ಪ್ರತಿಕೃತಿ ಕಣ್ತುಂಬಿಕೊಂಡರು. ಮಧ್ಯರಾತ್ರಿ 11ಕ್ಕೆ ದಿವ್ಯ ಬಲಿಪೂಜೆ ನಡೆಯಿತು. ವಿಶೇಷ ಪೂಜೆ, ಪ್ರಾರ್ಥನೆ ಜೊತೆಗೆ ಕ್ಯಾರಲ್‌ ಗೀತೆ ಮೊಳಗಿತು. ರಾತ್ರಿ 11.30ಕ್ಕೆ ಬಾಲಯೇಸುವನ್ನು ಧರ್ಮಾಧ್ಯಕ್ಷ ಫ್ರಾನ್ಸಿಸ್‌ ಸೆರಾವೊ ಅವರು ಗೋದಲಿಯಲ್ಲಿ ಇರಿಸಿದರು. ಸಾಷ್ಟಾಂಗ ನಮಸ್ಕಾರವನ್ನು ಸಲ್ಲಿಸಿ, ಭಕ್ತಿ ಮೆರೆದರು.

ದೇವರು ಮಾನವ ರೂಪ ತಳೆದ ಬಗ್ಗೆ ಇರುವ ಬೈಬಲ್‌ನ ಅಧ್ಯಾಯಗಳ ಪಾರಾಯಣ ಮಾಡಲಾಯಿತು. ಪ್ರೇಮ, ದಯೆ, ಅನುಕಂಪದ ಕ್ರಿಸ್ತನನ್ನು ಧ್ಯಾನಿಸಿದರು. ಕೇಡಿನಿಂದ ರಕ್ಷಣೆ ಮಾಡಿ, ಎಲ್ಲರಿಗೂ ಒಳಿತು ಮಾಡುವಂತೆ ಭಕ್ತರು ಕೋರಿದರು.

‘ಮಾನವೀಯತೆ, ಪ್ರೀತಿ ಸಹಬಾಳ್ವೆ, ಐಕ್ಯತೆಯಿಂದ ಜೀವಿಸಬೇಕು ಎಂಬುದು ಯೇಸು ಸ್ವಾಮಿಯ ಕರೆಯಾಗಿದ್ದು, ಅವರ ಮೇಲೆ ವಿಶ್ವಾಸ ಬೆಳೆಸಲು ಪ್ರಾರ್ಥನೆ ಮಾಡಲಾಯಿತು. ಕ್ರಿಸ್‌ಮಸ್‌ ದಿನವಾದ 25ರಂದು ಬೆಳಿಗ್ಗೆ 5ರಿಂದ ಸಂಜೆವರೆಗೆ ಪ್ರಾರ್ಥನಾ ಸಭೆಗಳು ನಡೆಯಲಿವೆ. 5ಕ್ಕೆ ತಮಿಳು, 6ಕ್ಕೆ ಕನ್ನಡ ಮತ್ತು 7ರಿಂದ ಇಂಗ್ಲಿಷ್‌ನಲ್ಲಿ ಸಭೆಗಳು ನಡೆಯಲಿವೆ. ದಿನವಿಡೀ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ’ ಎಂದು ಫಿಲೋಮಿನಾ ಚರ್ಚ್‌ ಪಾದ್ರಿ ಅಲೆಕ್ಸ್‌ ಪ್ರಶಾಂತ್ ಸಿಕ್ವೆರಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಖಾದ್ಯ, ಕೇಕ್‌ ತಯಾರಿ: ಕ್ರಿಸ್‌ಮಸ್‌ ಭೋಜನದ ಖಾದ್ಯಗಳಾದ ರೋಸ್‌ ಕೇಕ್‌, ಕಜ್ಜಾಯ, ಕಲ್ಕಲ, ಚಕ್ಲಿ ಸೇರಿದಂತೆ ಮುಂತಾದ ಸಿಹಿ ತಿನಿಸು ತಯಾರಿಸಲಾಗಿತ್ತು. ಕೇರಳ, ತಮಿಳುನಾಡು, ಗೋವಾ ಹಾಗೂ ಈಶಾನ್ಯ ಭಾರತ ರಾಜ್ಯಗಳಿಂದ ಮೈಸೂರಿಗೆ ಬಂದು

ನೆಲೆಸಿರುವ ಕ್ರೈಸ್ತರು ತಮ್ಮ ಊರಿನ ಸಾಂಪ್ರದಾಯಿಕ ಖಾದ್ಯ ಸಿದ್ಧಪಡಿಸಿ, ಬಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.