ADVERTISEMENT

ಮೈಸೂರಿನಲ್ಲಿ ಕ್ರಿಸ್‌ಮಸ್‌: ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ, ಶುಭಾಶಯ ವಿನಿಮಯ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 3:17 IST
Last Updated 26 ಡಿಸೆಂಬರ್ 2025, 3:17 IST
ಮೈಸೂರಿನ ಸೇಂಟ್‌ ಫಿಲೊಮಿನಾ ಚರ್ಚ್‌ನಲ್ಲಿ ಕ್ರಿಸ್‌ಮಸ್‌ ಪ್ರಯುಕ್ತ ಗುರುವಾರ ನಡೆದ ವಿಶೇಷ ಪ್ರಾರ್ಥನಾ ಸಭೆ ನಂತರ ಯೇಸ್‌ಕ್ರಿಸ್ತನ ಮೂರ್ತಿಗೆ ನಮಸ್ಕರಿಸಿದ ಕ್ರೈಸ್ತರು ಆಶೀರ್ವಾದ ಪಡೆದರು  ಪ್ರಜಾವಾಣಿ ಚಿತ್ರಗಳು: ಅನೂಪ್‌ ರಾಘ ಟಿ. 
ಮೈಸೂರಿನ ಸೇಂಟ್‌ ಫಿಲೊಮಿನಾ ಚರ್ಚ್‌ನಲ್ಲಿ ಕ್ರಿಸ್‌ಮಸ್‌ ಪ್ರಯುಕ್ತ ಗುರುವಾರ ನಡೆದ ವಿಶೇಷ ಪ್ರಾರ್ಥನಾ ಸಭೆ ನಂತರ ಯೇಸ್‌ಕ್ರಿಸ್ತನ ಮೂರ್ತಿಗೆ ನಮಸ್ಕರಿಸಿದ ಕ್ರೈಸ್ತರು ಆಶೀರ್ವಾದ ಪಡೆದರು  ಪ್ರಜಾವಾಣಿ ಚಿತ್ರಗಳು: ಅನೂಪ್‌ ರಾಘ ಟಿ.    

ಮೈಸೂರು: ನಗರದೆಲ್ಲೆಡೆ ಗುರುವಾರ ಕ್ರಿಸ್‌ಮಸ್‌ ಸಂಭ್ರಮ ಮನೆಮಾಡಿತ್ತು. ಸೇಂಟ್‌ ಫಿಲೊಮಿನಾ, ಹಾರ್ಡ್ವಿಕ್, ವೆಸ್ಲಿ ಸೇರಿದಂತೆ ಚರ್ಚ್‌ಗಳಲ್ಲಿ ನಡೆದ ವಿಶೇಷ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡು ಯೇಸುಕ್ರಿಸ್ತನನ್ನು ಆರಾಧಿಸಿದರು. ಶುಭಾಶಯ ಹೇಳಿ ಒಳಿತಾಗಲೆಂದು ಪರಸ್ಪರ ಹಾರೈಸಿಕೊಂಡರು. 

ಕ್ರೈಸ್ತ ಬಾಂಧವರು ಹೊಸ ಬಟ್ಟೆ ತೊಟ್ಟು, ಮಕ್ಕಳೊಂದಿಗೆ ಚರ್ಚ್‌ನ ಅಂಗಳಕ್ಕೆ ಬಂದಿದ್ದರು. ಬುಧವಾರ ತಡರಾತ್ರಿ ‘ಕ್ರಿಸ್‌ಮಸ್‌ ಈವ್‌’ನ ಬಲಿಪೂಜೆಯಲ್ಲಿ ‍ಪಾಲ್ಗೊಂಡಿದ್ದ ಭಕ್ತರು, ಮುಂಜಾನೆಯಿಂದಲೇ ಚರ್ಚ್‌ಗಳಿಗೆ ಆಗಮಿಸಿದರು. ಪ್ರಾರ್ಥನೆ ಸಲ್ಲಿಸಿ ಕಾಣಿಕೆ ಒಪ್ಪಿಸಿದರು.

ಫಿಲೊಮಿನಾ, ಸಾಡೇ, ವೆಸ್ಲಿ, ಬಾರ್ತೊಲೋಮಿಯಾ, ಸಿಎಸ್‌ಐ ಹಾರ್ಡ್ವಿಕ್, ಆರ್‌.ಎಸ್‌.ನಾಯ್ಡು ನಗರದ ಇನ್‌ಫೆಂಟ್‌ ಜೀಸಸ್‌, ಯಾದವಗಿರಿಯ ಸೇಕ್ರೆಡ್‌ ಹಾರ್ಟ್‌, ಜಯಲಕ್ಷ್ಮಿಪುರಂನ ಸೇಂಟ್‌ ಜೋಸೆಫ್‌, ವಿಶ್ವೇಶ್ವರ ನಗರದ ಸೇಂಟ್‌ ಥಾಮಸ್‌, ಸೇಂಟ್‌ ಮೇರಿಸ್‌ ಸೇರಿದಂತೆ ನಗರದಲ್ಲಿರುವ 40ಕ್ಕೂ ಹೆಚ್ಚು ಚರ್ಚ್‌ಗಳಲ್ಲಿ ವಿಶೇಷ ಪಾರ್ಥನಾ ಸಭೆಗಳು ನಡೆದವು. 

ADVERTISEMENT

ಸೇಂಟ್‌ ಫಿಲೊಮಿನಾ ಚರ್ಚ್‌ನಲ್ಲಿ ನಸುಕಿನ 5ರಿಂದಲೇ ಪ್ರಾರ್ಥನೆಗಳು ಆರಂಭವಾದವು. ಮೊದಲು ತಮಿಳು, 6ಕ್ಕೆ ಕನ್ನಡ ಮತ್ತು 7ರಿಂದ ಇಂಗ್ಲಿಷ್‌ನಲ್ಲಿ ಸಭೆಗಳು ನಡೆದವು. ಚರ್ಚ್‌ನ ಮೈಸೂರು ಧರ್ಮಾಧ್ಯಕ್ಷ ಫ್ರಾನ್ಸಿಸ್‌ ಸೆರಾವಿ ಅವರು ಕ್ರಿಸ್‌ಮಸ್ ಸಂದೇಶ ನೀಡಿ, ‘ವಿಶ್ವ ಶಾಂತಿ, ನೆಮ್ಮದಿಯಿಂದ ಬಾಳುವಂತಾಗಲಿ’ ಎಂದು ಪ್ರಾರ್ಥಿಸಿದರು. ಪಾದ್ರಿ ಅಲೆಕ್ಸ್ ಪ್ರಶಾಂತ್ ಸಿಕ್ವೆರಾ ಸಭೆಗಳನ್ನು ನಡೆಸಿದರು. 

ಚರ್ಚ್‌ ಆವರಣಗಳಲ್ಲಿ ಎಲ್‌ಇಡಿ ಪರದೆ ಅಳವಡಿಸಿ ಪ್ರಾರ್ಥನೆಗೆ ಅವಕಾಶ ಮಾಡಲಾಗಿತ್ತು. ಸೇಂಟ್‌ ಜೋಸೆಫ್, ಸೇಂಟ್‌ ಮೇರಿ ಪ್ರತಿಮೆ ಎದುರು ಮೋಂಬತ್ತಿಗಳನ್ನು ಹಚ್ಚಿ ಪ್ರಾರ್ಥನೆ ಸಲ್ಲಿಸಿದರು. ಚರ್ಚ್‌ಗಳಿಗೆ ಬಂದ ಉಡುಗೊರೆಗಳನ್ನು ‘ಆಶೀರ್ವಾದ’ವೆಂದು ಕಾಣಿಕೆ ನೀಡಿ ಖರೀದಿಸಿದರು. 

ಮಕ್ಕಳ ಸಂಭ್ರಮ:

ಚಿಣ್ಣರು ಚರ್ಚ್‌ಗಳ ಆವರಣದಲ್ಲಿ ಸಿಂಗರಿಸಿದ್ದ ಗೋದಲಿಗಳು, ಬೈಬಲ್‌ ಕಥಾಸಾರವಿದ್ದ ದೃಶ್ಯಗಳನ್ನು ನೋಡಿ ಸಂಭ್ರಮ ಪಟ್ಟರು. 

ಮನೆಗಳಲ್ಲೂ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಉಡುಗೊರೆಗಳನ್ನು ಸ್ನೇಹಿತರು, ಸಂಬಂಧಿಕರು, ಬಡವರಿಗೆ ನೀಡಿದರು. ಸಂಜೆ 6 ಗಂಟೆಗೆ ಪ್ರಾರ್ಥನೆ ಬಳಿಕ ಕ್ರೈಸ್ತರು ತಮ್ಮ ಗೆಳೆಯರು, ನೆರೆಮನೆಯವರು, ಸಂಬಂಧಿಕರಿಗೆ ಹಬ್ಬದ ಶುಭಾಶಯ ಕೋರಿದರು. ಕ್ರಿಸ್‌ಮಸ್‌ ಭೋಜನದ ಖಾದ್ಯಗಳಾದ ರೋಸ್‌ ಕೇಕ್‌, ಕಜ್ಜಾಯ, ಕಲ್ಕಲ, ಚಕ್ಲಿ ಸೇರಿದಂತೆ ಹಲವು ಸಿಹಿ ತಿನಿಸುಗಳನ್ನು ಹಂಚಿದರು. 

ಕೇರಳ, ತಮಿಳುನಾಡು, ಗೋವಾ ಹಾಗೂ ಈಶಾನ್ಯ ಭಾರತ ರಾಜ್ಯಗಳಿಂದ ಮೈಸೂರಿಗೆ ಬಂದು
ನೆಲೆಸಿರುವ ಕ್ರೈಸ್ತರು ಸಾಂಪ್ರದಾಯಿಕ ಖಾದ್ಯ ಸಿದ್ಧಪಡಿಸಿ, ಬಂಧುಗಳು ಹಾಗೂ ಸ್ನೇಹಿತರಿಗೆ ಬಡಿಸಿ ಸಂತಸಪಟ್ಟರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.