
ಮೈಸೂರು: ಸ್ವಚ್ಛ ಭಾರತ ಅಭಿಯಾನ 2.0 ಹಾಗೂ ಸ್ವಚ್ಛ ಸರ್ವೇಕ್ಷಣಾ 2025-26ರ ಅಂಗವಾಗಿ ಇಲ್ಲಿನ ಮಹಾನಗರ ಪಾಲಿಕೆಯಿಂದ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಎರಡು ಸ್ಪರ್ಧೆಗಳನ್ನು ಹಮ್ಮಿಕೊಂಡಿದೆ.
‘ಸ್ವಚ್ಛತೆಯಲ್ಲಿ ಸಾರ್ವಜನಿಕರ ಸಹಭಾಗಿತ್ವ’ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಪೋಸ್ಟರ್ ಹಾಗೂ ತ್ಯಾಜ್ಯದಿಂದ ಕಲಾಕೃತಿ ತಯಾರಿಸುವ ಸ್ಪರ್ಧೆ ನಡೆಯಲಿದೆ. ಯುವ ಪೀಳಿಗೆಯಲ್ಲಿ ಪರಿಸರ ಸಂರಕ್ಷಣೆಯ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಜ.22ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಪಾಲಿಕೆಯ ಮುಖ್ಯ ಕಚೇರಿ ಆವರಣದಲ್ಲಿ ಸ್ಪರ್ಧೆ ನಡೆಯಲಿದೆ. ಪೋಸ್ಟರ್ ಸ್ಥಳದಲ್ಲೇ ರಚಿಸಬೇಕಾಗಿದ್ದು, ಕಸದಿಂದ ನಿರ್ಮಾಣವಾದ ಕಲಾಕೃತಿಯನ್ನು ಮೊದಲೇ ಸಿದ್ದಪಡಿಸಿಕೊಂಡು ತಂದು ಪ್ರದರ್ಶಿಸಬಹುದಾಗಿದೆ. ಪ್ರತಿ ಸ್ಪರ್ಧೆಯಲ್ಲೂ ಪ್ರಥಮ ಸ್ಥಾನ ಗಳಿಸುವವರಿಗೆ ₹5,000, ದ್ವಿತೀಯ ₹ 3,000 ಹಾಗೂ ತೃತೀಯ ಸ್ಥಾನಕ್ಕೆ ₹ 2,000 ಬಹುಮಾನ ನೀಡಲಾಗುವುದು. ಅಂದೇ ಬಹುಮಾನಗಳನ್ನು ವಿತರಿಸಲಾಗುವುದು.
ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗೆ ಮೊ.ಸಂ. 94498 41195/ 94498 41196 ಸಂಪರ್ಕಿಸಬಹುದಾಗಿದೆ ಎಂದು ಪಾಲಿಕೆಯ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.