ಮೈಸೂರು: ‘ಕಾಂಗ್ರೆಸ್ ಪಕ್ಷಕ್ಕೆ ಮಾನ-ಮರ್ಯಾದೆ ಇದ್ದರೆ ಗೂಂಡಾಗಿರಿ ಮಾಡಿದ ವಿಧಾನ ಪರಿಷತ್ ಸದಸ್ಯರನ್ನು ಅಮಾನತು ಮಾಡಲಿ’ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಬುಧವಾರ ಇಲ್ಲಿ ಒತ್ತಾಯಿಸಿದರು.
‘ಸಭಾಪತಿ ಖುರ್ಚಿಗೆ ಅದರದ್ದೇ ಆದ ಗೌರವವಿದೆ. ಆದರೆ, ಮೊದಲ ಬಾರಿ ಸದಸ್ಯರಾದವರೂ ಆ ಖುರ್ಚಿಯಲ್ಲಿ ಕೂರುತ್ತಾರೆಂದರೆ ಏನರ್ಥ? ಸಭಾಪತಿ ಮೇಲೆ ಅವಿಶ್ವಾಸ ನಿರ್ಣಯವನ್ನು ನಮ್ಮ ಪಕ್ಷದ ಸದಸ್ಯರು ಮಂಡಿಸಿರುವುದು ಸಿದ್ದರಾಮಯ್ಯ ಅವರಿಗೆ ಗೊತ್ತಿರಲಿಲ್ಲವೇ? ಎಲ್ಲರಿಗೂ ನೀತಿ, ಕಾನೂನು ಹೇಳುವ ಅವರು ತಮ್ಮ ಪಕ್ಷದ ನಾಯರಿಗೆ ಮೊದಲು ಬುದ್ಧಿ ಹೇಳಲಿ’ ಎಂದರು.
'ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿದ್ದು, ಕಾಂಗ್ರೆಸ್ಗೆ ಸಂಖ್ಯಾಬಲವಿಲ್ಲ. ಇಂತಹ ಸಂದರ್ಭದಲ್ಲಿ ಸಭಾಪತಿ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟು ಚರ್ಚೆಗೆ ಅವಕಾಶ ಕಲ್ಪಿಸಬೇಕಿತ್ತು. ಏಕಾಏಕಿ ಅನಿರ್ದಿಷ್ಟಾವಧಿಗೆ ಕಲಾಪವನ್ನು ಮುಂದೂಡಿದ ನಿರ್ಧಾರ ಸರಿಯಲ್ಲ’ ಎಂದು ವಾಗ್ದಾಳಿ ನಡೆಸಿದರು.
ಇದೊಂದು ಸಂಚು: ‘ಇದು ಕಾಂಗ್ರೆಸ್ನವರ ಪೂರ್ವನಿಯೋಜಿತ ಸಂಚು. ಪಕ್ಷದ ಸಭೆಯಲ್ಲಿಯೇ ಗೂಂಡಾಗಿರಿ ಮಾಡುವ ಹಾಗೂ ದಾಂದಲೆ ನಡೆಸುವ ಬಗ್ಗೆ ತೀರ್ಮಾನಿಸಲಾಗಿದೆ. ಉಪಸಭಾಪತಿಯನ್ನು ಬಲತ್ಕಾರವಾಗಿ ಖುರ್ಚಿಯಿಂದ ಎಳೆದಾಡಿದ್ದು ಖಂಡನೀಯ. ಇದು ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸುತ್ತದೆ. ಅಸಾಂವಿಧಾನಿಕವಾಗಿ ನಡೆದುಕೊಂಡಿದ್ದಾರೆ’ ಎಂದು ಟೀಕಿಸಿದರು.
ವಿಧಾನ ಪರಿಷತ್ ರದ್ದುಪಡಿಸುವ ತಂತ್ರಗಾರಿಕೆ ರಾಜ್ಯ ಸರ್ಕಾರಕ್ಕೆ ಇದೆಯೇ ಎಂಬ ಪ್ರಶ್ನೆಗೆ, ‘ವಿಧಾನ ಪರಿಷತ್ ರದ್ದುಪಡಿಸುವ ಪ್ರಶ್ನೆಯೇ ಇಲ್ಲ. ಅಂತಹ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಆದರೆ, ಇದು ಎಲ್ಲರೂ ತಲೆ ತಗ್ಗಿಸುವ ಘಟನೆ’ ಎಂದು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.