ADVERTISEMENT

ಹುಣಸೂರು| ಕಾರ್ಯಕರ್ತರನ್ನು ಗೌರವದಿಂದ ನಡೆಸಿಕೊಳ್ಳಿ: ಜಿ.ಸಿ.ಚಂದ್ರಶೇಖರ್‌

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 7:07 IST
Last Updated 13 ಅಕ್ಟೋಬರ್ 2025, 7:07 IST
ಹುಣಸೂರು ನಗರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ನೂತನ ಪದಾಧಿಕಾರಿಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್‌, ಮುಖಂಡ ಎಚ್.ಪಿ. ಮಂಜುನಾಥ್‌, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್‌, ಎಚ್.ಎನ್.‌ ಪ್ರೇಮಕುಮಾರ್‌ ಅಧಿಕಾರ ಹಸ್ತಾಂತರಿಸಿದರು
ಹುಣಸೂರು ನಗರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ನೂತನ ಪದಾಧಿಕಾರಿಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್‌, ಮುಖಂಡ ಎಚ್.ಪಿ. ಮಂಜುನಾಥ್‌, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್‌, ಎಚ್.ಎನ್.‌ ಪ್ರೇಮಕುಮಾರ್‌ ಅಧಿಕಾರ ಹಸ್ತಾಂತರಿಸಿದರು   

ಹುಣಸೂರು: ‘ಕಾಂಗ್ರೆಸ್‌ ಪಕ್ಷ ಕಾರ್ಯಕರ್ತರ ಶ್ರಮದಿಂದ ಬೆಳೆದು ಅಧಿಕಾರ ಹಿಡಿದಿದೆ, ಇದನ್ನು ನಾಯಕರು ಅರ್ಥ ಮಾಡಿಕೊಳ್ಳಬೇಕಾದ ಅನಿವಾರ್ಯವಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್‌ ಹೇಳಿದರು.

ನಗರದಲ್ಲಿ ನಡೆದ ಪಕ್ಷದ ತಾಲ್ಲೂಕು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು.

‘ಪಕ್ಷದ ಅಭಿವೃದ್ಧಿಗೆ ಅಡಿಪಾಯ ಕಾರ್ಯಕರ್ತರು, ಯಾವುದೇ ರಾಜಕೀಯ ಪಕ್ಷ ಕಾರ್ಯಕರ್ತರ ಬಲವಿಲ್ಲದೆ ಅಧಿಕಾರದ ಗದ್ದುಗೆ ಏರಲು ಅಸಾಧ್ಯ. ಈ ಸತ್ಯವನ್ನು ಪ್ರತಿಯೊಬ್ಬ ನಾಯಕರು ಅರ್ಥ ಮಾಡಿಕೊಂಡು ಕಾರ್ಯಕರ್ತರನ್ನು ಗೌರವದಿಂದ ನಡೆಸಿಕೊಳ್ಳಬೇಕು. ಕಾಂಗ್ರೆಸ್‌ ದೇಶದಲ್ಲೇ ಜಾತ್ಯತೀತ ಪಕ್ಷವಾಗಿ ಸ್ವಾತಂತ್ರ್ಯ ಪೂರ್ವದಿಂದ ಈವರೆಗೂ ತನ್ನ ಸಿದ್ಧಾಂತದ ತಳಹದಿಯಲ್ಲಿ ಕೆಲಸ ನಿರ್ವಹಿಸುತ್ತಿದೆ. ಅಧಿಕಾರ ಹಂಚಿಕೆ ಜಾತ್ಯತೀತವಾಗಿ ಹಂಚುವ ಸಂಪ್ರದಾಯ ಮುಂದುವರಿಸಿದೆ’ ಎಂದರು.

ADVERTISEMENT

‘ಕಾರ್ಯಕರ್ತರು ಕೆಲವು ಸಮಯ ಹೇಳಿಕೆ ಮಾತಿಗೆ ಒತ್ತು ನೀಡಿ ಸ್ವಪಕ್ಷವನ್ನೇ ಸೋಲಿಸಿದ ಪ್ರಸಂಗಗಳು ಇವೆ. ಹೊರಗಿನವರ ಮಾತಿಗೆ ಆದ್ಯತೆ ನೀಡದೆ ಪಕ್ಷಕ್ಕೆ ಶಕ್ತಿ ತುಂಬಿಸುವಲ್ಲಿ ಹೆಚ್ಚು ಒತ್ತು ನೀಡಬೇಕು. ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಅಧಿಕಾರ ಕಳೆದುಕೊಳ್ಳಲು ಈ ಘಟನೆಯೂ ಒಂದಾಗಿದೆ’ ಎಂದು ವಿಷಾದಿಸಿದರು.

‘ಮುಂದಿನ ದಿನದಲ್ಲಿ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಎದುರಾಗುತ್ತಿದ್ದು, ಮತದಾರರಿಗೆ ಕಾಂಗ್ರೆಸ್‌ ನೀಡಿದ ಭರವಸೆ ಈಡೇರಿಸಿರುವ ಬಗ್ಗೆ ಮನದಟ್ಟು ಮಾಡಬೇಕಾಗಿದೆ. ಬಿಜೆಪಿ ಮತ್ತು ಜೆಡಿಎಸ್‌ ಈಗಾಗಲೇ ಸ್ಥಳೀಯ ಚುನಾವಣೆ ಸಂಬಂಧ ಕಾರ್ಯೋನ್ಮುಖವಾಗಿದೆ’ ಎಂದರು.

ಮಾಜಿ ಸಂಸದ ಉಗ್ರಪ್ಪ ಮಾತನಾಡಿ, ‘ರಾಜ್ಯದಲ್ಲಿ ತೀರ ಹಿಂದುಳಿದ ಧೋಬಿ ಮತ್ತು ನಯನ ಕ್ಷತ್ರೀಯ ಸಮಾಜದನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಕೇಂದ್ರ ಸರ್ಕಾರ ಸೇರಿಸಿ ಸಾಮಾಜಿಕ ಮೀಸಲಾತಿ ಕಲ್ಪಿಸುವ ಎದೆಗಾರಿಕೆ ತೋರಿಸಬೇಕಾಗಿದೆ. ದೇಶದ 21 ರಾಜ್ಯಗಳಲ್ಲಿ ಈ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಸಂಸದ ಯದುವೀರ್‌ ಈ ಸಂಬಂಧ ಸಂಸತ್‌ನಲ್ಲಿ ಧ್ವನಿ ಎತ್ತಬೇಕಾಗಿದೆ’ ಎಂದರು.

ಮಾಜಿ ಶಾಸಕ ಎಚ್.ಪಿ.ಮಂಜುನಾಥ್‌ ಪ್ರಾಸ್ತಾವಿಕ ಮಾತನಾಡಿ, ‘ತಾಲ್ಲೂಕು ಪದಾಧಿಕಾರಿ ಹುದ್ದೆಗೆ ಸರ್ವ ಸಮಾಜವನ್ನು ಗುರುತಿಸಿ ಅಧಿಕಾರ ಹಂಚಿಕೆ ಮಾಡಲಾಗಿದ್ದು, ಈ ನಡುವೆಯೂ ಅಸಮಾಧಾನ ಇರುವುದು ತಿಳಿದಿದೆ. ಕ್ಷೇತ್ರದಲ್ಲಿ ಅಧಿಕಾರ ಇಲ್ಲದಿದ್ದರೂ ಪಕ್ಷ ಸಂಘಟನೆ ಹಾಗೂ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ತರುವಲ್ಲಿ ಇಂದಿಗೂ ಶ್ರಮಿಸುತ್ತಿದ್ದೇನೆ’ ಎಂದು ಹೇಳಿದರು.

ನೂತನ ಪದಾಧಿಕಾರಿಗಳು: ದೇವರಾಜ್ (ತಾಲ್ಲೂಕು ಘಟಕದ ಕಾರ್ಯಾಧ್ಯಕ್ಷ), ರವಿಪ್ರಸನ್ನ ಕುಮಾರ್‌ (ನಗರಾಧ್ಯಕ್ಷ), ಪ್ರೇಮಕುಮಾರ್‌ (ಬಿಳಿಕೆರೆ ಬ್ಲಾಕ್‌ ಅಧ್ಯಕ್ಷ), ಬಾಲಸುಂದರ್‌ (ಹುಣಸೂರು ಗ್ರಾಮಾಂತರ ಅಧ್ಯಕ್ಷ) ಅಧಿಕಾರ ಸ್ವೀಕರಿಸಿದರು.

ವೇದಿಕೆಯಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್‌, ಜಿಲ್ಲಾಧ್ಯಕ್ಷ ವಿಜಯಕುಮಾರ್‌, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ ಖಾನ್‌, ಎಚ್‌.ಎನ್.‌ ಪ್ರೇಮಕುಮಾರ್‌, ರಾಮಪ್ಪ ಭೋವಿ, ಗಣೇಶ್‌, ನಾರಾಯಣ್‌, ಪುಟ್ಟರಾಜ್‌, ರಮೇಶ್‌, ಅಣ್ಣಯ್ಯ ನಾಯಕ, ಡಿಕೆ ಕುನ್ನೇಗೌಡ, ಚಂದ್ರನ್‌ ಗೌಡ, ಬಿ.ಎನ್.‌ ಜಯರಾಂ. ಸುನಿತಾ ಜಯರಾಮೇಗೌಡ, ಮುಖಂಡರು ಇದ್ದರು. 

ಶೀಘ್ರದಲ್ಲೇ ರಸಗೊಬ್ಬರ ಪೂರೈಕೆ

‘ಕಾಂಗ್ರೆಸ್‌ ನೇತೃತ್ವದಲ್ಲಿ ಸ್ವಾತಂತ್ರ್ಯ ಪಡೆದ ಭಾರತ ಸರ್ವರ ಸರ್ವತೋಮುಖ ಅಭಿವೃದ್ಧಿಗೆ ಡಾ.ಬಿ.ಆರ್. ಅಂಬೇಡ್ಕರ್‌ ನೇತೃತ್ವದಲ್ಲಿ ಸಂವಿಧಾನ ರಚಿಸಿ ರಾಷ್ಟ್ರದ ಎಲ್ಲಾ ವರ್ಗವನ್ನು ಸಮನಾಗಿ ಕಂಡ ಏಕೈಕ ಪಕ್ಷ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು. ‘ಕೇಂದ್ರದ ಆಡಳಿತಾರೂಢ ಪಕ್ಷ ತಳಸಮುದಾಯ ಮತ್ತು ಅಲ್ಪಸಂಖ್ಯಾತರನ್ನು ತುಳಿಯುವ ಗುರಿ ಹೊಂದಿದೆ. ರಾಜ್ಯ ಸರ್ಕಾರ ಯೂರಿಯಾ ರಸಗೊಬ್ಬರ ಸರಬರಾಜಿಗೆ ಎಲ್ಲಾ ಕ್ರಮ ಕೈಗೊಂಡಿದ್ದು ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕಿದೆ. ಅತಿ ಶೀಘ್ರದಲ್ಲೇ ಬೇಡಿಕೆ ಪೂರೈಸಲಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.