ಮೈಸೂರು: ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ತಕ್ಷಣ ವರ್ಗಾವಣೆ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡಿ, ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ನಂಜನಗೂಡು ತಾಲ್ಲೂಕು ಕಚೇರಿಯ ‘ಡಿ’ ಗ್ರೂಪ್ ನೌಕರರಾದ ಮಧು ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ತನ್ನನ್ನು ಒಂದೂವರೆ ವರ್ಷದಿಂದ 5 ಬಾರಿ ವರ್ಗಾವಣೆ ಮಾಡಲಾಗಿದೆ. ಸದ್ಯ, ನಂಜನಗೂಡಿಗೆ ವರ್ಗಾವಣೆ ಮಾಡಿರುವುದು ಸರಿಯಲ್ಲ. ಜಿಲ್ಲಾಧಿಕಾರಿ ಕಚೇರಿ ಮುಂದೆಯೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದರು. ಇವರಿಗೆ ನಾಲ್ವರು ವೈದ್ಯರನ್ನು ಕರೆಸಿ ಕೌನ್ಸೆಲಿಂಗ್ ಮಾಡಿಸಲಾಯಿತು. ಆದರೆ, ಮತ್ತೆ ಕಚೇರಿಗೆ ನುಗ್ಗಿ ಕಡತಗಳನ್ನು ಎಸೆದು ಕರ್ತವ್ಯಕ್ಕೆ ಅಡ್ಡಿಪಡಿಸಿದರು. ಈ ಕುರಿತು ಶಿರಸ್ತೆದಾರ್ ಜಾನ್ಸನ್ ಅವರು ದೂರು ನೀಡಿದರು. ರಾತ್ರಿ 10 ಗಂಟೆಯವರೆಗೂ ಮನವೊಲಿಸುವ ಪ್ರಯತ್ನಗಳೂ ನಿಷ್ಪಲವಾದವು. ಅನಿವಾರ್ಯವಾಗಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 353, 448 ಹಾಗೂ 426ರ ಅನ್ವಯ ಪ್ರಕರಣ ಲಕ್ಷ್ಮೀಪುರಂ ಠಾಣೆಯಲ್ಲಿ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.