ADVERTISEMENT

Dasara Elephant Procession | ಅರಮನೆಗೆ 14 ಆನೆಗಳ ಪಯಣ

ಆ.4ರ ದಸರಾ ಗಜಪಯಣಕ್ಕೆ ವೀರನಹೊಸಹಳ್ಳಿಯಲ್ಲಿ ಸಕಲ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 7:45 IST
Last Updated 1 ಆಗಸ್ಟ್ 2025, 7:45 IST
ದಸರಾ ಗಜಪಯಣಕ್ಕೆ ವೀರನಹೊಸಹಳ್ಳಿ ಬಳಿ ನಿರ್ಮಾಣವಾಗುತ್ತಿರುವ ಬೃಹತ್‌ ವೇದಿಕೆ 
ದಸರಾ ಗಜಪಯಣಕ್ಕೆ ವೀರನಹೊಸಹಳ್ಳಿ ಬಳಿ ನಿರ್ಮಾಣವಾಗುತ್ತಿರುವ ಬೃಹತ್‌ ವೇದಿಕೆ    

ಹುಣಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆಗಸ್ಟ್‌ 4ರಂದು ನಡೆಯಲಿರುವ ಗಜಪಯಣ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆದಿದ್ದು, ಅಂದು 14 ಆನೆಗಳು ಮೈಸೂರಿನ ಅರಮನೆಗೆ ತೆರಳಲಿದೆ ಎಂದು ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭುಗೌಡ ಐ.ಬಿ. ತಿಳಿಸಿದರು

ನಾಗರಹೊಳೆ ವೀರನಹೊಸಹಳ್ಳಿ ಗ್ರಾಮದ ಬಳಿ ದಸರಾ ಗಜಪಯಣಕ್ಕೆ ಸಕಲ ಸಿದ್ಧತೆ ವೀಕ್ಷಿಸಿ ‘ಪ್ರಜಾವಾಣಿ’ ಜತೆ ಅವರು ಮಾತನಾಡಿದರು. ‘ಮೈಸೂರು ದಸರಾ ಕಾರ್ಯಕ್ರಮದಲ್ಲಿ ಗಜಪಯಣ ಪ್ರಮುಖ ಘಟ್ಟವಾಗಿದೆ. ವೀರನಹೊಸಹಳ್ಳಿ ವಲಯದಂಚಿನಲ್ಲಿ ಬೃಹತ್‌ ವೇದಿಕೆ ನಿರ್ಮಾಣ ಪ್ರಗತಿಯಲ್ಲಿದ್ದು, ಗಜಪಯಣ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳಗೊಂಡಂತೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಸಚಿವ ಸಂಪುಟ ಹಾಗೂ ಗಣ್ಯರು, ಸ್ಥಳಿಯರು ಸೇರಿದಂತೆ ಅಂದಾಜು 4 ರಿಂದ 5 ಸಾವಿರ ಭಾಗವಹಿಸುವ ಅಂದಾಜಿದೆ. ಸರ್ವರೂ ಕುಳಿತು ಕಾರ್ಯಕ್ರಮ ವೀಕ್ಷಿಸಲು ಕ್ರಮ ವಹಿಸಲಾಗಿದೆ’ ಎಂದು ತಿಳಿಸಿದರು.

‘ವೀರನಹೊಸಹಳ್ಳಿ ವಲಯದ ನಾಗರಹೊಳೆ ಪ್ರವೇಶದ್ವಾರದ ಬಳಿ ಎಂದಿನಂತೆ ಗಜಪಯಣಕ್ಕೆ ಗಣ್ಯರು ಚಾಲನೆ ನೀಡಿದ ಬಳಿಕ ಆನೆಗಳನ್ನು ಸುರಕ್ಷಿತವಾಗಿ ಮೈಸೂರಿಗೆ ಲಾರಿಗಳಲ್ಲಿ ಕರೆತರಲಾಗುವುದು. ಆನೆ ಸಾಗಿಸುವ ಸಂಬಂಧ ಇಲಾಖೆ ಟೆಂಡರ್‌ ಕರೆದಿದ್ದು, ಆ. 1 ರಂದು ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ’ ಎಂದರು.

ADVERTISEMENT

‘ಪೂಜಾ ಕೈಂಕರ್ಯವನ್ನು ಮೈಸೂರಿನ ಪುರೋಹಿತ ಪ್ರಹ್ಲಾದ್‌ ಮತ್ತು ತಂಡದವರು ನೆರವೇರಿಸುವರು. ಆನೆಯೊಂದಿಗೆ ಮೈಸೂರಿಗೆ ಬರುವ ಮಾವುತ ಮತ್ತು ಕಾವಾಡಿಗರ ಕುಟುಂಬಕ್ಕೆ ಈಗಾಗಲೇ ತಾತ್ಕಾಲಿಕ ವಾಸ್ತವ್ಯಕ್ಕೆ ಜಲ ನಿರೋಧಕ ಮನೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು ಮುಂದಿನ ಎರಡು ದಿನದೊಳಗೆ ಪೂರ್ಣಗೊಳ್ಳಲಿದೆ’ ಎಂದರು.

ವೀರನಹೊಸಹಳ್ಳಿ ಭೇಟಿ ಸಮಯದಲ್ಲಿ ನಾಗರಹೊಳೆ ಹುಲಿ ಯೋಜನೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮಿಕಾಂತ್‌, ಮೈಸೂರು ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ನದಿಮ್‌, ಮತ್ತು ಇಲಾಖೆ ಸಿಬ್ಬಂದಿ ಇದ್ದರು.

ದಸರಾ ಕಾರ್ಯಕ್ರಮದಲ್ಲಿ ಗಜಪಯಣ ಪ್ರಮುಖ ಘಟ್ಟ ಅಧಿಕಾರಿಗಳಿಂದ ಸಿದ್ಧತೆ ಪರಿಶೀಲನೆ 4 ರಿಂದ 5 ಸಾವಿರ ಭಾಗವಹಿಸುವ ಅಂದಾಜು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.