ಮೈಸೂರು: ಇಲ್ಲಿನ ಕಸಬಾ ಹೋಬಳಿಯ ಹಾಲಾಳು ಗ್ರಾಮದಲ್ಲಿ ನಟ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಕೆಲವರು ಮತ್ತೆ ವಿರೋಧ ವ್ಯಕ್ತಪಡಿಸಿರುವುದರಿಂದ, ಪೊಲೀಸ್ ರಕ್ಷಣೆಯಲ್ಲಿ ಕಾಮಗಾರಿ ನಡೆಸಲು ಸ್ಮಾರಕ ನಿರ್ಮಾಣ ಸಮಿತಿ ನಿರ್ಧರಿಸಿದೆ.
ವಾರದ ಹಿಂದೆ, ಉದ್ದೇಶಿತ ಭೂಮಿಯಲ್ಲಿ ಬೆಳೆದಿದ್ದ ಕಳೆಯನ್ನು ತೆಗೆಯಲು ಬಂದ ಕೆಲಸಗಾರರಿಗೆ ಕೆಲವರು ಅಡ್ಡಿಪಡಿಸಿದ್ದಾರೆ. ಈ ವೇಳೆ, ಹೈಕೋರ್ಟ್ನಲ್ಲಿ ಇದ್ದ ತಕರಾರು ಅರ್ಜಿ ವಜಾ ಆಗಿರುವ ಆದೇಶ ಪ್ರತಿಯನ್ನು ತೋರಿಸಲಾಯಿತು. ಆದರೆ, ಆದೇಶ ಪ್ರತಿ ಇಂಗ್ಲಿಷ್ನಲ್ಲಿ ಇದ್ದುದ್ದರಿಂದ ತಮಗೆ ಅರ್ಥವಾಗುತ್ತಿಲ್ಲ ಎಂದು ಹೇಳಿ, ಕೆಲಸಗಾರರನ್ನು ವಾಪಸ್ ಕಳುಹಿಸಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸ್ಮಾರಕ ನಿರ್ಮಾಣ ಸಮಿತಿಯ ಸದಸ್ಯ ಹಾಗೂ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ, ‘ಒಂದು ವಾರದ ಹಿಂದೆ ಕೆಲವರು ತಡೆ ಮಾಡಿದ್ದು ನಿಜ. ಈಗ ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದು ಪೊಲೀಸ್ ರಕ್ಷಣೆಯಲ್ಲಿ ಸದ್ಯದಲ್ಲೇ ಕಾಮಗಾರಿ ಆರಂಭಿಸಲಾಗುವುದು’ ಎಂದು ತಿಳಿಸಿದರು.
ಸ್ಮಾರಕ ನಿರ್ಮಾಣಕ್ಕೆ ಮೈಸೂರು ಕಸಬಾ ಹೋಬಳಿ ಹಾಲಾಳು ಗ್ರಾಮದ ಸರ್ವೇ ನಂ 8ರಲ್ಲಿ ಐದು ಎಕರೆ ಸರ್ಕಾರಿ ಜಮೀನನ್ನು ರಾಜ್ಯ ಕಂದಾಯ ಇಲಾಖೆ ಮಂಜೂರು ಮಾಡಿತ್ತು. ಈ ಮಂಜೂರಾತಿ ಕುರಿತಂತೆ ಜಯಪುರ ಹೋಬಳಿಯ ಉದ್ಬೂರು ಗ್ರಾಮದ ಮಹದೇವಪ್ಪ ಸೇರಿದಂತೆ ಐವರು ತಕರಾರು ತೆಗೆದಿದ್ದರು. ಈ ವ್ಯಾಜ್ಯ ಕೋರ್ಟ್ ಮೆಟ್ಟಿಲೇರಿತ್ತು. ಇದರಿಂದಾಗಿ ಮೈಸೂರಿನ ನಾಲ್ಕನೇ ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎಫ್ಸಿ ನ್ಯಾಯಾಲಯ ಕಾಮಗಾರಿ ಮುಂದುವರಿಕೆಗೆ ತಡೆ ನೀಡಿತ್ತು. ಈ ತಡೆಯಾಜ್ಞೆ ತೆರವುಗೊಳಿಸುವಂತೆ ಕೋರಿ ರಾಜ್ಯ ಕಂದಾಯ ಇಲಾಖೆ ಕಾರ್ಯದರ್ಶಿ ಸೇರಿದಂತೆ ಮೈಸೂರು ಜಿಲ್ಲಾಡಳಿತ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಏಪ್ರಿಲ್ 12ರಂದು ತಡೆಯಾಜ್ಞೆಯನ್ನು ತೆರವುಗೊಳಿಸಿತ್ತು. ಈ ಹಿನ್ನೆಲೆಯಲ್ಲಿ, ಸ್ಮಾರಕ ಕಾಮಗಾರಿಗಾಗಿ ಕೆಲಸಗಾರರ ತಂಡ ಸ್ಥಳಕ್ಕೆ ತೆರಳಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.