ಮೈಸೂರು: ‘ಸಹಾಸ್ರಾರು ವರ್ಷಗಳಿಂದಲೂ ಕಾಪಾಡಿಕೊಂಡು ಬಂದಿರುವ ಸೌಹಾರ್ದ–ಸಾಮರಸ್ಯವನ್ನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ದೇಶದ ನಾಗರಿಕರ ಮುಂದಿದೆ’ ಎಂದು ಚಿತ್ರದುರ್ಗದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ಕಲ್ಯಾಣಗಿರಿ ನಗರದ ಡಾ.ರಾಜಕುಮಾರ್ ರಸ್ತೆಯ ಕಲ್ಯಾಣ ಲಕ್ಷ್ಮಿವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ನಡೆದ ಲಕ್ಷದೀಪೋತ್ಸವ, ಲಕ್ಷ್ಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಾಮರಸ್ಯವಿದ್ದರೆ ಮಾತ್ರ ಸಂವಿಧಾನದ ಆಶಯಗಳು ಮುಂದುವರಿಯಲು, ಪ್ರಜಾಸತ್ತೆ ಉಳಿಯಲು ಹಾಗೂ ದೇಶದ ಅಭಿವೃದ್ಧಿಯಾಗಲು ಸಾಧ್ಯ. ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಲ್ಲಿ ಸಂದೇಶವನ್ನು ಕೊಡುವ ಪ್ರಯತ್ನ ಮಾಡಬೇಕಾಗಿದೆ’ ಎಂದರು.
ಕಲ್ಯಾಣ ಲಕ್ಷ್ಮಿವೆಂಕಟರಮಣ ಸ್ವಾಮಿ ದೇವಸ್ಥಾನದ ಸಂಸ್ಥಾಪಕ ಎಚ್.ಜಿ.ಗಿರಿಧರ್ ಮಾತನಾಡಿದರು.
ಭಕ್ತರಿಗೆ 25 ಲೀಟರ್ ನೀರಿನ ಕ್ಯಾನ್ಗಳು ಹಾಗೂ ಪ್ರಸಾದ ವಿತರಿಸಲಾಯಿತು.
ಮೇಯರ್ ಶಿವಕುಮಾರ್, ಆರ್ಎಸ್ಎಸ್ ಪ್ರಾಂತ್ಯ ಕಾರ್ಯಕಾರಿ ಸದಸ್ಯ ವೆಂಕಟರಾಮ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಟಿ.ಎಸ್.ಶ್ರೀವತ್ಸ, ಬಿಜೆಪಿ ಮುಖಂಡರಾದ ಎಚ್.ವಿ.ರಾಜೀವ್, ಡಾ.ಅನಿಲ್ ಥಾಮಸ್, ಜೋಗಿ ಮಂಜು, ಜಯರಾಮ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.