ADVERTISEMENT

ವೀರ ಸಾವರ್ಕರ್ ವಿರುದ್ಧದ ಅಪಪ್ರಚಾರ ಅಕ್ಷಮ್ಯ: ಬಿಎಸ್‌ವೈ

ಸಾವರ್ಕರ್‌ ರಥಯಾತ್ರೆ l ವಿರೋಧಿಗಳ ವಿರುದ್ಧ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2022, 19:31 IST
Last Updated 23 ಆಗಸ್ಟ್ 2022, 19:31 IST
ಮೈಸೂರಿನಲ್ಲಿ ‘ಸಾವರ್ಕರ್‌ ರಥಯಾತ್ರೆ’ಗೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಕೇಸರಿ ಬಾವುಟ ತೋರಿ ಮಂಗಳವಾರ ಚಾಲನೆ ನೀಡಿದರು. ಸಚಿವರಾದ ಎಸ್‌.ಟಿ.ಸೋಮಶೇಖರ್, ಕೆ.ಸಿ.ನಾರಾಯಣಗೌಡ ಇದ್ದರು
ಮೈಸೂರಿನಲ್ಲಿ ‘ಸಾವರ್ಕರ್‌ ರಥಯಾತ್ರೆ’ಗೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಕೇಸರಿ ಬಾವುಟ ತೋರಿ ಮಂಗಳವಾರ ಚಾಲನೆ ನೀಡಿದರು. ಸಚಿವರಾದ ಎಸ್‌.ಟಿ.ಸೋಮಶೇಖರ್, ಕೆ.ಸಿ.ನಾರಾಯಣಗೌಡ ಇದ್ದರು   

ಮೈಸೂರು: ‘ಚಿಲ್ಲರೆ ರಾಜಕಾರಣಕ್ಕಾಗಿ ಸ್ವಾತಂತ್ರ್ಯ ವೀರ ಸಾವರ್ಕರ್ ವಿರುದ್ಧದ ಅಪಪ್ರಚಾರ ಅಕ್ಷಮ್ಯ.ವಿರೋಧಿಸುವವರು ಮೊದಲು ಬಸವಣ್ಣನವರ ವಚನಗಳನ್ನು ಓದಿಕೊಳ್ಳಲಿ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ನಗರದ ಅರಮನೆ ಸಮೀಪದ ಮಂಗಳವಾರ ‘ಸಾವರ್ಕರ್‌ ರಥ ಯಾತ್ರೆ’ಗೆ ಚಾಲನೆ ನೀಡಿದ ಅವರು, ‘ಇವನಾರವ ಎನ್ನದೇ ಸಾವರ್ಕರ್ ನಮ್ಮವ ಎಂದು ಎಲ್ಲರೂ ಹೇಳಬೇಕು’ ಎಂದು ಅಭಿಪ್ರಾಯಪಟ್ಟರು.

‘ಸ್ವಾತಂತ್ರ್ಯ ಹೋರಾಟದೊಂದಿಗೆ ಹಿಂದೂ ಧರ್ಮದ ಸುಧಾರಣೆ, ರಕ್ಷಣೆ ಮಾಡಿದ ಸಾವರ್ಕರ್ ಅವರನ್ನು ಇಂದಿರಾ ಗಾಂಧಿ, ರಾಮ ಮನೋಹರ ಲೋಹಿಯಾ, ಸರ್ವಪಲ್ಲಿ ರಾಧಾಕೃಷ್ಞನ್ ಸೇರಿದಂತೆ ಮಹಾನ್ ನಾಯಕರು ಹೊಗಳಿದ್ದಾರೆ’ ಎಂದರು.

ADVERTISEMENT

‘ಭಾರತದ ಅಪ್ರತಿಮ ಸುಪುತ್ರ, ವೀರ ಸಾವರ್ಕರ್‌ ಎಂದು ಕರೆದಿದ್ದಇಂದಿರಾಗಾಂಧಿಯವರು, ಸಾವರ್ಕರ್‌ ಸ್ಮಾರಕ ನಿಧಿಗೆ ವೈಯಕ್ತಿಕವಾಗಿ ದೇಣಿಗೆ ನೀಡಿದ್ದರು. ಅಂಚೆ ಚೀಟಿ ಬಿಡುಗಡೆಗೊಳಿಸಿದ್ದರು. ಇಂದಿನ ಯುವಕರಿಗೆ ಸಾವರ್ಕರ್‌ ಬಗ್ಗೆ ಅರಿವಿಲ್ಲ. ಅದನ್ನೇ ಬಂಡವಾಳ ಮಾಡಿಕೊಂಡು ದಾರಿ ತಪ್ಪಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ನಾಯಕರ ಹೆಸರು ಪ್ರಸ್ತಾಪಿಸದೇ ಟೀಕಿಸಿದರು.

‘ಭಾರತ ವಿಶ್ವಗುರುವಾಗುವತ್ತ ದಾಪುಗಾಲಿಡುತ್ತಿದೆ. ಜೊತೆಗೆ ಅನೇಕ ಸವಾಲುಗಳನ್ನೂ ಎದುರಿಸುತ್ತಿದೆ. ಈ ಪರ್ವ ಕಾಲದಲ್ಲಿ ಕೆಲವರು ದೇಶದ ಮೌಲ್ಯಗಳಿಗೆ ಮಸಿ ಬಳಿಯುತ್ತಿದ್ದಾರೆ’ ಎಂದು ವಿಷಾದಿಸಿದರು.

‘ಎಂಟು ದಿನಗಳ ರಥಯಾತ್ರೆಯು ಅಪ್ರತಿಮ ವೀರನ ಜೀವನ ಮೌಲ್ಯ, ದೇಶ ಪ್ರೇಮದ ಸಂದೇಶವನ್ನು ಸಾರಲಿದೆ. ಚಾರಿತ್ರಿಕ ತಪ್ಪುಗಳನ್ನು ಸರಿಪಡಿಸಲಿದೆ. ದೇಶದ್ರೋಹಿಗಳಿಗೂ ಎಚ್ಚರಿಕೆ ನೀಡಲಿದೆ’ ಎಂದರು.

ರಥಯಾತ್ರೆಗೆ ಕೇಸರಿ ಬಾವುಟ ತೋರಿದರು. ಸಚಿವರಾದ ಕೆ.ಸಿ.ನಾರಾಯಣಗೌಡ, ಎಸ್.ಟಿ.ಸೋಮ ಶೇಖರ್, ಸಾರ್ವಕರ್ ಪ್ರತಿ ಷ್ಠಾನದ ಅಧ್ಯಕ್ಷೆ ಯಶಸ್ವಿನಿ, ರಥಯಾತ್ರೆ ಸಂಚಾಲಕ ರಜತ್‌ ಇದ್ದರು.

ಮೂರು ಜಿಲ್ಲೆಗಳಲ್ಲಿ ಸಂಚಾರ: ವಿ.ಡಿ.ಸಾವರ್ಕರ್‌ ಅವರ ಸ್ವಾತಂತ್ರ್ಯ ಹೋರಾಟ, ತ್ಯಾಗವನ್ನು ಜನರಿಗೆ ಪರಿಚಯಿಸಲು ರಥಯಾತ್ರೆ ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಸಂಚರಿಸಲಿದೆ. 24ರಂದು ಎಚ್‌.ಡಿ.ಕೋಟೆ, ಸರಗೂರು, 25, 26ರಂದು ನಂಜನಗೂಡು, ಚಾಮರಾಜನಗರ ಜಿಲ್ಲೆ, 27ರಿಂದ 29ರವರೆಗೆ ಮಂಡ್ಯ ಜಿಲ್ಲೆಯಲ್ಲಿ ಯಾತ್ರೆ ನಡೆಯಲಿದೆ. 30ರಂದು ಮೈಸೂರಿನಲ್ಲಿ ಸಮಾರೋಪಗೊಳ್ಳಲಿದೆ.

ಧರ್ಮ– ದೇಶದ ಪರಿಕಲ್ಪನೆ ಇಲ್ಲದವರು ಸಾವರ್ಕರ್‌ ಅವ ರನ್ನು ಟೀಕಿಸುತ್ತಾರೆ. ಸಿದ್ದರಾಮಯ್ಯ ಇದೇ ರೀತಿ ಮುಂದುವರಿದರೆ ಜನರು ಪಾಠ ಕಲಿಸಲಿದ್ದಾರೆ

– ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ

‘ವಿಚಾರ ಭಾವನೆ, ನಂಬಿಕೆಯದ್ದು’

‘ಸಿದ್ದರಾಮಯ್ಯ ಅವರು ಸಮಾಜವಾದಿ ಚಿಂತನೆಯಿಂದ ಬಂದವರು. ದೇವರು– ದಿಂಡರು, ರಾಷ್ಟ್ರವನ್ನು ನಂಬದ ಅವರೊಬ್ಬ ನಾಸ್ತಿಕವಾದಿ ಕಾಂಗ್ರೆಸ್ಸಿಗ. ಸಾವರ್ಕರ್‌ ಹೋರಾಟ, ರಾಷ್ಟ್ರಾಭಿಮಾನ ಪ್ರಶ್ನಿಸುತ್ತಾರೆ. ಅವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಪ್ರಶ್ನಿಸಿದರು.

ಮಂಗಳವಾರ ಮಾತನಾಡಿದ ಅವರು, ‘ಮಾಂಸ ತಿಂದು ದೇವಸ್ಥಾನಕ್ಕೆ ಹೋದರೆ ಏನು ತಪ್ಪು ಎನ್ನುವ ಮೂಲಕ ಸಿದ್ದರಾಮಯ್ಯ ತಮ್ಮ ಚಿಂತನೆ ಹರಿಯಬಿಟ್ಟಿದ್ದಾರೆ. ಪ್ರಶ್ನೆ ಅದಲ್ಲ. ಇದು ಭಾವನೆ ಮತ್ತು ನಂಬಿಕೆಯ ವಿಚಾರ’ ಎಂದರು. ‘ಸಾವರ್ಕರ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಅವರಿಂದ ಗಮನ ಬೇರೆ ಕಡೆ ಸೆಳೆಯಲು ಈ ರೀತಿ ಚರ್ಚೆ ಆರಂಭಿಸಿದ್ದಾರೆ. ತಮ್ಮ ಅಸ್ತಿತ್ವ ತೋರಿ ಸಲು ಈ ರೀತಿ ಮಾನಸಿಕತೆ ಪ್ರದರ್ಶಿಸುತ್ತಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.