ADVERTISEMENT

ಮೈಸೂರು: ‘ಆಮೆ’ ವೇಗದಲ್ಲಿ ‘ನಂದಿ’ ಮಾರ್ಗ ದುರಸ್ತಿ!

ಎಂ.ಮಹೇಶ
Published 17 ಮೇ 2025, 4:19 IST
Last Updated 17 ಮೇ 2025, 4:19 IST
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿನ ‘ನಂದಿ’ ಮಾರ್ಗದ ಕಾಮಗಾರಿ ಕುಂಟುತ್ತಾ ಸಾಗಿದೆ
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿನ ‘ನಂದಿ’ ಮಾರ್ಗದ ಕಾಮಗಾರಿ ಕುಂಟುತ್ತಾ ಸಾಗಿದೆ   

ಮೈಸೂರು: ಇಲ್ಲಿನ ವಿಶ್ವವಿಖ್ಯಾತ ಚಾಮುಂಡಿಬೆಟ್ಟದಲ್ಲಿ ಸುರಿದ ಭಾರಿ ಮಳೆಯಿಂದಾಗಿ ‘ನಂದಿ’ ವಿಗ್ರಹದ ಸಂಪರ್ಕ ರಸ್ತೆಯಲ್ಲಿ ಆಗಿದ್ದ ಭೂಕುಸಿತದ ದುರಸ್ತಿ ಕಾರ್ಯ ಮೂರೂವರೆ ವರ್ಷ ಕಳೆದರೂ ಪೂರ್ಣಗೊಂಡಿಲ್ಲ.

ಜೂನ್‌ಗೆ ಮುಂಗಾರು ಮಳೆಗಾಲ ಆರಂಭವಾಗುತ್ತಿದ್ದು, ಆ ವೇಳೆಗೂ ಕಾಮಗಾರಿ ಪೂರ್ಣಗೊಳ್ಳುವುದು ಅನುಮಾನ ಎಂಬಂತಹ ಸ್ಥಿತಿ ಇದೆ. ಕಾಮಗಾರಿಯು ಆಮೆವೇಗದಲ್ಲಿ ನಡೆಯುತ್ತಿರುವುದು ಇದಕ್ಕೆ ಕಾರಣವಾಗಿದೆ. ಅಲ್ಲದೇ, ಮೇಲುಸ್ತುವಾರಿಯ ಕೊರತೆಯೂ ಕಂಡುಬಂದಿದೆ. ಜನಪ್ರತಿನಿಧಿಗಳಾಗಲಿ, ಹಿರಿಯ ಅಧಿಕಾರಿಗಳಾಗಲಿ ಇದರತ್ತ ಗಮನ ನೀಡಿಲ್ಲ. ಗಂಭೀರವಾಗಿ ಪರಿಗಣಿಸಿಲ್ಲ. ಪರಿಣಾಮ, ಮಳೆಗಾಲದಲ್ಲಿ ಮತ್ತಷ್ಟು ಕುಸಿತ ಉಂಟಾಗುವ ಆತಂಕ ಪರಿಸರವಾದಿಗಳದಾಗಿದೆ. ಕಾಮಗಾರಿಗೆ ಮಳೆ ಅಡ್ಡಿಯಾಗುವ ಸಾಧ್ಯತೆಯೂ ಇದೆ.

ಕಾಮಗಾರಿ ಟೆಂಡರ್ ಪಡೆದಿರುವ ಗುತ್ತಿಗೆದಾರರು ತ್ವರಿತವಾಗಿ ಕೆಲಸ ಮಾಡಿದ್ದರೆ ಹಾಗೂ ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ದುರಸ್ತಿ ಕಾರ್ಯ ಪೂರ್ಣಗೊಂಡು, ಆ ಭಾಗದಲ್ಲಿನ ನಂದಿ ಮಾರ್ಗವು ಸಂಚಾರಕ್ಕೆ ಮುಕ್ತಗೊಂಡು ಒಂದು ವರ್ಷವೇ ಕಳೆಯಬೇಕಾಗಿತ್ತು. ಆದರೆ, ಇನ್ನೂ ಹಲವು ತಿಂಗಳುಗಳೇ ಬೇಕಾಗಬಹುದು ಎಂಬ ಸ್ಥಿತಿ ಕಾಮಗಾರಿ ಸ್ಥಳದಲ್ಲಿ ಕಂಡುಬಂದಿತು. ನಡೆಯಬೇಕಾದ ಕೆಲಸ ಇನ್ನೂ ಸಾಕಷ್ಟಿರುವುದು ಅಲ್ಲಿನ ಕಾರ್ಮಿಕರ ಮಾತುಗಳಿಂದ ತಿಳಿದುಬಂದಿತು.

ADVERTISEMENT

2021ರ ಅಕ್ಟೋಬರ್‌ನಲ್ಲಿ ಕುಸಿತ ಸಂಭವಿಸಿತ್ತು. ಬಳಿಕ ಆ ಮಾರ್ಗದಲ್ಲಿ ಸಾರ್ವಜನಿಕರು–ಅವರ ವಾಹನ ಸಂಚಾರ ಬಂದ್‌ ಆಗಿದೆ. ರಸ್ತೆಯ ಮರುನಿರ್ಮಾಣ ಕುಂಟುತ್ತಿದೆ. ಸೂಕ್ಷ್ಮ ಸಂರಚನೆಯನ್ನು ಹೊಂದಿರುವ ಈ ಬೆಟ್ಟದಲ್ಲಿ ಸುರಕ್ಷತೆಯ ದೃಷ್ಟಿಯಿಂದಾಗಿ, ಈ ದುರಸ್ತಿ ಕಾರ್ಯವು ತ್ವರಿತವಾಗಿ ಪೂರ್ಣಗೊಳ್ಳುವುದು ಮಹತ್ವದ್ದಾಗಿದೆ. ಈ ಕಾರಣದಿಂದಾಗಿಯೇ, ದುರಸ್ತಿ ಸಂಪೂರ್ಣವಾಗುವುದು ಯಾವಾಗ ಎಂಬುದು ಜನರ ಪ್ರಶ್ನೆಯಾಗಿದೆ.

‘ನಂದಿ’ ಸಂಪರ್ಕ ರಸ್ತೆಯಲ್ಲಿ ಭೂಕುಸಿತವಾದ ಕೆಲವೇ ದಿನಗಳಲ್ಲಿ, ಕುಸಿತದ ಸ್ಥಳದಿಂದ 50 ಮೀಟರ್‌ನಷ್ಟು ರಸ್ತೆ ಬಿರುಕು ಬಿಟ್ಟು ಮೂರು ಕಡೆ ಕುಸಿದಿತ್ತು. ಸದ್ಯ, ಹೆಚ್ಚಿನ ಪ್ರಮಾಣದಲ್ಲಿ ಕುಸಿತ ಉಂಟಾಗಿದ್ದ ಸ್ಥಳದಲ್ಲಿ ದುರಸ್ತಿ ನಡೆಯುತ್ತಿದೆ. ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಕಾರ್ಯವು ಇನ್ನೂ ಪ್ರಗತಿಯಲ್ಲಿದೆ. ಅದಕ್ಕಿಂತ ಮುಂದೆ, ಕಲ್ಲುಗಳನ್ನು ಜೋಡಿಸಿ ಕಬ್ಬಿಣದ ಜಾಲರಿಯನ್ನು ಅಳವಡಿಸಿ ಮತ್ತೊಂದು ತಡೆಗೋಡೆ ಕಟ್ಟುವ ಕೆಲಸ ನಡೆಯುತ್ತಿದೆ. 

ಪ್ರಾಯೋಗಿಕವಾಗಿ ಕೆಲವು ತೊಡಕುಗಳಿವೆ. ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು ಕಾಮಗಾರಿಯು 2–3 ತಿಂಗಳಲ್ಲಿ ಪೂರ್ಣಗೊಳ್ಳಲಿದೆ
ಜಿ.ಕೆ. ರೇವಣ್ಣ ಎಇ ಲೋಕೋಪಯೋಗಿ ಇಲಾಖೆ
ಹಲವು ಸವಾಲುಗಳಿವೆ...
₹ 9.90 ಕೋಟಿ ಮೊತ್ತದ ಕಾಮಗಾರಿಯನ್ನು ಚೆನ್ನೈ ಮೂಲದ ಗುತ್ತಿಗೆದಾರರು ಟೆಂಡರ್ ಮೂಲಕ ಪಡೆದಿದ್ದಾರೆ. 350 ಮೀಟರ್ ರಸ್ತೆ ಮರು ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ಆ ರಸ್ತೆಯು ಕಿರಿದಾಗಿರುವುದರಿಂದ ಹೆಚ್ಚಿನ ವಾಹನಗಳನ್ನು ಬಳಸುವುದು ಕಷ್ಟವಾಗುತ್ತಿದೆ. ಏಕಮುಖವಾಗಿ ಮಾತ್ರವೇ ಸಂಚರಿಸಬೇಕು. ವಾಹನ ರಿವರ್ಸ್‌ ತೆಗೆದುಕೊಳ್ಳುವುದು ಸರಕು–ಸಾಮಗ್ರಿಗಳನ್ನು ಸಾಗಿಸುವುದು ಸವಾಲಿನ ಕೆಲಸ. ಆದ್ದರಿಂದ ವಿಳಂಬ ಆಗುತ್ತಿದೆ. ಗುತ್ತಿಗೆದಾರರಿಗೆ 6 ಬಾರಿ ನೋಟಿಸ್ ಕೂಡ ಜಾರಿಗೊಳಿಸಲಾಗಿದೆ. ಹಂತ ಹಂತವಾಗಿ ಕೆಲಸ ಮಾಡಲಾಗುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ಈ ನಡುವೆ ಮೊದಲಿಗೆ ಸಂಭವಿಸಿದ್ದ ಕುಸಿತದ ಸ್ಥಳದಿಂದ ಸಮೀಪದಲ್ಲಿಯೇ 50 ಮೀಟರ್‌ನಷ್ಟು ರಸ್ತೆ ಬಿರುಕು ಬಿಟ್ಟು ಮೂರು ಕಡೆ ಕುಸಿದಿದ್ದ ರಸ್ತೆಯನ್ನೂ ದುರಸ್ತಿಗೆ ಸೇರಿಸಿಕೊಳ್ಳಲಾಗಿದೆ. ಅದಕ್ಕೆ ಹೆಚ್ಚುವರಿಯಾಗಿ ₹ 3 ಕೋಟಿ ಒದಗಿಸಲಾಗಿದೆ. ಇದರಿಂದಾಗಿ ಯೋಜನಾ ಮೊತ್ತವು ಏರಿಕೆಯಾಗಿದೆ.
ಪ್ರಗತಿ ಪರಿಶೀಲಿಸಿಲ್ಲ!
ಭೂಕುಸಿತ ನಡೆದದ್ದು 2021ರಲ್ಲಾದರೆ ದುರಸ್ತಿ ಕಾಮಗಾರಿ ಶುರುವಾಗಿದ್ದ 2022ರ ಡಿಸೆಂಬರ್‌ನಲ್ಲಿ. ಮತ್ತೊಂದು ಮಳೆಗಾಲ ಬರುತ್ತಿದೆ. ಆಗ ಕಾಮಗಾರಿಯನ್ನು ವೇಗವಾಗಿ ನಡೆಸಲು ಸಾಧ್ಯವಾಗುವುದಿಲ್ಲ. ಭಾರಿ ಮಳೆಯಾದ ಪಕ್ಷದಲ್ಲಿ ಮಣ್ಣು ಜರುಗುವ ಹಾಗೂ ಭೂಕುಸಿತ ಆಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ’ ಎನ್ನುತ್ತಾರೆ ಪರಿಸರವಾದಿಗಳು. ಲೋಕೋಪಯೋಗಿ ಇಲಾಖೆಗೆ ಕಾಮಗಾರಿಯ ಮೇಲುಸ್ತುವಾರಿ ವಹಿಸಲಾಗಿದೆ. ವರ್ಗಾವಣೆ ಮೊದಲಾದ ಕಾರಣಗಳಿಂದಾಗಿ ಅಧಿಕಾರಿಗಳು ಪದೇ ಪದೇ ಬದಲಾಗುತ್ತಿರುವುದು ಕೂಡ ಪರಿಣಾಮ ಬೀರಿದೆ. ಜಿಲ್ಲಾಡಳಿತವಾಗಲಿ ಹಿರಿಯ ಅಧಿಕಾರಿಗಳಾಗಲಿ ಪ್ರಗತಿ ಪರಿಶೀಲಿಸುವ ಗೋಜಿಗೆ ಹೋಗುತ್ತಿಲ್ಲ! ಜನಪ್ರತಿನಿಧಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.