ADVERTISEMENT

ಶ್ರೀರಂಗಪಟ್ಟಣ: ಪರಿಶಿಷ್ಟರಿಗೆ ಕ್ಷೌರ ನಿರಾಕರಣೆ, ಮುಚ್ಚಿದ ಅಂಗಡಿಗಳು!

ಶ್ರೀರಂಗಪಟ್ಟಣ ತಾಲ್ಲೂಕು ಮಹದೇವಪುರದಲ್ಲಿ ಅಸ್ಪೃಶ್ಯತೆ ಆಚರಣೆ: ದೂರು

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 19:29 IST
Last Updated 24 ನವೆಂಬರ್ 2022, 19:29 IST
ಶ್ರೀರಂಗಪಟ್ಟಣ ತಾಲ್ಲೂಕಿನ ಮಹದೇವಪುರ ಗ್ರಾಮದಲ್ಲಿ ಕ್ಷೌರದ ಅಂಗಡಿ ಮುಚ್ಚಿದೆ
ಶ್ರೀರಂಗಪಟ್ಟಣ ತಾಲ್ಲೂಕಿನ ಮಹದೇವಪುರ ಗ್ರಾಮದಲ್ಲಿ ಕ್ಷೌರದ ಅಂಗಡಿ ಮುಚ್ಚಿದೆ   

ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ತಮಗೆ ಕ್ಷೌರ ಮಾಡುವಂತೆ ಪರಿಶಿಷ್ಟರು ಕೇಳಿದ ಕಾರಣಕ್ಕೆ ತಾಲ್ಲೂಕಿನ ಮಹದೇವಪುರ ಹಾಗೂ ಅಕ್ಕಪಕ್ಕದ ಊರುಗಳ 10 ಕ್ಷೌರದ ಅಂಗಡಿಗಳನ್ನು ಕ್ಷೌರಿಕರು ಸಾಮೂಹಿಕವಾಗಿ ಬಂದ್‌ ಮಾಡಿದ್ದಾರೆ.

ಮಹದೇವಪುರದ 7, ಅಕ್ಕಪಕ್ಕದ ಊರುಗಳಲ್ಲಿನ 3 ಅಂಗಡಿಗಳು ಕಳೆದ 20 ದಿನಗಳಿಂದ ಮುಚ್ಚಿವೆ. ಇದರಿಂದಾಗಿ ಗ್ರಾಮದ ಜನರು ಕ್ಷೌರಕ್ಕಾಗಿ ಅರಕೆರೆ, ಮಂಡ್ಯಕೊಪ್ಪಲು ವೃತ್ತ ಹಾಗೂ ಪಟ್ಟಣ ಪ್ರದೇಶಗಳಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸಭೆಯಲ್ಲಿ ದೂರು: ತಹಶೀಲ್ದಾರ್‌ ಶ್ವೇತಾ ಎನ್‌. ರವೀಂದ್ರ ನೇತೃತ್ವದಲ್ಲಿ ನ.5ರಂದು ಕುಂದುಕೊರತೆ ಸಭೆ ನಡೆದಿತ್ತು. ಆಗ ಕೆಲವರು, ಮಹದೇವಪುರದಲ್ಲಿ ನಮಗೆ ಕ್ಷೌರ ಮಾಡುತ್ತಿಲ್ಲ ಎಂದು ದೂರು ನೀಡಿದ್ದರು. ನಂತರ ಅಲ್ಲಿನ ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್‌ ಈ ಬಗ್ಗೆ ನ.6ರಂದು ಅರಕೆರೆ ಪೊಲೀಸ್‌ ಠಾಣೆಗೆ ದೂರನ್ನೂ ನೀಡಿದ್ದರು.

ADVERTISEMENT

ಗ್ರಾಮಕ್ಕೆ ತೆರಳಿದ್ದ ಪೊಲೀಸರು ಕ್ಷೌರ ಮಾಡುವಂತೆ ಮನವೊಲಿಸಲು ಯತ್ನಿಸಿದ್ದರು. ಇದಕ್ಕೆ ಒಪ್ಪದ ಕ್ಷೌರಿಕರು ಅಂಗಡಿಗಳನ್ನೇ ಬಂದ್‌ ಮಾಡಿದ್ದಾರೆ.

‘ಮಹದೇವಪುರದ ಕ್ಷೌರಿಕರು ಚನ್ನಹಳ್ಳಿ, ಬಿದರಹಳ್ಳಿ ಗ್ರಾಮದ ಪರಿಶಿಷ್ಟರು ಬಂದರೆ ಯಾವುದೇ ತಕರಾರಿಲ್ಲದೆ ಕ್ಷೌರ ಮಾಡುತ್ತಾರೆ. ಆದರೆ, ತಮ್ಮದೇ ಊರಿನ ಪರಿಶಿಷ್ಟರಿಗೆ ನಿರಾಕರಿಸುತ್ತಿದ್ದಾರೆ. ಈ ಬಗ್ಗೆ ದೂರು ನೀಡಲಾಗಿದೆ. ಬಹಿರಂಗವಾಗಿ ಅಸ್ಪೃಶ್ಯತೆ ಆಚರಿಸುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್‌ ಆರೋಪಿಸಿದರು.

‘ನ.14ರಂದು ಗ್ರಾಮಕ್ಕೆ ಬಂದ ಸಿಪಿಐ ಪುನೀತ್‌ ಅವರು ಪರಿಶಿಷ್ಟರಿಗೆ ಕ್ಷೌರ ಮಾಡಿಸಿದ್ದರು. ಮಾರನೇ ದಿನದಿಂದ ಅಂಗಡಿಗಳು ಮತ್ತೆ ಬಂದ್ ಆಗಿವೆ’ ಎಂದರು.

‘ಡಿವೈಎಸ್ಪಿ ಸಂದೇಶಕುಮಾರ್‌ ನೇತೃತ್ವದಲ್ಲಿ ನ.23ರಂದು ಸಭೆ ನಡೆಸಲಾಗಿದ್ದು, ಕ್ಷೌರಿಕರ ಮನವೊಲಿಸುವಂತೆ ಗ್ರಾಮದ ಇತರ ವರ್ಗದವರಿಗೆ ಸೂಚಿಸಿದ್ದಾರೆ. ಇದಕ್ಕೆ ಗ್ರಾಮಸ್ಥರು ಮೂರು ದಿನ ಕಾಲಾವಕಾಶ ಕೇಳಿದ್ದಾರೆ’ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದವರು ತಿಳಿಸಿದರು.

‘ಕ್ರಮಕ್ಕೆ ಸೂಚನೆ’: ‘ದೂರು ಬಂದ ಬಳಿಕ ಗ್ರಾಮಕ್ಕೆ ತೆರಳಿ ಪರಿಶಿಷ್ಟರಿಗೆ ಕ್ಷೌರ ಮಾಡಿಸಿದ್ದೆ. ಮತ್ತೆ ಈಗ ಆ ಅಂಗಡಿಗಳು ಮುಚ್ಚಿವೆ ಎಂಬ ಮಾಹಿತಿ ಬಂದಿದೆ. ಈ ಬಗ್ಗೆ ಕ್ರಮ ವಹಿಸುವಂತೆ ಅರಕೆರೆ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ಗೆ ತಿಳಿಸಿದ್ದೇನೆ’ ಎಂದು ತಹಶೀಲ್ದಾರ್‌ ಶ್ವೇತಾ ಎನ್‌. ರವೀಂದ್ರ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.