ADVERTISEMENT

₹4.16 ಕೋಟಿ ಅನುದಾನದಲ್ಲಿ ಅಭಿವೃದ್ಧಿ

ನಾಗಾಪುರ ಗಿರಿಜನರ ರೈತ ಉತ್ಪಾದಕ ಸಂಸ್ಥೆಗೆ ಚಾಲನೆ ನೀಡಿದ ಬಿ.ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 6:29 IST
Last Updated 27 ನವೆಂಬರ್ 2020, 6:29 IST
ಹುಣಸೂರು ತಾಲ್ಲೂಕಿನ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದಲ್ಲಿ ರೈತ ಉತ್ಪಾದಕ ಸಂಸ್ಥೆ ಮತ್ತು ಹಾಲು ಉತ್ಪಾದಕರ ಸಂಸ್ಥೆಗೆ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಚಾಲನೆ ನೀಡಿದರು
ಹುಣಸೂರು ತಾಲ್ಲೂಕಿನ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದಲ್ಲಿ ರೈತ ಉತ್ಪಾದಕ ಸಂಸ್ಥೆ ಮತ್ತು ಹಾಲು ಉತ್ಪಾದಕರ ಸಂಸ್ಥೆಗೆ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಚಾಲನೆ ನೀಡಿದರು   

ಹುಣಸೂರು: ನಾಗರಹೊಳೆ ಅರಣ್ಯದಿಂದ 20 ವರ್ಷಗಳ ಹಿಂದೆ ನಾಡಿಗೆ ಬಂದ ಗಿರಿಜನರನ್ನು ಮುಖ್ಯವಾಹಿನಿಗೆ ತರಲು ನಿರಂತರ ಪ್ರಯತ್ನ ನಡೆದು ಸಕಾರಾತ್ಮಕ ಸಿಕ್ಕಿದೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.

ತಾಲ್ಲೂಕಿನ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದಲ್ಲಿ ರೈತ ಉತ್ಪಾದಕ ಸಂಸ್ಥೆ ಮತ್ತು ಹಾಲು ಉತ್ಪಾದಕ ಘಟಕದ ಫಲಾನುಭವಿಗೆ ಹಸು ವಿತರಿಸಿ ಅವರು ಮಾತನಾಡಿದರು.

ಎರಡು ದಶಕದ ಹಿಂದ ಕಾಡಿನಿಂದ ನಾಡಿಗೆ ಬಂದ ಗಿರಿಜನರಲ್ಲಿ ಭಾರಿ ಬದಲಾವಣೆ ಕಂಡುಬಂದಿದೆ. ಸಮಾಜಮುಖಿಯಾಗಿ ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತಿರುವ ಗಿರಿಜನರಿಗೆ ಕೃಷಿ ಉತ್ಪನ್ನ ಚಟುವಟಿಕೆ ನಡೆಸಲು ಕೇಂದ್ರ ಸರ್ಕಾರದಿಂದ ₹ 4.16 ಕೋಟಿ ಅನುದಾನ ನೀಡಿ ರೈತ ಉತ್ಪಾದಕ ಸಂಸ್ಥೆ ಆರಂಭಿಸಲಾಗಿದೆ ಎಂದರು.

ADVERTISEMENT

ಕಾಡಿನಿಂದ ಹೊರಬಂದ ಕುಟುಂಬ ದಲ್ಲಿ ಎರಡನೇ ಪೀಳಿಗೆ ಯುವಕರು ಕೃಷಿ ಮತ್ತು ಹೈನುಗಾರಿಕೆಯಲ್ಲಿ ಆಸಕ್ತಿ ತೋರಿರುವುದು ಅಭಿವೃದ್ಧಿಯ ಸಂಕೇತ ಎಂದರು.

ಪುನರ್ವಸತಿ ಕೇಂದ್ರದಲ್ಲಿ 280 ಕುಟುಂಬಗಳ 721 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆದಿರುವುದು ಗಮನಕ್ಕೆ ಬಂದಿದೆ. ಗಿರಿಜನರಿಗೆ ಪ್ರತ್ಯೇಕ ರೈತ ಉತ್ಪಾದಕ ಸಂಸ್ಥೆ ಮತ್ತು ಹಾಲು ಉತ್ಪಾದಕರ ಸಂಸ್ಥೆ ಆರಂಭಿಸಿ ಅದರ ಪೂರ್ಣ ಲಾಭ ಈ ಸಮುದಾಯಕ್ಕೆ ಸಿಗುವಂತೆ ಮಾಡಲು ಸರ್ಕಾರ ಆಸಕ್ತಿ ಹೊಂದಿದೆ ಎಂದರು.

ವಿತರಣೆ ಸಚಿವರು ಗಿರಿಜನ ಮಹಿಳೆಯರಿಗೆ ಹಸು ವಿತರಿಸಿದರು.

ನಾಗಾಪುರದ ಭಾರತೀಯ ಗಿರಿಜನ ಶಿಕ್ಷಣ ಸಂಸ್ಥೆಯ ನಿರ್ದೇಶಕ ಎಂ.ಬಿ.ಪ್ರಭು ಮಾತನಾಡಿ, ನಾಗಾಪುರ ಪುನರ್ವಸತಿ ಕೇಂದ್ರವನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸಬೇಕು. ಪುನರ್ವಸತಿ ಕೇಂದ್ರದ ಮನೆಯನ್ನು ಮಾಲೀಕರ ಹೆಸರಿಗೆ ವರ್ಗಾಯಿಸಬೇಕು. ಕೇಂದ್ರದಲ್ಲಿ 2008ರಲ್ಲಿ ನಿರ್ಮಿಸಿದ ಆರೋಗ್ಯ ಕೇಂದ್ರಕ್ಕೆ ದಾದಿಯರ ನೇಮಕಾತಿ ನಡೆದಿಲ್ಲ ಎಂದರು.

ಹಾಲುಮತ ಕುರುಬ ಸಮುದಾಯವನ್ನು ಪರಿಶಿಷ್ಟ ವರ್ಗಗಳ ಮೀಸಲಾತಿಗೆ ಸೇರಿಸುವುದರಿಂದ ಗಿರಿಜನರ ಮೀಸಲಾತಿ ಕಿತ್ತುಕೊಂಡಂತಾಗುತ್ತದೆ. ಸರ್ಕಾರ ಈ ಬಗ್ಗೆ ಅಧ್ಯಯನ ನಡೆಸಿ ಆದಿವಾಸಿಗಳ ಏಕತೆಗೆ ಸ್ಪಂದಿಸಲಿ ಎಂದರು.

ಶಾಸಕ ಮಂಜುನಾಥ್, ತಾಲ್ಲೂಕಿನಲ್ಲಿ ಅರ್ಧಕ್ಕೆ ನಿಂತ ವಾಲ್ಮೀಕಿ ಭವನ ನಿರ್ಮಾಣ ಕಾಮಗಾರಿಗೆ ₹1.32 ಕೋಟಿ ಬಿಡುಗಡೆಯಾಗಿದ್ದು, ಹೆಚ್ಚುವರಿಯಾಗಿ ₹ 2.13 ಕೋಟಿ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಸಲ್ಲಿಸಿದರು.

ಮಾಜಿ ಶಾಸಕರಾದ ಸಿದ್ದರಾಜು, ಶಿವಣ್ಣ, ಜಿ.ಪಂ.ಅಧ್ಯಕ್ಷೆ ಪರಿಮಳಾ ಶ್ಯಾಂ, ಜಿ.ಪಂ.ಸದಸ್ಯ ಕಟ್ಟನಾಯಕ, ರವಿಪ್ರಸನ್ನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.