ADVERTISEMENT

ಯುವ ರಾಜಕಾರಣಿಗಳಿಗೆ ಧ್ರುವನಾರಾಯಣ್ ಮಾದರಿ: ರುಷೋತ್ತಮ್‌

ಕಾಂಗ್ರೆಸ್‌ ಮುಖಂಡ ಪುರುಷೋತ್ತಮ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 7:02 IST
Last Updated 1 ಏಪ್ರಿಲ್ 2023, 7:02 IST
ಮೈಸೂರಿನ ಎಂಜಿನಿಯರುಗಳ ಸಂಸ್ಥೆಯಲ್ಲಿ ‘ಕರ್ನಾಟಕ ದಲಿತ ವೇದಿಕೆ’ ಶುಕ್ರವಾರ ಆಯೋಜಿಸಿದ್ದ ‘ಆರ್‌.ಧ್ರುವನಾರಾಯಣ ನುಡಿನಮನ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ದರ್ಶನ್ ಧ್ರುವನಾರಾಯಣ, ಪುರುಷೋತ್ತಮ್‌, ಕೃಷ್ಣಮೂರ್ತಿ ಚಮರಂ ಪುಷ್ಪನಮನ ಸಲ್ಲಿಸಿದರು
ಮೈಸೂರಿನ ಎಂಜಿನಿಯರುಗಳ ಸಂಸ್ಥೆಯಲ್ಲಿ ‘ಕರ್ನಾಟಕ ದಲಿತ ವೇದಿಕೆ’ ಶುಕ್ರವಾರ ಆಯೋಜಿಸಿದ್ದ ‘ಆರ್‌.ಧ್ರುವನಾರಾಯಣ ನುಡಿನಮನ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ದರ್ಶನ್ ಧ್ರುವನಾರಾಯಣ, ಪುರುಷೋತ್ತಮ್‌, ಕೃಷ್ಣಮೂರ್ತಿ ಚಮರಂ ಪುಷ್ಪನಮನ ಸಲ್ಲಿಸಿದರು   

ಮೈಸೂರು: ‘ರಾಜಕೀಯ ಜೀವನದಲ್ಲಿ ಒಂದೂ ಕಪ್ಪು ಚುಕ್ಕೆ ಇಲ್ಲದೇ ಜನರ ಧ್ವನಿಯಾದವರು ಧ್ರುವನಾರಾಯಣ. ರಾಜಕಾರಣ ಕ್ಷೇತ್ರವನ್ನು ಆಯ್ದುಕೊಳ್ಳುವವರಿಗೆ ಮಾದರಿ ವ್ಯಕ್ತಿತ್ವ ಅವರದ್ದಾಗಿದೆ’ ಎಂದು ಕಾಂಗ್ರೆಸ್‌ ಮುಖಂಡ ಪುರುಷೋತ್ತಮ್‌ ಹೇಳಿದರು.

ನಗರದ ಎಂಜಿನಿಯರುಗಳ ಸಂಸ್ಥೆಯಲ್ಲಿ ‘ಕರ್ನಾಟಕ ದಲಿತ ವೇದಿಕೆ’ ಆಯೋಜಿಸಿದ್ದ ಆರ್‌.ಧ್ರುವನಾರಾಯಣ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕೇವಲ ಒಂದು ಜಾತಿಗೆ ಸೀಮಿತರಾಗದೇ ಎಲ್ಲ ವರ್ಗದ ಜನರ ಏಳಿಗೆಗೆ ಶ್ರಮಿಸಿದರು. ಭ್ರಷ್ಟಾಚಾರವನ್ನು ಎಂದೂ ನಡೆಸಲಿಲ್ಲ. ಚುನಾವಣೆಯಲ್ಲಿ ಸೋತರೂ ಪ್ರವಾಸ ಮಾಡಿ ಕಾರ್ಯಕರ್ತರಿಗೆ ಸ್ಫೂರ್ತಿ ತುಂಬಿದ್ದರು’ ಎಂದರು.

‘ರಾಜಕೀಯ ಜೀವನ ಸಾರ್ಥಕವಾಗಬೇಕೆಂದರೆ ಧ್ರುವ ಅವರ ದಾರಿ ನಮ್ಮದಾಗಬೇಕು. ಶೋಷಿತ ಸಮುದಾಯಗಳು ಒಂದಾಗಬೇಕು ಎನ್ನುತ್ತಿದ್ದ ಅವರು, ಸೈದ್ಧಾಂತಿಕವಾಗಿ ರಾಜಕೀಯಕ್ಕೆ ಶಕ್ತಿ ಕೊಡಬೇಕು ಎಂದು ಪ್ರತಿಪಾದಿಸುತ್ತಿದ್ದರು. ದೊಡ್ಡ ಸ್ಥಾನಕ್ಕೇರುವ ಕನಸು ಕಂಡಿದ್ದ ನಮ್ಮೆಲ್ಲರಿಗೂ ಅವರ ಹಠಾತ್ ನಿಧನ ಶೂನ್ಯ ಮೂಡಿಸಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಚಾಮರಾಜನಗರ ಅಭಿವೃದ್ಧಿ ಪಥದಲ್ಲಿ ಸಾಗಿದ್ದರೆ ಧ್ರುವನಾರಾಯಣ ಕೊಡುಗೆ ಅನನ್ಯ. ಶಿಕ್ಷಣ, ಕುಡಿಯುವ ನೀರು, ಮೂಲಸೌಕರ್ಯದಲ್ಲಿ ಮುಂದಿದೆ. ಅವರ ಪುತ್ರ ದರ್ಶನ್ ಕೂಡ ತಂದೆಯ ಮಾರ್ಗದಲ್ಲೇ ಸಾಗಲಿದ್ದಾರೆ. ಅವರಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡಬೇಕು’ ಎಂದರು.

ಮುಖಂಡರಾದ ಮಂಜುಳಾ ಮಂಜುನಾಥ್‌, ಜವರಪ್ಪ, ಕೃಷ್ಣಮೂರ್ತಿ ಚಮರಂ, ಅಮ್ಮ ರಾಮಚಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.