ಹುಣಸೂರು: ಇಲ್ಲಿನ ಉಪವಿಭಾಗ ಸಾರ್ವಜನಿಕ ಆಸ್ಪತ್ರೆಯ ಡಯಾಲಿಸಿಸ್ ಘಟಕದಲ್ಲಿನ ಯಂತ್ರಗಳ ನಿರ್ವಹಣೆ ಹಾಗೂ ತಜ್ಞ ವೈದ್ಯರ ಕೊರತೆಯಿಂದ ರೋಗಿಗಳು ಪರದಾಡುತ್ತಿದ್ದಾರೆ.
ಡಯಾಲಿಸಿಸ್ ಘಟಕದ ನಿರ್ವಹಣೆಗೆ ಸರ್ಕಾರದ ಅನುದಾನ ಕೊರತೆ ತೊಡಕಾಗಿದೆ.
‘ಘಟಕದಲ್ಲಿ ಸ್ವಚ್ಛತೆಯಿದೆ, ಆದರೆ ಮೂತ್ರಪಿಂಡ ತಜ್ಞರು ಇಲ್ಲ. ಗುತ್ತಿಗೆ ಪಡೆದ ಕಂಪನಿಯವರು ಸರ್ಕಾರದಿಂದ ಹಣ ಪಡೆದರೂ ನಿರ್ವಹಣೆ ಮಾಡಲು ಮುಂದಾಗಿಲ್ಲ’ ಎಂದು ರೋಗಿ ಸಂದೀಪ್ ಆರೋಪಿಸಿದರು.
‘ಮೂರು ವರ್ಷಗಳಿಂದ ಮೂತ್ರಪಿಂಡ ಸಮಸ್ಯೆಗೆ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದೇನೆ. ಘಟಕದಲ್ಲಿ ಎಲ್ಲವೂ ಸರಿಯಿದೆ ಎನ್ನಲಾಗದು. ಇರುವ ವ್ಯವಸ್ಥೆಯಲ್ಲಿ ಚಿಕಿತ್ಸೆ ನಡೆದಿದೆ. ಆರೋಗ್ಯ ಸಿಬ್ಬಂದಿ ಮಾಡಿದ ಎಡವಟ್ಟಿನಿಂದಾಗಿ ಎಡಗೈ ಊತ ಬಂದಿದೆ’ ಎಂದು ಅಳಲು ತೋಡಿಕೊಂಡರು.
‘ಮೂರು ವರ್ಷಗಳಿಂದ ಘಟಕದಲ್ಲಿನ ಯಂತ್ರಗಳ ಸರ್ವೀಸ್ ಆಗಿಲ್ಲ. ಆದ್ದರಿಂದ ಅವುಗಳ ಕಾರ್ಯಕ್ಷಮತೆ ಕಡಿಮೆಯಾಗಿದೆ’ ಎಂದು ರೋಗಿ ಎಂ.ಬಿ.ಪ್ರಭು ಹೇಳಿದರು.
‘ಘಟಕದ ನಿರ್ವಹಣೆಗೆ ವಿಶೇಷ ಅನುದಾನ ಇಲ್ಲ. ತುರ್ತು ಔಷಧಿ ಖರೀದಿಗೆ ಆರೋಗ್ಯ ರಕ್ಷಾ ಸಮಿತಿಯಿಂದ ತಿಂಗಳಿಗೆ ₹ 70 ಸಾವಿರ ವೆಚ್ಚ ಮಾಡಿ ರೋಗಿಗಳಿಗೆ ಬೇಕಾದ ಔಷಧಿ ವ್ಯವಸ್ಥೆ ಮಾಡಿದ್ದೇವೆ. ಮೂತ್ರಪಿಂಡ ತಜ್ಞರಿಲ್ಲದಿದ್ದರೂ ಸ್ಥಳೀಯ ತಜ್ಞರನ್ನು ನಿಯೋಜಿಸಿದ್ದೇವೆ. ಯಂತ್ರಗಳ ನಿರ್ವಹಣೆ ಸಂಬಂಧ ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಸರ್ವೇಶ್ ರಾಜೇ ಅರಸು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಸರ್ಕಾರ ಕೋವಿಡ್ ಹೊರತುಪಡಿಸಿ ಉಳಿದ ರೋಗಗಳಿಗೆ ಸಂಬಂಧಿಸಿದಂತೆ ಸರಿಯಾಗಿ ಗಮನ ನೀಡಿಲ್ಲ. ಗುತ್ತಿಗೆದಾರನಿಗೆ ಒಂದು ವರ್ಷದಿಂದ ಹಣ ಪಾವತಿಸಿಲ್ಲ. ಈ ಬಾರಿ ನಡೆಯುವ ಅಧಿವೇಶನದಲ್ಲಿ ಆರೋಗ್ಯ ಸಚಿವರ ಗಮನ ಸೆಳೆಯುತ್ತೇನೆ’ ಎಂದು ಶಾಸಕ ಎಚ್.ಪಿ. ಮಂಜುನಾಥ್
ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.